ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಸಮೀಪದ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ.

ಹಾಸನ (ಜು.30) : ಜೋಕಾಲಿ ಆಡಲು ಹೋಗಿ ಬಾಲಕಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿ ವನಗೂರು ಸಮೀಪದ ಕುಣಿಕೇರಿ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಸಾನಿತಾ (9) ಮೃತಪಟ್ಟ ಬಾಲಕಿ. ಕುಣಿಕೇರಿ ಬಸವರಾಜು-ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ ನಾಲ್ಕನೇ ತರಗತಿ ಓದುತ್ತಿದ್ದು, ಇಂದು ರಜೆಯಿದ್ದ ಕಾರಣ ಮನೆಯೊಳಗೆ ಸೀರೆ ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದಳು, ಈ ವೇಳೆ ಆಯತಪ್ಪಿ ಸಾನಿತಾ ಕುತ್ತಿಗಿಗೆ ಸೀರೆ ಬಿಗಿದು ಸಾವನ್ನಪ್ಪಿದ್ದಾಳೆ. 

ಕಾರ್ಕಳ: ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಸಿಲುಕಿ 9ರ ಬಾಲಕಿ ಸಾವು

ಈ ಹಿಂದೆಯೂ ರಜಾ ದಿನಗಳಲ್ಲಿ ಮನೆಯಲ್ಲಿನ ಸೀರೆ ಬಳಸಿ ಜೋಕಾಲಿ ಮಾಡಿಕೊಂಡು ಆಟವಾಡುತ್ತಿದ್ದ ಮಗಳು. ಕೆಲವೊಮ್ಮೆ ಮರದ ರೆಂಬೆಗಳಿಗೆ ಜೋಕಾಲಿ ಕಟ್ಟಿ ಆಟವಾಡಿದ್ದೂ ಇದೆ. ಆದರೆ ವಿಧಿಯಾಟ ಮನೆಯಲ್ಲಿ ಕಟ್ಟಿದ ಸೀರೆಯ ಜೋಕಲಿ ಮಗುವಿಗೆ ಕುಣಿಕೆಯಾಗಿ ಪರಿಣಮಿಸಿರುವುದು ದುರಂತವಾಗಿದೆ.

ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ಜನರು ಈ ದೃಶ್ಯಕಂಡು ಮಮ್ಮಲ ಮರುಗಿದರು. ಮಾಹಿತಿ ತಿಳಿದು‌ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡರು.

ಮಕ್ಕಳು ಆಟವಾಡುವಾಗಲೂ ಎಚ್ಚರಿಕೆ ವಹಿಸುವುದು ಅತ್ಯಗತ್ಯ, ಪೋಷಕರು ಮಕ್ಕಳ ಬಗ್ಗೆ ನಿಗಾ ಇಟ್ಟಿರಬೇಕೆಂಬುದು ಈ ಘಟನೆಯೂ ಎಚ್ಚರಿಕೆ ನೀಡಿದೆ.