ದೇವಧರ್ ಟ್ರೋಫಿ: ಕೊನೆಯ ಓವರ್'ನಲ್ಲಿ ಗೆದ್ದ ಕರ್ನಾಟಕ
ಪಂದ್ಯದ 41ನೇ ಓವರ್'ನಲ್ಲಿ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಮನೋಜ್ ತಿವಾರಿ ಅವರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಲೆಗ್'ಸ್ಪಿನ್ನರ್ ಶ್ರೇಯಸ್ ಗೋಪಾಲ್ ಯಶಸ್ವಿಯಾದರು. ಮರು ಎಸೆತದಲ್ಲೇ ಜಯಂತ್ ಯಾದವ್ ಅವರನ್ನೂ ಬಲಿ ಪಡೆಯುವ ಮೂಲಕ ಪಂದ್ಯಕ್ಕೆ ರೋಚಕತೆ ತಂದುಕೊಟ್ಟರು.
ಧರ್ಮಶಾಲಾ(ಮಾ.05): ಕೊನೆಯ ಓವರ್'ವರೆಗೂ ರೋಚಕತೆ ರೋಚಕತೆ ಕಾಯ್ದುಕೊಂಡಿದ್ದ ದೇವಧರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡವು ಇಂಡಿಯಾ ಬಿ ವಿರುದ್ಧ 6 ರನ್'ಗಳ ರೋಚಕ ಜಯ ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಆರ್. ಸಮರ್ಥ್(117) ಬಾರಿಸಿದ ಭರ್ಜರಿ ಶತಕ, ಹಾಗೂ ಪವನ್ ದೇಶ್'ಪಾಂಡೆ, ಮಯಾಂಕ್ ಅಗರ್'ವಾಲ್ ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್'ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತು. ಇದಕ್ಕುತ್ತರವಾಗಿ ಭಾರತ ‘ಬಿ’ ತಂಡ 9 ವಿಕೆಟ್ ಕಳೆದುಕೊಂಡು 290 ರನ್ ಗಳಿಸಲಷ್ಟೇ ಶಕ್ತವಾಯಿತು.
ಕರ್ನಾಟಕ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ್ದ ಭಾರತ 'ಬಿ' ತಂಡ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 23 ರನ್'ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ವೇಳೆ ಜತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ತಿವಾರಿ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ವೇಳೆ ದಾಳಿಗಿಳಿದ ಬಿನ್ನಿ ನಾಯಕ ಅಯ್ಯರ್(33) ಅವರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಯಶಸ್ವಿಯಾದರು. ಆದರೆ 5ನೇ ವಿಕೆಟ್'ಗೆ ತಿವಾರಿ ಹಾಗೂ ಸಿದ್ದೇಶ್ ಲಾಡ್ ಕರ್ನಾಟಕದ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸುವ ಮೂಲಕ ಭಾರತ 'ಬಿ' ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಈ ಜೋಡಿ ಶತಕದ ಜತೆಯಾಟವಾಡಿ(133) ಕರ್ನಾಟಕ ತಂಡದ ಆತಂಕವನ್ನು ಹೆಚ್ಚಿಸಿತು.
ಪಂದ್ಯದ 41ನೇ ಓವರ್'ನಲ್ಲಿ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಮನೋಜ್ ತಿವಾರಿ ಅವರನ್ನು ಪೆವಿಲಿಯನ್'ಗೆ ಅಟ್ಟುವಲ್ಲಿ ಲೆಗ್'ಸ್ಪಿನ್ನರ್ ಶ್ರೇಯಸ್ ಗೋಪಾಲ್ ಯಶಸ್ವಿಯಾದರು. ಮರು ಎಸೆತದಲ್ಲೇ ಜಯಂತ್ ಯಾದವ್ ಅವರನ್ನೂ ಬಲಿ ಪಡೆಯುವ ಮೂಲಕ ಪಂದ್ಯಕ್ಕೆ ರೋಚಕತೆ ತಂದುಕೊಟ್ಟರು.
ಇದಾದ ಬಳಿಕವೂ ಛಲ ಬಿಡದೇ ಬ್ಯಾಟ್'ಬೀಸಿದ ಸಿದ್ದೇಶ್ ಲಾಡ್ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು. ಉಮೇಶ್ ಯಾದವ್ ಹಾಗೂ ಧರ್ಮೇಂದ್ರಸಿನ್ಹಾ ಜಡೇಜಾ ಸ್ಫೋಟಕ ಬ್ಯಾಟಿಂಗ್ ನಡೆಸಿದರಾದರೂ, ಕೊನೆಯ ಓವರ್'ನಲ್ಲಿ ಚಾಣಾಕ್ಷ ಬೌಲಿಂಗ್ ನಡೆಸಿದ ಕೆ.ಗೌತಮ್ ಕರ್ನಾಟಕವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿದ ಕರ್ನಾಟಕ ಕೂಡಾ ಆರಂಭದಲ್ಲೇ ಮುಗ್ಗರಿಸಿತು. ನಾಯಕ ಕರುಣ್ ಕೇವಲ 10 ರನ್ ಗಳಿಸಿ ಔಟಾದರು. ಮಯಾಂಕ್(44) ಹಾಗೂ ದೇಶ್'ಪಾಂಡೆ(46) ಜತೆ ಸಮಯೋಚಿತ ಇನಿಂಗ್ಸ್ ಕಟ್ಟಿದ ಸಮರ್ಥ್ ಆಕರ್ಷಕ ಶತಕ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ: 296/8
ಆರ್. ಸಮರ್ಥ್ 117, ಕೌಲ್:49/3
ಇಂಡಿಯಾ ‘ಬಿ’: 290/9
ಮನೋಜ್ ತಿವಾರಿ 120 ಎಸ್. ಗೋಪಾಲ್: 29/3