ನಿನ್ನೆ ರಾಜ್ಯದಲ್ಲಿ ಕೊರೋನಾಕ್ಕೆ 1 ಬಲಿ | 6 ತಿಂಗಳ ನಂತರ ರಾಜ್ಯದಲ್ಲಿ ಕನಿಷ್ಠ ಸಾವು | ಬೆಂಗಳೂರಲ್ಲಿ 1 ಸಾವು, ರಾಜ್ಯದ ಇನ್ನೆಲ್ಲೂ ಸಾವಿಲ್ಲ 

ಬೆಂಗಳೂರು(ಡಿ.25):ರಾಜ್ಯದಲ್ಲಿ ಗುರುವಾರ ಕೊರೋನಾ ಸೋಂಕಿನಿಂದ ಕೇವಲ ಒಬ್ಬರು ಮಾತ್ರ ಮರಣವನ್ನಪ್ಪಿದ್ದಾರೆ. ಇದು ಆರು ತಿಂಗಳ ನಂತರ (ಜೂನ್‌ ಮೂರು) ಬಳಿಕ ರಾಜ್ಯದಲ್ಲಿ ವರದಿಯಾಗಿರುವ ಕನಿಷ್ಠ ಪ್ರಮಾಣದ ಸಾವು. ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ಏಕಮಾತ್ರ ಸಾವು ಸಂಭವಿಸಿದ್ದು ರಾಜ್ಯದ ಉಳಿದ ಭಾಗದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಗುರುವಾರ 1,143 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 1,268 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 13,610 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 208 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬ್ರಿಟನ್‌ ವೈರಸ್‌ ರಾಜ್ಯಕ್ಕೆ ಬಂತಾ..? ಸೀಕ್ವೆನ್ಸ್ ವರದಿ ಪ್ರಕಟ

ರಾಜ್ಯದಲ್ಲಿ ಈವರೆಗೆ ಒಟ್ಟು 9.13 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8.87 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 12.039 ಮಂದಿ ಅಸುನೀಗಿದ್ದಾರೆ. ಗುರುವಾರ 98,724 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ. 1.34 ಕೋಟಿ ಪರೀಕ್ಷೆಗಳನ್ನು ಈವರೆಗೆ ನಡೆಸಲಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 642, ಬಾಗಲಕೋಟೆ ಮತ್ತು ರಾಮನಗರ ತಲಾ 1, ಬಳ್ಳಾರಿ 28, ಬೆಳಗಾವಿ 21, ಬೆಂಗಳೂರು ಗ್ರಾಮಾಂತರ 15, ಬೀದರ್‌ 8, ಚಾಮರಾಜನಗರ 9, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 10, ಚಿತ್ರದುರ್ಗ 19, ದಕ್ಷಿಣ ಕನ್ನಡ 20, ದಾವಣಗೆರೆ 19, ಧಾರವಾಡ 15, ಗದಗ 10, ಹಾಸನ 27, ಹಾವೇರಿ 2, ಕಲಬುರಗಿ 18, ಕೊಡಗು 6, ಕೋಲಾರ 11, ಕೊಪ್ಪಳ 12, ಮಂಡ್ಯ 16, ಮೈಸೂರು 88, ರಾಯಚೂರು 14, ಶಿವಮೊಗ್ಗ 19, ತುಮಕೂರು 40, ಉತ್ತರ ಕನ್ನಡ 14, ಉಡುಪಿ 6, ವಿಜಯಪುರ 21 ಮತ್ತು ಯಾದಗಿರಿ ಜಿಲ್ಲೆಯಲ್ಲಿ ನಾಲ್ವರಲ್ಲಿ ಸೋಂಕು ಧೃಢ ಪಟ್ಟಿದೆ.