ಶನಿವಾರ ರಾಜ್ಯದಲ್ಲಿ 1374 ಮಂದಿಗೆ ಕೊರೋನಾ ಅಂಟಿದ್ದು, ಮೂವರು ಸಾವನ್ನಪ್ಪಿದ್ದಾರೆ. ಸೋಂಕಿನ ಪ್ರಮಾಣ 5 ತಿಂಗಳ ಗರಿಷ್ಠ ಹಾಗೂ ಸಾವಿನ ಪ್ರಮಾಣ 4 ತಿಂಗಳ ಗರಿಷ್ಠ. ಬಳ್ಳಾರಿಯಲ್ಲಿ ಒಬ್ಬರು, ಬೆಂಗಳೂರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. 

ಬೆಂಗಳೂರು (ಜು.17): ಶನಿವಾರ ರಾಜ್ಯದಲ್ಲಿ 1374 ಮಂದಿಗೆ ಕೊರೋನಾ ಅಂಟಿದ್ದು, ಮೂವರು ಸಾವನ್ನಪ್ಪಿದ್ದಾರೆ. ಸೋಂಕಿನ ಪ್ರಮಾಣ 5 ತಿಂಗಳ ಗರಿಷ್ಠ ಹಾಗೂ ಸಾವಿನ ಪ್ರಮಾಣ 4 ತಿಂಗಳ ಗರಿಷ್ಠ. ಬಳ್ಳಾರಿಯಲ್ಲಿ ಒಬ್ಬರು, ಬೆಂಗಳೂರಿನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. 777 ಮಂದಿ ಗುಣಮುಖರಾಗಿದ್ದಾರೆ. ಸದ್ಯ 7,296 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 28 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 4.8 ರಷ್ಟು ದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಎರಡು ಸಾವಿರ ಹೆಚ್ಚಳವಾಗಿವೆ. 

Add Asianetnews Kannada as a Preferred SourcegooglePreferred

ಹೀಗಾಗಿ, ಹೊಸ ಪ್ರಕರಣಗಳು ಶುಕ್ರವಾರಕ್ಕೆ ಹೋಲಿಸಿದರೆ ಕೇಸು ಸಂಖ್ಯೆ 397 ಏರಿಕೆಯಾಗಿವೆ. ಮೃತರ ಪೈಕಿ ಬಳ್ಳಾರಿಯ 66 ವರ್ಷ ವೃದ್ಧೆ ಒಂದು ವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜುಲೈ 15ರಂದು ಸಾವಿಗೀಡಾಗಿದ್ದಾರೆ. ಬೆಂಗಳೂರು ನಗರದಲ್ಲಿ 72 ವರ್ಷದ ವೃದ್ಧ ಕ್ಷಯರೋಗದಿಂದ ಬಳಲುತ್ತಿದ್ದು, ನಾಲ್ಕು ದಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜುಲೈ 14 ರಂದು ಸಾವಿಗೀಡಾಗಿದ್ದಾರೆ. 

Free Booster Dose: ರಾಜ್ಯದಲ್ಲಿ ಉಚಿತ 3ನೇ ಡೋಸ್‌ ಕೋವಿಡ್‌ ಲಸಿಕೆ

ಮತ್ತೊಬ್ಬ ವೃದ್ಧೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜುಲೈ 14 ರಂದು ಮೃತಪಟ್ಟಿದ್ದಾರೆ. ಕಳೆದ ಮಾರ್ಚ್‌ 11 ರಂದು ಮೂರು ಸೋಂಕಿತರ ಸಾವಾಗಿತ್ತು. ಇದಾದ ಬಳಿಕ ಈಗ ಮೂರು ಜನರು ಮೃತರಾಗಿದ್ದಾರೆ, ಹೊಸ ಪ್ರಕರಣಗಳು ಫೆ.18 ರಂದು 1,333 ವರದಿಯಾಗಿದ್ದವು. ಆ ಬಳಿಕ ಅತಿ ಹೆಚ್ಚು ಪ್ರಕರಣಗಳು ಶನಿವಾರ ಪತ್ತೆಯಾಗಿವೆ. ಹೊಸ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ ಏಳು ಸಾವಿರ ಗಡಿದಾಟಿವೆ.

ಎಲ್ಲಿ, ಎಷ್ಟು ಮಂದಿಗೆ ಸೋಂಕು?: ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1234 ಪತ್ತೆಯಾಗಿವೆ. ಉಳಿದಂತೆ ಧಾರವಾಡ 33, ಮೈಸೂರು 22, ದಕ್ಷಿಣ ಕನ್ನಡ 19, ಬಳ್ಳಾರಿ 12 ಉಳಿದಂತೆ 13 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಪತ್ತೆಯಾಗಿವೆ. 12 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.

ಮಹದೇವಪುರದಲ್ಲಿ ಮತ್ತೆ 5 ಕಂಟೈನ್ಮೆಂಟ್‌ ಜೋನ್‌: ಶನಿವಾರ ಬೆಂಗಳೂರಿನಲ್ಲಿ 1234 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5.54 ರಷ್ಟಿದೆ. 724 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಇಬ್ಬರು ಮೃತಪಟ್ಟ ವರದಿಯಾಗಿದೆ. ಅನೇಕ ತಿಂಗಳ ಬಳಿಕ ನಗರದಲ್ಲಿ ಒಂದೇ ದಿನ ಎರಡು ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ. 72 ವರ್ಷ ಪುರುಷ ಹಾಗೂ 65 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಗರದಲ್ಲಿ ಸದ್ಯ 6704 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 39 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18,184 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1692 ಮಂದಿ ಮೊದಲ ಡೋಸ್‌, 5097 ಮಂದಿ ಎರಡನೇ ಡೋಸ್‌ ಮತ್ತು 11395 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

Booster Dose: 3ನೇ ಡೋಸ್‌ ಪಡೆದಿದ್ದು ಬರೀ 15% ಜನ!

ನಗರದಲ್ಲಿ 17,358 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 13655 ಆರ್‌ಟಿಪಿಸಿಆರ್‌ ಹಾಗೂ 3703 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಶನಿವಾರ ನಗರದ ಮಹದೇವಪುರ ವಲಯದಲ್ಲಿ ಐದು ಹೊಸದಾಗಿ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿವೆ. ನಗರದಲ್ಲಿ ಒಟ್ಟು 16 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.