ವಿಂಡೀಸ್ ವಿರುದ್ಧದ ಏಕದಿನಕ್ಕೆ ಟೀಂ ಇಂಡಿಯಾ ಪ್ರಕಟ-ಕನ್ನಡಿಗರಿಗೆ ಶಾಕ್!
ಟೆಸ್ಟ್ ಸರಣಿ ಗೆಲುವಿನ ಬಳಿಕ ಇದೀಗ ಭಾರತ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಗವ್ಹಾಟಿಯಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಗವ್ಹಾಟಿ ಪಂದ್ಯಕ್ಕೆ ಆಯ್ಕೆಯಾಗಿರೋ ಆಟಗಾರರು ಯಾರು? ಇಲ್ಲಿದೆ.
ಗೌವ್ಹಾಟಿ(ಅ.20): ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿ ನಾಳೆಯಿಂದ(ಅ.21) ಆರಂಭಗೊಳ್ಳಲಿದೆ. ಗೌವ್ಹಾಟಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ 12 ಮಂದಿ ಸದಸ್ಯರ ತಂಡವನ್ನ ಬಿಸಿಸಿಐ ಪ್ರಕಟಿಸಿದೆ.
Announcement: #TeamIndia announce the 12 for the 1st ODI in Guwahati against West Indies #INDvWI pic.twitter.com/j32SXgSFTT
— BCCI (@BCCI) October 20, 2018
12 ಮಂದಿ ಸದಸ್ಯರ ಪಟ್ಟಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆಗೆ ಸ್ಥಾನ ನೀಡಿಲ್ಲ. ಇವರಿಬ್ಬರ ಬದಲು ಅಂಬಾಟಿ ರಾಯುಡುಗೆ ಅವಕಾಶ ನೀಡಲಾಗಿದೆ. ಇನ್ನು ಯುವ ಕ್ರಿಕೆಟಿಗ ರಿಷಬ್ ಪಂತ್ಗೆ ಅವಕಾಶ ನೀಡಲಾಗಿದೆ. ಇನ್ನು ನಾಯಕ ವಿರಾಟ್ ಕೊಹ್ಲಿಗೆ ಎಂ.ಎಸ್ ಧೋನಿ ಸಾಥ್ ನೀಡಲಿದ್ದಾರೆ. ಹೀಗಾಗಿ ಆಡೋ ಹನ್ನೊಂದರ ಬಳಗದಿಂದ ರಿಷಬ್ ಪಂತ್ ಹೊರಗುಳಿಯುವ ಸಾಧ್ಯತೆ ಇದೆ.
ಆಲ್ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ಸ್ಥಾನ ಪಡೆದರೆ, ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚೆಹಾಲ್ ಹಾಗೂ ಕುಲ್ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಉಮೇಶ್ ಯಾದವ್, ಮೊಹಮ್ಮದ್ ಶಮಿ ಹಾಗೂ ಖಲೀಲ್ ಅಹಮ್ಮದ್ ವೇಗದ ವಿಭಾಗ ನಿಭಾಯಿಸಲಿದ್ದಾರೆ.
12 ಸದಸ್ಯರ ಈ ತಂಡದಿಂದ ನಾಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಂ ಮ್ಯಾನೇಜ್ಮೆಂಟ್ ಒಬ್ಬರನ್ನ ಕೈಬಿಟ್ಟು 11 ಮಂದಿ ತಂಡವನ್ನ ಆಯ್ಕೆ ಮಾಡಲಿದೆ. ಹೀಗಾಗಿ ನಾಳೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವವರು ಯಾರು ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.
ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಾಟಿ ರಾಯುಡು, ರಿಷಬ್ ಪಂತ್, ಎಂ.ಎಸ್ ಧೋನಿ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಯುಜುವೇಂದ್ರ ಚೆಹಾಲ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಖಲೀಲ್ ಅಹಮ್ಮದ್