3 ಶ್ರಮಿಕ್‌ ರೈಲಲ್ಲಿ 3,605 ಕಾರ್ಮಿಕರು ತವರಿಗೆ| ನಿನ್ನೆ ಬಿಹಾರಕ್ಕೆ 1, ಉ.ಪ್ರದೇಶಕ್ಕೆ 2 ವಿಶೇಷ ರೈಲು ರವಾನೆ| ಈವ​ರೆ​ಗೆ 12 ರೈಲುಗಳಲ್ಲಿ 14,181 ಕಾರ್ಮಿಕರ ಪ್ರಯಾಣ

ಬೆಂಗಳೂರು(ಮೇ.09): ರಾಜ್ಯ ಸರ್ಕಾರ ಹಾಗೂ ನೈಋುತ್ಯ ರೈಲ್ವೆ ಸಹಯೋಗದಲ್ಲಿ ಲಾಕ್‌ಡೌನ್‌ನಿಂದ ರಾಜಧಾನಿಯಲ್ಲಿ ಸಿಲುಕಿಕೊಂಡಿದ್ದ ಹೊರರಾಜ್ಯದ 3,598 ವಲಸೆ ಕಾರ್ಮಿಕರು ಹಾಗೂ ಕಾರ್ಮಿಕರ ಏಳು ಮಕ್ಕಳು ಸೇರಿ ಒಟ್ಟು 3,605 ಮಂದಿಯನ್ನು ಶುಕ್ರವಾರ ಮೂರು ಶ್ರಮಿಕ್‌ ವಿಶೇಷ ರೈಲುಗಳಲ್ಲಿ ಅವರ ರಾಜ್ಯಗಳಿಗೆ ಕಳುಹಿಸಲಾಯಿತು.

Add Asianetnews Kannada as a Preferred SourcegooglePreferred

ಮೊದಲ ರೈಲು ಸಂಜೆ 4.25ಕ್ಕೆ ನಗರದ ಚಿಕ್ಕಬಾಣಾವರದಿಂದ 1,200 ಮಂದಿ ಕಾರ್ಮಿಕರನ್ನು ಹೊತ್ತು ಉತ್ತರ ಪ್ರದೇಶದ ಲಕ್ನೋಗೆ ತೆರಳಿತು. ಎರಡನೇ ರೈಲು ಸಂಜೆ 5.45ಕ್ಕೆ ಕೋಲಾರದ ಮಾಲೂರು ರೈಲು ನಿಲ್ದಾಣದಿಂದ 1,200 ಕಾರ್ಮಿಕರು ಹಾಗೂ ಏಳು ಮಕ್ಕಳನ್ನು ಬಿಹಾರದ ದಾನಪುರಕ್ಕೆ ಕರೆದೊಯ್ದಿತು. ಸಂಜೆ 6.55ಕ್ಕೆ ಚಿಕ್ಕಬಾಣಾವಾರ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಲಕ್ನೋಗೆ ಹೊರಟ ಮೂರನೇ ರೈಲಿನಲ್ಲಿ 1,198 ಕಾರ್ಮಿಕರು ಪ್ರಯಾಣಿಸಿದರು.

ವಲಸಿಗರ ಸಾಗಣೆಗೆ ‘ಶ್ರಮಿಕ್‌ ಸ್ಪೆಷಲ್‌’ ರೈಲು!

ಬಿಬಿಎಂಪಿ ಹಾಗೂ ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಗರದ ವಿವಿಧೆಡೆ ನೆಲೆಸಿರುವ ಈ ವಲಸೆ ಕಾರ್ಮಿರನ್ನು ಒಂದೆಡೆ ಸೇರಿಸಿ, ಪ್ರತಿಯೊಬ್ಬರ ಆರೋಗ್ಯ ಪರಿಶೀಲಿಸಿದರು. ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಬಿಎಂಟಿಸಿ ಬಸ್‌ಗಳಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಈ ಎಲ್ಲ ಕಾರ್ಮಿಕರಿಗೂ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಈವರೆಗೆ ರಾಜಧಾನಿಯಿಂದ 12 ಶ್ರಮಿಕ್‌ ವಿಶೇಷ ರೈಲುಗಳಲ್ಲಿ ಹೊರರಾಜ್ಯಗಳ ಸುಮಾರು 14,181 ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜಧಾನಿಯಿಂದ ಮತ್ತಷ್ಟುರೈಲುಗಳಲ್ಲಿ ವಲಸೆ ಕಾರ್ಮಿಕರನ್ನು ಹೊರರಾಜ್ಯಗಳಿಗೆ ಕಳುಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.