ಐದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ರಾಜ್ಯಗಳ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಸಾಂಕೇತಿಕವಾಗಿ ಬಟನ್‌ ಒತ್ತುವ ಮೂಲಕ ಡ್ರಗ್ಸ್‌ ನಾಶಗೊಳಿಸುವ ಕಾರ್ಯಕ್ಕೆ ಹಸಿರು ನಿಶಾನೆ ತೋರಲಿರುವ ಅಮಿತ್‌ ಶಾ. 

ಬೆಂಗಳೂರು(ಮಾ.24): ಕಳೆದ ವರ್ಷ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ) ಹಾಗೂ ರಾಜ್ಯ ಪೊಲೀಸರು ಡ್ರಗ್‌ ಪೆಡ್ಲರ್‌ಗಳಿಂದ ಜಪ್ತಿ ಮಾಡಿದ್ದ 9 ಸಾವಿರ ಕೋಟಿ ರು. ಮೊತ್ತದ ಸುಮಾರು 9 ಟನ್‌ಗೂ ಅಧಿಕ ಡ್ರಗ್ಸ್‌ ಅನ್ನು ನಾಶಗೊಳಿಸುವ ಕಾರ್ಯಕ್ರಮಕ್ಕೆ ಇಂದು(ಶುಕ್ರವಾರ) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಲಿದ್ದಾರೆ.

ನಗರದ ಪಂಚತಾರಾ ಹೋಟೆಲ್‌ನಲ್ಲಿ ಡ್ರಗ್ಸ್‌ ನಿರ್ಮೂಲನೆ ಸಂಬಂಧ ಎನ್‌ಸಿಬಿ ಆಯೋಜಿಸಿರುವ ದಕ್ಷಿಣ ವಲಯದ ಐದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ರಾಜ್ಯಗಳ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಅಮಿತ್‌ ಶಾ ಅವರು ಸಾಂಕೇತಿಕವಾಗಿ ಬಟನ್‌ ಒತ್ತುವ ಮೂಲಕ ಡ್ರಗ್ಸ್‌ ನಾಶಗೊಳಿಸುವ ಕಾರ್ಯಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಉತ್ತರ ಕನ್ನಡ: ₹10 ಲಕ್ಷ ಮೊತ್ತದ ಚರಸ್‌ ಮಾರಾಟಕ್ಕೆ ಯತ್ನ, ಮೂವರ ಬಂಧನ

2022ರಲ್ಲಿ ವಿವಿಧ ಡ್ರಗ್‌್ಸ ಪ್ರಕರಣಗಳಲ್ಲಿ ಎನ್‌ಸಿಬಿ ದಕ್ಷಿಣ ವಲಯ ವ್ಯಾಪ್ತಿಯ ಐದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ರಾಜ್ಯಗಳಲ್ಲಿ 3 ಸಾವಿರ ಕೋಟಿ ರು. ಮೊತ್ತದ ಡ್ರಗ್ಸ್‌ ಜಪ್ತಿಯಾಗಿದೆ. ಇನ್ನುಳಿದಂತೆ ಬೆಂಗಳೂರು ಪೊಲೀಸರು 87 ಕೋಟಿ ರು. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಹಾಗೆಯೇ ರಾಜ್ಯದ ಇತರೆ ನಗರ ಹಾಗೂ ಜಿಲ್ಲೆಗಳಲ್ಲಿ ಕೂಡ ಸಾವಿರಾರು ಕೆಜಿ ಡ್ರಗ್ಸ್‌ ಜಪ್ತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಅಮಿತ್‌ ಶಾ ಅವರು ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿರುವ ಪ್ರತಿಷ್ಠಿತ ‘ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ’ದ ಶಿವಮೊಗ್ಗ ಅಧ್ಯಯನ ಪೀಠವನ್ನು ವರ್ಚುಯಲ್‌ ಮೂಲಕ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ನಗರದದಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಪ್ರಸ್ತುತ ಕೇಂದ್ರೀಯ ವಿದ್ಯಾಲಯದಲ್ಲಿರುವ ಸುಸಜ್ಜಿತ ಕಟ್ಟಡಗಳಲ್ಲಿ ರಕ್ಷಾ ವಿಶ್ವವಿದ್ಯಾಲಯದ ಪೀಠ ಕಾರ್ಯ ನಿರ್ವಹಿಸಲಿದೆ. ಇದು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ. ರಾಷ್ಟ್ರದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವು ಪ್ರಾರಂಭಿಕವಾಗಿ ಡಿಪ್ಲೊಮಾ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಶಿಕ್ಷಣ ನೀಡಲಿದೆ. ಪೊಲೀಸ್‌ ವಿಜ್ಞಾನ ಮತ್ತು ಆಡಳಿತ, ಸೈಬರ್‌ ಸೆಕ್ಯೂರಿಟಿ, ಡಿಜಿಟಲ್‌ ಸಂಶೋಧನೆ, ರಕ್ಷಣಾ ನಿರ್ವಹಣೆ, ನ್ಯಾಯ ಅಪರಾಧಿಕರಣ, ಕರಾವಳಿ ಸಂರಕ್ಷಣೆ, ರಸ್ತೆ ಸುರಕ್ಷತೆ, ದೈಹಿಕ ಶಿಕ್ಷಣ ಸಂಬಂಧ ವಿಷಯಗಳನ್ನೂ ಒಳಗೊಂಡಂತೆ ಪದವಿ ಹಾಗೂ ಸರ್ಟಿಫಿಕೆಟ್‌ ಕೋರ್ಸ್‌ ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.