ಆಕರ್ಷಕ ಆಟವಾಡುತ್ತಿದ್ದ ಮನ್‌ದೀಪ್ ಸಿಂಗ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಆರ್‌ಸಿಬಿ ಗೆಲುವಿನ ಆಸೆ ಕಮರಿ ಹೋಯಿತು. 40 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಮನ್‌ದೀಪ್ 46 ರನ್ ಗಳಿಸಿದರು. ಪವನ್ ನೇಗಿ 21 ರನ್ ಗಳಿಸಿ ಹೋರಾಟ ನಡೆಸಿದರಾದರೂ ಏನೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ರಾಯಲ್ ಚಾಲೆಂಜರ್ಸ್‌ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಸರ್ವಪತನಗೊಂಡಿತು. ಪಂಜಾಬ್ ಪರ ಸಂದೀಪ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್ ಕಬಳಿಸಿದರೆ, ಮೋಹಿತ್ ಶರ್ಮಾ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ 2 ವಿಕೆಟ್ ಪಡೆದು, ತಂಡದ ಗೆಲುವಿಗೆ ಸಹಕಾರಿಯಾದರು.

ಬೆಂಗಳೂರು(ಮೇ.06): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತವರಿನಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಉತ್ತಮ ಬೌಲಿಂಗ್ ದಾಳಿ ಸಂಘಟಿಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 138 ರನ್‌ಗೆ ಕಟ್ಟಿಹಾಕಿದ್ದ ಆರ್‌ಸಿಬಿ, ಇದಕ್ಕುತ್ತರವಾಗಿ ಕೇವಲ 119 ರನ್‌ಗಳಿಗೆ ಮುಗ್ಗರಿಸಿ 19 ರನ್‌ಗಳ ಸೋಲು ಅನುಭವಿಸಿತು. ಈ ಆವೃತ್ತಿಯಲ್ಲಿ ಇದು ತಂಡದ 9ನೇ ಸೋಲು.

ಸುಲಭ ಗುರಿ ಬೆನ್ನತ್ತಿದ ಬೆಂಗಳೂರು ತಂಡ ಮೊದಲ ಓವರ್‌ನಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ 6 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡಾಗ ತಂಡದ ಮೊತ್ತ 23.1 ಬೌಂಡರಿ, 1 ಸಿಕ್ಸರ್ ಸಿಡಿಸಿ ನಿರೀಕ್ಷೆ ಹುಟ್ಟಿಸಿದ್ದ ಎಬಿ ಡಿವಿಲಿಯರ್ಸ್‌ 10 ರನ್‌ಗೆ ಔಟಾದರು. ಆರ್‌ಸಿಬಿಯ ಮೂವರು ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಸಂದೀಪ್ ಶರ್ಮಾ ಬಲಿ ಪಡೆದು, ಪಂಜಾಬ್‌ಗೆ ಮುನ್ನಡೆ ಒದಗಿಸಿದರು. ಕೇದಾರ್ ಜಾಧವ್ (6), ಶೇನ್ ವಾಟ್ಸನ್ (3) ರನ್ ಗಳಿಸಿ ನಿರಾಸೆ ಮೂಡಿಸಿದರು.

ಆಕರ್ಷಕ ಆಟವಾಡುತ್ತಿದ್ದ ಮನ್‌ದೀಪ್ ಸಿಂಗ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಆರ್‌ಸಿಬಿ ಗೆಲುವಿನ ಆಸೆ ಕಮರಿ ಹೋಯಿತು. 40 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಮನ್‌ದೀಪ್ 46 ರನ್ ಗಳಿಸಿದರು. ಪವನ್ ನೇಗಿ 21 ರನ್ ಗಳಿಸಿ ಹೋರಾಟ ನಡೆಸಿದರಾದರೂ ಏನೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ರಾಯಲ್ ಚಾಲೆಂಜರ್ಸ್‌ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಸರ್ವಪತನಗೊಂಡಿತು. ಪಂಜಾಬ್ ಪರ ಸಂದೀಪ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್ ಕಬಳಿಸಿದರೆ, ಮೋಹಿತ್ ಶರ್ಮಾ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ತಲಾ 2 ವಿಕೆಟ್ ಪಡೆದು, ತಂಡದ ಗೆಲುವಿಗೆ ಸಹಕಾರಿಯಾದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಸಹ ಆರಂಭಿಕ ಆಘಾತಕ್ಕೆ ಗುರಿಯಾಯಿತು. ಆದರೆ ಮನನ್ ವೊಹ್ರಾ, ವೃದ್ಧಿಮಾನ್ ಸಾಹ ತಂಡಕ್ಕೆ ಚೇತರಿಕೆ ನೀಡಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ ಸ್ಫೋಟಕ ಆಟವಾಡಿ 38 ರನ್ ಕಲೆಹಾಕಿದರು. ಕೊನೆ ಓವರ್‌ನಲ್ಲಿ ವಾಟ್ಸನ್ ಬಿಟ್ಟುಕೊಟ್ಟ 19 ರನ್ ಆರ್‌ಸಿಬಿ ಪಾಲಿಗೆ ದುಬಾರಿಯಾಯಿತು.

