Asianet Suvarna News Asianet Suvarna News

ಕಂಠೀರವ ಕ್ರೀಡಾಂಗಣದ 1 ಕೋಟಿ ವೆಚ್ಚದ ಮರದ ಹಾಸು ಮಳೆಗೆ ಬಲಿ

ಕೆಲ ದಿನಗಳ ಹಿಂದಷ್ಟೇ ಮುಕ್ತಾಯ ಕಂಡಿದ್ದ ಏಷ್ಯಾ ಮಹಿಳಾ ಬಾಸ್ಕೆಟ್‌'ಬಾಲ್ ಟೂರ್ನಿಗಾಗಿ 3.80 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನವೀಕರಣಮಾಡಲಾಗಿತ್ತು.

wooden mat worth rupees 1 crore in Sree kanteerava stadium gets destroys

ಬೆಂಗಳೂರು(ಆ.17): ನಗರದಲ್ಲಿ ಕಳೆದ ಸೋಮವಾರ ಸುರಿದ ಧಾರಕಾರ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅದರಂತೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿನ ಮರದ ಹಾಸು ಸಂಪೂರ್ಣ ಹಾಳಾಗಿದೆ. ಇದರ ನಿರ್ಮಾಣಕ್ಕಾಗಿ 1 ಕೋಟಿ ವೆಚ್ಚವನ್ನು ಮಾಡಲಾಗಿತ್ತು. ಇದೀಗ ಆ ಹಣ ನೀರಿನಲ್ಲಿ ಕೊಚ್ಚಿ ಹೋಗಿದೆ. ಸದ್ಯ ಕ್ರೀಡಾಂಗಣದಲ್ಲಿ ನಿಲುಗಡೆಯಾಗಿದ್ದ ನೀರನ್ನು ಸಂಪೂರ್ಣ ತೆಗೆದುಹಾಕಲಾಗಿದ್ದು, ಮರದ ಹಾಸುಗೆಯನ್ನು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಕ್ರೀಡಾ ನಿರ್ದೇಶಕ ಅನುಪಮ್ ಅಗರ್‌ವಾಲ್ ಭರವಸೆ ನೀಡಿದ್ದಾರೆ.

ಸೋಮವಾರ ಸುರಿದಿದ್ದ ಭಾರೀ ಮಳೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣ ತಗ್ಗು ಪ್ರದೇಶವಾಗಿರುವುದರಿಂದ ನೀರು ನುಗ್ಗಿತ್ತು. ಮಂಗಳವಾರ ಬೆಳಗ್ಗೆ ತರಾತುರಿಯಲ್ಲಿ ಕ್ರೀಡಾಂಗಣವನ್ನು ವೀಕ್ಷಿಸಿದ ರಾಜ್ಯ ಕ್ರೀಡಾ ನಿರ್ದೇಶಕ ಅನುಪಮ್ ಅಗರ್‌ವಾಲ್, ನೀರನ್ನು ಈ ಕೂಡಲೇ ಹೊರಹಾಕುವ ವ್ಯವಸ್ಥೆ ಮಾಡುವಂತೆ ಕ್ರೀಡಾಂಗಣ ಕಾರ್ಮಿಕರಿಗೆ ಸೂಚಿಸಿದ್ದರು. ಕ್ರೀಡಾಂಗಣ ಸಂಪೂರ್ಣ  ಜಲಾವೃತವಾಗಿದ್ದರಿಂದ ಈ ನೀರನ್ನು ಹೊರ ಹಾಕಲು ಸುಮಾರು 50 ಮಂದಿ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಮುಕ್ತಾಯ ಕಂಡಿದ್ದ ಏಷ್ಯಾ ಮಹಿಳಾ ಬಾಸ್ಕೆಟ್‌'ಬಾಲ್ ಟೂರ್ನಿಗಾಗಿ 3.80 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನವೀಕರಣಮಾಡಲಾಗಿತ್ತು. ಕ್ರೀಡಾಂಗಣದ ಸುತ್ತಲೂ ಚಾಂಪಿಯನ್‌'ಶಿಪ್‌'ಗಾಗಿ ನೇತು ಹಾಕಿದ್ದ ಬೋರ್ಡ್‌'ಗಳು ಇನ್ನು ಮಾಸಿರಲಿಲ್ಲ. ಸುಮಾರು 24 ಗಂಟೆಗಳ ಕಾಲ ಒಳಾಂಗಣದಲ್ಲಿ ನೀರು ನಿಲುಗಡೆಯಾಗಿದ್ದರಿಂದ ಮರದ ಹಾಸುಗೆ ಸಂಪೂರ್ಣ ಹಾಳಾಗಿದೆ. ಮರದ ಹಾಸುಗೆಯನ್ನು ಮೇಲಕ್ಕೆತ್ತಿ ಅದರ ಕೆಳಗಡೆ ಶೇಖರಣೆಯಾಗಿರುವ ನೀರನ್ನು ತೆಗೆಯುವ ಯತ್ನದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.

Follow Us:
Download App:
  • android
  • ios