Asianet Suvarna News Asianet Suvarna News

'ಸರೋಜಿನಿ ಮಹಿಷಿ ಆಯೋಗದ ವರದಿಯಂತೆ ಕನ್ನಡಿಗರಿಗೆ 80% ಉದ್ಯೋಗ ಮೀಸಲು ಕಡ್ಡಾಯ'

ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ಹಕ್ಕೊತ್ತಾಯವನ್ನು ಗಮನಿಸಿದ್ದೇನೆ. ಇದರ ಮಧ್ಯೆ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಾ. ಸಿಎನ್‌ ಅಶ್ವಥ್ ನಾರಾಯಣ ಭರವಸೆ ನಿಡಿದ್ದಾರೆ. ಒಂದು ವೇಳೆ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಬಂದ್ರೆ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಮೀಸಲಾತಿ ಸಿಗಲಿದೆ ಎನ್ನುವುದನ್ನು ಅವರೇ ಹೇಳಿದ್ದಾರೆ. ಅದು ಈ ಕೆಳಗಿನಂತಿದೆ. 

Jobs For Kannadigas Dycm CH Ashwath Narayan assures implementing sarojini mahishi report
Author
Bengaluru, First Published Dec 16, 2019, 4:11 PM IST

ಬೆಂಗಳೂರು, (ಡಿ.16): ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಪರಿಣಾಮಕಾರಿ ಪರಿಹಾರ ಒದಗಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿಎನ್‌ ಅಶ್ವಥ್ ನಾರಾಯಣ ಹೇಳಿದ್ದಾರೆ. 

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಬೆಂಗಳೂರಿನಲ್ಲಿ ನಡೆಸುತ್ತಿರುವ ಸತ್ಯಾಗ್ರಹದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು, ಅಹವಾಲು ಸ್ವೀಕರಿಸಿ ಮಾತನಾಡಿದರು. 

ಕರ್ನಾಟಕ ಹಾಲು ಒಕ್ಕೂಟದಲ್ಲಿ ನೇಮಕಾತಿ: ಅರ್ಜಿ ಹಾಕಿ

"ಡಾ. ಸರೋಜಿನಿ ಮಹಿಷಿ ಆಯೋಗದ ವರದಿಯಂತೆ  ಸಿ ಮತ್ತು ಡಿ ದರ್ಜೆಯಲ್ಲಿ ಕನ್ನಡಿಗರಿಗೆ 80%  ಉದ್ಯೋಗ ಮೀಸಲು ಕಡ್ಡಾಯ.  ಆದರೆ, ಎ ಮತ್ತು ಬಿ ದರ್ಜೆಯಲ್ಲಿ ಇದನ್ನು ಕಡ್ಡಾಯ ಮಾಡುವುದು ಸವಾಲಿನ ವಿಷಯ. ಆದರೆ, ನಾಡಿನ ಜನರಿಗೆ ಉದ್ಯೋಗ ದೊರೆತು, ಬದುಕು ಕಟ್ಟಿಕೊಳ್ಳಲೇ ಬೇಕು. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದ್ದು ಇದಕ್ಕೆ ನಾವು ಬದ್ಧ,''ಎಂದರು.
 
ಬದಲಾಗುತ್ತಿರುವ ವಾತಾವಾರಣದಲ್ಲಿ ನಾಡಿನ ಆರ್ಥಿಕತೆಗೆ ಶಕ್ತಿ ತುಂಬಿ. ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಉದ್ದೇಶ. ವ್ಯಾಪಾರ, ವ್ಯವಹಾರದಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ.  ಜಾಗತೀಕರಣ ಹಾಗೂ ಆರ್ಥಿಕ ಹಿಂಜರಿತ ಮುಂತಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಲು ಸಜ್ಜಾಗಿದ್ದೇವೆ ಎಂದು ಹೇಳಿದರು. 

ರಾಜ್ಯ ಸರ್ಕಾರಿ ಹುದ್ದೆಗಳಿಗೆ ನೇಮಕದಲ್ಲೂ ಕೇಂದ್ರ ಹಸ್ತಕ್ಷೇಪ!

ಉನ್ನತ ಶಿಕ್ಷಣ ಸಚಿವನಾಗಿ,  ಜನಪ್ರತಿನಿಧಿಯಾಗಿ, ಮುಖ್ಯವಾಗಿ  ಕನ್ನಡಿಗನಾಗಿ  ಭುವನೇಶ್ವರಿ ತಾಯಿಯ ಮಕ್ಕಳಿಗೆ ಒಳ್ಳೆಯ ಸ್ಥಾನಮಾನ ಕೊಡಿಸುವ ಅವಕಾಶ ಒದಗಿದೆ. ನಮ್ಮ ಜನರಿಗೆ ಸಲ್ಲಬೇಕಾದ್ದನ್ನು ಕೊಡಿಸಲು ಬದ್ಧ.  ಈ ಸಮಸ್ಯೆ ಬಗೆಹರಿಸಲು  ಪರಿಣಾಮಕಾರಿ  ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪರಿಹಾರ ಕ್ರಮ:
 ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹೆಚ್ಚಿಸಲು ಎಲ್ಲ ಏಜೆನ್ಸಿಗಳನ್ನು ಒಂದೇ ವೇದಿಕೆಗೆ ತಂದು ಏಕ ಗವಾಕ್ಷಿ ಯೋಜನೆಯಡಿ ಉದ್ಯೋಗ ಕೌಶಲ್ಯ ಕಲಿಸಲು ಸರ್ಕಾರ ಕಾರ್ಯ ಪ್ರವೃತ್ತವಾಗಿದೆ. ಈ ಮೂಲಕ ಉದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ದಾರಿಯಲ್ಲಿ ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿ , ಯಾವ ರೀತಿಯ ಉದ್ಯೋಗ ಇದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಈ ವೇದಿಕೆಯನ್ನು ತರಲಾಗಿದೆ ಎಂದರು.