ಕಡಿಮೆ ರನ್'ಗೆ ಕಟ್ಟಿ ಹಾಕಿದರೂ ಫಲ ಕೊಡಲಿಲ್ಲ

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಆವೃತ್ತಿಯ 43ನೇ ಪಂದ್ಯದಲ್ಲಿ ಪ್ರೀತಿ ಝಿಂಟಾ ಮಾಲಿಕತ್ವದ ತಂಡವನ್ನು ಆರ್‌ಸಿಬಿ ಕೇವಲ 138 ರನ್‌ಗಳಿಗೆ ಕಟ್ಟಿಹಾಕಿತು. ಟಾಸ್ ಗೆದ್ದು ಮೊದಲು ಎದುರಾಳಿಯನ್ನು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತಹ ದಾಳಿಯನ್ನು ಆರ್‌ಸಿಬಿ ಬೌಲರ್‌ಗಳು ಸಂಘಟಿಸಿದರು.

ಮೊದಲ ಓವರ್‌ನಲ್ಲೇ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದ ಹಾಶೀಂ ಆಮ್ಲಾ, ಆರ್‌ಸಿಬಿ ಆಟಗಾರರು ಮನವಿ ಸಲ್ಲಿಸುವ ಮೊದಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಲು ಆರಂಭಿಸಿ ಕ್ರೀಡಾ ಸ್ಫೂರ್ತಿ ಮೆರೆದರು. ಪ್ರಚಂಡ ಲಯದಲ್ಲಿದ್ದ ಮಾರ್ಟಿನ್ ಗಪ್ಟಿಲ್‌ರನ್ನು ಕರ್ನಾಟಕದ ಎಸ್.ಅರವಿಂದ್ ಔಟ್ ಮಾಡಿದರೆ, ಅಪಾಯಕಾರಿ ಬ್ಯಾಟ್ಸ್‌ಮನ್ ಶಾನ್ ಮಾರ್ಷ್, ಪವನ್ ನೇಗಿಗೆ ವಿಕೆಟ್ ನೀಡಿದರು. ಮನನ್ ವೊಹ್ರಾ (25) ಹಾಗೂ ವೃದ್ಧಿಮಾನ್ ಸಾಹ (21) ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಯುಜ್‌ವೇಂದ್ರ ಚಾಹಲ್ ಅದ್ಭುತ ಸ್ಪೆಲ್ ಮೂಲಕ, ಪಂಜಾಬ್‌ಗೆ ಮತ್ತೆ ಸಂಕಷ್ಟ ತಂದೊಡ್ಡಿದರು. ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 6 ರನ್ ಗಳಿಸಿ ತಮ್ಮ ಕಳಪೆಯಾಟ ಮುಂದುವರಿಸಿದರು. ಮೊದಲ ಮೂರು ಓವರ್‌ಗಳಲ್ಲಿ ಚಾಹಲ್ ಕೇವಲ 6 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.

19ನೇ ಓವರ್ ಕೊನೆಗೆ ಪಂಜಾಬ್ 7 ವಿಕೆಟ್ ಕಳೆದುಕೊಂಡು 119 ರನ್ ಮಾತ್ರ ಗಳಿಸಿತ್ತು. ಆದರೆ ಕೊನೆ ಓವರ್‌ನಲ್ಲಿ ಶೇನ್ ವಾಟ್ಸನ್ 19 ರನ್ ಚಚ್ಚಿಸಿಕೊಂಡರು. ಆಲ್ರೌಂಡರ್ ಅಕ್ಷರ್ ಪಟೇಲ್, ವಾಟ್ಸನ್ ಓವರ್‌ನಲ್ಲಿ ಒಂದು ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ತಂಡ 138 ರನ್ ಕಲೆಹಾಕಲು ನೆರವಾದರು. ಕೇವಲ 17 ಎಸೆತಗಳಲ್ಲಿ 38 ರನ್ ಸಿಡಿಸಿದ ಅಕ್ಷರ್ ಅಜೇಯರಾಗಿ ಉಳಿದರು. ವೇಗಿ ಅನಿಕೇತ್ ಚೌಧರಿ 4 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 17 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್

ಪಂಜಾಬ್ 20 ಓವರ್‌ಗಳಲ್ಲಿ 138/7(ಅಕ್ಷರ್ 38, ವೊಹ್ರಾ 25, ಅನಿಕೇತ್ 2-17),

ಆರ್‌ಸಿಬಿ 19 ಓವರ್‌ಗಳಲ್ಲಿ 119/10(ಮನ್‌ದೀಪ್ 46, ನೇಗಿ 19, ಅಕ್ಷರ್ 3-11)

ಪಂದ್ಯಶ್ರೇಷ್ಠ: ಸಂದೀಪ್ ಶರ್ಮಾ