ಬೆಂಗಳೂರು ಪಂದ್ಯದಲ್ಲಿ ಗೇಲ್ ಕೈ ಬಿಟ್ಟಿದ್ದನ್ನು ಸಮರ್ಥಿಸಿದ ವೆಟ್ಟೋರಿ
ಆರ್'ಸಿಬಿ ತಂಡ ಮಂಗಳವಾರ(ಏ.18) ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಸೆಣಸಲಿದೆ.
ಬೆಂಗಳೂರು(ಏ.17): ಭಾನುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರೈಸಿಂಗ್ ಪುಣೆ ಸೂಪರ್'ಜೈಂಟ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ ಸ್ಫೋಟಕ ಬ್ಯಾಟ್ಸ್'ಮನ್ ಕ್ರಿಸ್ಗೇಲ್ ಅವರನ್ನು ತಂಡದಿಂದ ಕೈ ಬಿಟ್ಟು ಆಲ್ರೌಂಡರ್ ಶೇನ್ ವಾಟ್ಸನ್ರನ್ನು ಸೇರ್ಪಡೆಗೊಳಿಸಿಕೊಂಡಿದ್ದನ್ನು ಕೋಚ್ ಡೇನಿಯಲ್ ವೆಟ್ಟೋರಿ ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದಿನ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ವೇಗದ ಬೌಲರ್ಗಳ ಕೊರತೆಯಿಂದಾಗಿ ಪಂದ್ಯವನ್ನು ಕೈಚೆಲ್ಲಬೇಕಾಗಿ ಬಂದಿತ್ತು. ಹೀಗಾಗಿ ಗೇಲ್ ಬದಲು ವಾಟ್ಸನ್ ಅವರನ್ನು ಆಡಿಸಿದ್ದಾಗಿ ವೆಟ್ಟೋರಿ ಹೇಳಿದ್ದಾರೆ.
ವಾಟ್ಸನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗಗಳಲ್ಲಿಯೂ ತಂಡಕ್ಕೆ ನೆರವಾಗಬಲ್ಲರು. ಟಿ20 ಟೂರ್ನಿಗಳಿಗೆ ವಾಟ್ಸನ್ ಸೂಕ್ತ ಆಟಗಾರರಾರೆನಿಸಿದ್ದಾರೆ.
ಕ್ರಿಸ್ ಗೇಲ್ ಇನ್ನು ಕೇವಲ ಮೂರು ರನ್ ಬಾರಿಸಿದರೆ ಟಿ20 ಕ್ರಿಕೆಟ್'ನಲ್ಲಿ 10 ಸಾವಿರ ರನ್ ಪೂರೈಸಿದ ಜಗತ್ತಿನ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನವಾಗಲಿದ್ದಾರೆ. ಈ ಸಾಧನೆ ಬೆಂಗಳೂರಿನಲ್ಲಿ ನಡೆಯುವ ಪಂದ್ಯದಲ್ಲಿಯೇ ಸಾಕಾರವಾಗಲಿದೆ ಎನ್ನುವ ಆಶಾವಾದವನ್ನು ಆರ್'ಸಿಬಿ ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ ಗೇಲ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.
ಪುಣೆ ವಿರುದ್ಧದ ಪಂದ್ಯದಲ್ಲಿ 27ರನ್'ಗಳಿಂದ ಆರ್ಸಿಬಿ ಪಂದ್ಯವನ್ನು ಕೈಚೆಲ್ಲಿತ್ತು. ಇನ್ನು ಆರ್'ಸಿಬಿ ತಂಡ ಮಂಗಳವಾರ(ಏ.18) ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಸೆಣಸಲಿದೆ.