ಟೆನಿಸ್ಗೆ ನಿವೃತ್ತಿ ಘೋಷಿಸುವ ಮುನ್ಸೂಚನೆ ನೀಡಿದ ರೋಜರ್ ಫೆಡರರ್..!
ಎರಡು ದಶಕಗಳ ಕಾಲ ಟೆನಿಸ್ ಜಗತ್ತನ್ನು ಆಳಿದ್ದ ರೋಜರ್ ಫೆಡರರ್
25 ವರ್ಷಗಳ ಬಳಿಕ ಮೊದಲ ಬಾರಿ ರಾರಯಂಕಿಂಗ್ ಪಟ್ಟಿಯಿಂದ ಹೊರಬಿದ್ದ ಫೆಡರರ್
ಮೊಣಕಾಲಿನ ಗಾಯದಿಂದ ಬಳಲುತ್ತಿರುವ ರೋಜರ್ ಫೆಡರರ್
ಲಂಡನ್(ಜು.13): ವರ್ಷದ ಬಳಿಕ ಸ್ಪರ್ಧಾತ್ಮಕ ಟೆನಿಸ್ಗೆ ಮರಳುವ ಸುದ್ದಿಗಳ ನಡುವೆಯೇ 20 ಗ್ರ್ಯಾನ್ಸ್ಲಾಂಗಳ ಒಡೆಯ ರೋಜರ್ ಫೆಡರರ್ ಟೆನಿಸ್ ಬದುಕಿಗೆ ನಿವೃತ್ತಿ ಘೋಷಿಸುವ ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ನೆದರ್ಲೆಂಡ್್ಸನ ಪತ್ರಿಕೆಯೊಂದರ ಜೊತೆ ಮಾತನಾಡಿರುವ ಅವರು, ‘ನಾನು ಗೆಲುವನ್ನು ಪ್ರೀತಿಸುತ್ತೇನೆ. ಆದರೆ ಆಡಲು ಸಾಧ್ಯವಿಲ್ಲದಿದ್ದಾಗ ಅದನ್ನು ನಿಲ್ಲಿಸುವುದು ಉತ್ತಮ. ಹೀಗಾಗಿ ನನಗೀಗ ಟೆನಿಸ್ ಅಗತ್ಯವಿದೆ ಎಂದು ಭಾವಿಸುವುದಿಲ್ಲ’ ಎಂದು 40 ವರ್ಷದ ರೋಜರ್ ಫೆಡರರ್ ಹೇಳಿದ್ದಾರೆ.
‘ಟೆನಿಸ್, ಜೀವನದ ಒಂದು ಭಾಗ ಮಾತ್ರ, ಅದು ನನ್ನ ಸಂಪೂರ್ಣ ಗುರುತಲ್ಲ. ನಾನು ಯಾವತ್ತೂ ಯಶಸ್ವಿಯಾಗಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಆದರೆ ಅದನ್ನು ಕ್ರೀಡೆಯ ಹೊರಗೂ ಕೂಡಾ ಮಾಡಬಹುದು ಎಂದಿರುವ ಅವರು, ವೃತ್ತಿಪರ ಬದುಕು ಶಾಶ್ವತವಲ್ಲ ಎಂಬುವುದು ನನಗೆ ಗೊತ್ತಿದೆ’ ಎಂದು ತಿಳಿಸಿದ್ದಾರೆ. ದೀರ್ಘ ಸಮಯದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ರೋಜರ್ ಫೆಡರರ್ 1999ರ ಬಳಿಕ ಮೊದಲ ಬಾರಿ ಈ ವರ್ಷ ವಿಂಬಲ್ಡನ್ ಟೂರ್ನಿಯಲ್ಲಿ ಆಡಿರಲಿಲ್ಲ. ಅಲ್ಲದೇ 25 ವರ್ಷಗಳ ಬಳಿಕ ಮೊದಲ ಬಾರಿ ರ್ಯಾಂಕಿಂಗ್ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಬ್ಯಾಡ್ಮಿಂಟನ್: ಅರ್ಜುನ್, ಧೃವ್ ಪ್ರಿ ಕ್ವಾರ್ಟರ್ಗೆ
ಸಿಂಗಾಪುರ: ಭಾರತದ ಎಂ.ಆರ್.ಅರ್ಜುನ್ ಮತ್ತು ಧೃವ್ ಕಪಿಲಾ ಸಿಂಗಾಪುರ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಜೋನ್ಸ್ ಯಾನ್ಸನ್ ಮತ್ತು ಯಾನ್ ಕಾಲಿನ್ ವಿರುದ್ಧ 21-19, 21-19 ಗೇಮಗಳಲ್ಲಿ ಗೆದ್ದರು. ಪುರುಷರ ಡಬಲ್ಸ್ನಲ್ಲಿ ಶ್ಯಾಮ್ ಪ್ರಸಾದ್-ವಿಷ್ಣುವರ್ಧನ್, ಮಹಿಳಾ ಡಬಲ್ಸ್ನಲ್ಲಿ ಸಿಮ್ರನ್-ರಿತಿಕಾ ಜೋಡಿ ಸೋತು ಹೊರಬಿತ್ತು.
ಕಾಮನ್ವೆಲ್ತ್ ಗೇಮ್ಸ್ ಸ್ಕ್ವಾಶ್: ಭಾರತ ತಂಡದಲ್ಲಿ 14ರ ಅನಾಹತ್ ಸಿಂಗ್ !
ನವದೆಹಲಿ: ಜು.28ರಿಂದ ಆರಂಭಗೊಳ್ಳಲಿರುವ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಸ್ಕ್ವಾಶ್ ತಂಡವನ್ನು ಆಯ್ಕೆ ಮಾಡಲಾಗಿದ್ದು 14 ವರ್ಷದ ಅನಾಹತ್ ಸಿಂಗ್ಗೆ ಸ್ಥಾನ ನೀಡಲಾಗಿದೆ. ದೆಹಲಿ ಮೂಲದ ಅನಾಹತ್ ಇತ್ತೀಚೆಗೆ ಜರ್ಮನಿಯಲ್ಲಿ ಅಂಡರ್-15 ಟೂರ್ನಿಯನ್ನು ಜಯಿಸಿದ್ದರು. ಆಕೆ ಇದೆ ವಿಭಾಗದಲ್ಲಿ ಏಷ್ಯನ್ ಪ್ರಶಸ್ತಿ ಸಹ ಮುಡಿಗೇರಿಸಿಕೊಂಡಿದ್ದರು.
ಮಹಿಳಾ ಹಾಕಿ ವಿಶ್ವಕಪ್: ಸ್ಪೇನ್ ಎದುರು ಸೋತು ಕ್ವಾರ್ಟರ್ ಫೈನಲ್ಗೇರಲು ಭಾರತ ವಿಫಲ
ಹಾಕಿ ವಿಶ್ವಕಪ್: ಭಾರತಕ್ಕೆ ಮೊದಲ ಗೆಲುವಿನ ಸಿಹಿ
ಟೆರ್ರಾಸ್ಸಾ(ಸ್ಪೇನ್): ನಾಯಕಿ ಹಾಗೂ ಗೋಲ್ಕೀಪರ್ ಸವಿತಾ ಪೂನಿಯಾ ತೋರಿದ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ ಅನುಭವಿಸಿದೆ. ಮಂಗಳವಾರ ಕೆನಡಾ ವಿರುದ್ಧ 9ರಿಂದ 16ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಶೂಟೌಟ್ನಲ್ಲಿ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಮೇಡೆಲಿನ್ ಸೆಕ್ಕೊ 11ನೇ ನಿಮಿಷದಲ್ಲೇ ಗೋಲು ಬಾರಿಸಿ ಕೆನಡಾಕ್ಕೆ ಮುನ್ನಡೆ ಒದಗಿಸಿದರು. ಆದರೆ ಕೊನೆ ಎರಡು ನಿಮಿಷಗಳಿರುವಾಗ ಸಲೀಮಾ ಟೆಟೆ ಹೊಡೆದ ಗೋಲು ಭಾರತ ಸಮಬಲ ಸಾಧಿಸಲು ನೆರವಾಯಿತು. ಹೀಗಾಗಿ ಫಲಿತಾಂಶ ನಿರ್ಧರಿಸಲು ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್ನಲ್ಲಿ ಸವಿತಾ ಕೆನಡಾದ 6 ಗೋಲುಗಳನ್ನು ತಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು. ಭಾರತ ಬುಧವಾರ 9ರಿಂದ 12ನೇ ಸ್ಥಾನಕ್ಕೆ ನಡೆಯಲಿರುವ ಪಂದ್ಯದಲ್ಲಿ ಜಪಾನ್ ಸವಾಲನ್ನು ಎದುರಿಸಲಿದೆ.