"ಉದ್ಯೋಗಕ್ಕೆ ಬೇಕಿರುವ ಎಲ್ಲ ಕೌಶಲ್ಯವನ್ನು ಕಲಿಕೆ ವೇಳೆಯಲ್ಲೇ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ.  ವಿದ್ಯಾಭ್ಯಾಸದ ವೇಳೆಯಲ್ಲೇ  ಪ್ರಾಜೆಕ್ಟ್‌, ಇಂಟರ್ನ್‌ಶಿಪ್,‌ ಅಪ್ರೆಂಟಿಶಿಪ್‌ ಮಾಡಲು ಅವಕಾಶ ಮಾಡಿಕೊಲಾಗುತ್ತದೆ.  ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಂಪನಿಗಳ ಜತೆ  ಸಂಬಂಧ ಬೆಸೆಯಲಾಗುತ್ತಿದೆ. ಓದು ಮುಗಿದ ನಂತರ ಕೆಲಸ ಹುಡುಕುವ ಬದಲಿಗೆ ಕಲಿಕೆ ವೇಳೆಯಲ್ಲಿ ಉದ್ಯೋಗಾವಕಾಶ  ಪಡೆಯಬಹುದು,''ಎಂದು ವಿವರಿಸಿದರು. 

 ಎಲ್ಲಿಂದಲೋ ಬಂದವರು ಇಲ್ಲಿ ಕೆಲಸ ಗಿಟ್ಟಿಸಿಕಳ್ಳುತ್ತಿರುವ ಸಂದರ್ಭದಲ್ಲಿ  ಇಲ್ಲಿಯವರು  ಇಲ್ಲಿನ  ಕಂಪನಿಗಳ  ಜತೆ ಸಂಪರ್ಕ ಬೆಳೆಸಿಕೊಳ್ಳಲು ಪೂರಕ ಕ್ರಮಗಳನ್ನು ಕೈಗೊಂಡಿದ್ದೇವೆ.  ಸಂಪರ್ಕದ ಕೊರತೆಯ ಸಣ್ಣ ಸಮಸ್ಯೆಯೇ ದೊಡ್ಡ ಸಮಸ್ಯೆ ಆಗಿ ಕಾಡುತ್ತಿತ್ತು. ಈಗ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.  

ಓದುವ ಸಂದರ್ಭದಲ್ಲೇ ಉದ್ಯೋಗಾವಕಾಶದ ಮಾಹಿತಿ ಮತ್ತು ಅಗತ್ಯ ತರಬೇತಿ ಮತ್ತು ವೃತ್ತಿ ಪರ ಅವಕಾಶ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರೋಜಿನಿ ಮಹಿಷಿ ಯಾರು..?
ಸರೋಜಿನಿ ಮಹಿಷಿಯವರು (1927– 2015) ಲೇಖಕಿ, ರಾಜಕಾರಣಿ, ಕಾನೂನುತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಕೇಂದ್ರ ಸರ್ಕಾರದಲ್ಲಿ ಮಾಜಿ ಸಚಿವೆ. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮತ್ತು ಅನುವಾದಗಳನ್ನು ಮಾಡಿದ್ದಾರೆ. ನಾಲ್ಕು ಬಾರಿ ಧಾರವಾಡದ ಸಂಸದೆಯಾಗಿದ್ದರು ಮತ್ತು 2 ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಸರೋಜಿನಿ ಮಹಿಷಿ ಅವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚನಲವನ್ನು ಮೂಡಿಸಿದ್ದರು. ರೇಲ್ವೆ ಸೇರಿದಂತೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಅವರು ಸಲ್ಲಿಸಿದ ವರದಿ ಸರೋಜಿನಿ ಮಹಿಷಿ ವರದಿ ಎಂದೇ ಪ್ರಸಿದ್ಧವಾಗಿದೆ. 1983ರಲ್ಲಿ ಸಲ್ಲಿಸಿದ ಈ ವರದಿ ಅನುಷ್ಠಾನಕ್ಕಾಗಿ ಈಗಲೂ ಹೋರಾಟಗಳು ನಡೆಯುತ್ತಿವೆ.

Follow Us:
Download App:
  • android
  • ios