ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ 2ನೇ ದಿನದಾಟದಲ್ಲೂ ಕರ್ನಾಟಕ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ  ಕರ್ನಾಟಕ ಬಳಿಕ ಬೌಲಿಂಗ್‌ನಲ್ಲಿ 2 ವಿಕೆಟ್ ಕಬಳಿಸಿದೆ. ಇಲ್ಲಿದೆ 2ನೇ ದಿನದಾಟದ ಹೈಲೈಟ್ಸ್.

ಬೆಳಗಾವಿ(ನ.21): ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟದ ದ್ವಿತೀಯ ದಿನವೂ ಅಬ್ಬರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ಗೆ ಆಲೌಟ್ ಆದ ಕರ್ನಾಟಕ, ಮುಂಬೈ ತಂಡದ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ದಿನ ಶತಕ ಸಿಡಿಸಿದ ಕೆವಿ ಸಿದ್ಧಾರ್ಥ್ ದ್ವಿತೀಯ ದಿನವೂ ಬ್ಯಾಟಿಂಗ್ ಮುಂದುವರಿಸಿದರು. ಆದರೆ ಶ್ರೇಯಸ್ ಗೋಪಾಲ್ 48 ರನ್ ಸಿಡಿಸಿ ಔಟಾದರು. ಬಿಆರ್ ಶರತ್ ಶೂನ್ಯ ಸುತ್ತಿದರು. ಆದರೆ ಜೆ ಸುಚಿತ್ 30 ರನ್ ಕಾಣಿಕೆ ನೀಡಿದರು.

ಉತ್ತಮ ಪ್ರದರ್ಶನ ನೀಡಿದ ಕೆವಿ ಸಿದ್ದಾರ್ಥ್ 161 ರನ್ ಸಿಡಿಸಿ ಔಟಾದರು. ಇನ್ನು ಅಭಿಮನ್ಯು ಮಿಥುನ್ ಅಜೇಯ 31 ರನ್ ಕಾಣಿಕೆ ನೀಡಿದರು. ಈ ಮೂಲಕ ಕರ್ನಾಟಕ 400 ರನ್‌ಗೆ ಆಲೌಟ್ ಆಯಿತು. ಮುಂಬೈ ಪರ ಶಿವಂ ದುಬೆ 7 ವಿಕೆಟ್ ಕಬಳಿಸಿ ಗಮನಸೆಳೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ 42 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಅಖಿಲ್ ಹೆರ್ವಾಡ್ಕರ್ ಕೇವಲ 5 ರನ್ ಸಿಡಿಸಿ ಔಟಾದರು. ಆದರೆ ಜಯ್ ಗೋಕುಲ್ ಬಿಸ್ತಾ ಹಾಗೂ ಅಶಯ್ ಸರ್ದೇಸಾಯಿ ಜೊತೆಯಾಟದಿಂದ ಮುಂಬೈ ಚೇತರಿಸಿಕೊಂಡಿತು. ಅಶಯ್ 23 ರನ್ ಸಿಡಿಸಿ ಔಟಾದರು. ಗೋಕುಲ್ ಬಿಸ್ತಾ ಅಜೇಯ 69 ರನ್ ಸಿಡಿಸಿದರು. ದಿನದಾಟದ ಅಂತ್ಯದಲ್ಲಿ ಮುಂಬೈ 2 ವಿಕೆಟ್ ನಷ್ಟಕ್ಕೆ 99 ರನ್ ಸಿಡಿಸಿದೆ. ಇನ್ನು 301 ರನ್ ಹಿನ್ನಡೆಯಲ್ಲಿದೆ.