ಭುವಿಯ ಅಬ್ಬರದ ಆಟಕ್ಕೆ ಕಾರಣ ಯಾರು?: ಭುವಿ ಕ್ರೀಸ್ಗೆ ಬಂದಾಗ ಧೋನಿ ಹೇಳಿದ್ದೇನು?
ಶ್ರೀಲಂಕಾ ವಿರುದ್ಧದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸಲು ಕಾರಣವಾದವರು ಭುವನೇಶ್ವರ್ ಕುಮಾರ್. ತನ್ನ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್'ನಿಂದ ಇಡೀ ದೇಶದ ಗಮನ ಸೆಳೆದರು. ಆದರೆ ತಂಡ ಸಂಕಷ್ಟದಲ್ಲಿ ಸಿಲುಕಿದ್ದ ಸಮಯದಲ್ಲಿ ಆಖಾಡಕ್ಕಿಳಿದ ಭುವಿ ಮನಸ್ಸಿನಲ್ಲಿ ಏನಿತ್ತು..? ಅವರು ಕ್ರೀಸ್'ಗೆ ಬಂದಾಗ ಮತ್ತೊಂದು ಬದಿಯಲ್ಲಿದ್ದ ಧೋನಿ ಏನು ಹೇಳಿದ್ದರು? ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ
ಮುಂಬೈ(ಆ.26): ಲಂಕಾ ವಿರುದ್ಧದ 2ನೇ ಏಕದಿನ ಪಂದ್ಯ ಮುಗಿದು 30ಗಂಟೆಗಳೇ ಕಳೆದು ಹೋಗಿದೆ, ಆದರೂ ಟೀಂ ಇಂಡಿಯಾ ಅಭಿಮಾನಿಗಳು ಆ ಪಂದ್ಯದ ಗುಂಗಿನಿಂದ ಹೊರಬಂದೇ ಇಲ್ಲ. ಅಷ್ಟರ ಮಟ್ಟಿಗೆ 2ನೇ ಪಂದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಕೊನೆಯ ವರೆಗೂ ಕೊಹ್ಲಿ ಹುಡುಗರನ್ನ ಸತಾಯಿಸಿದ್ದ ವಿಜಯಲಕ್ಷ್ಮಿ ಕೊನೆಗೂ ತಥಾಸ್ತು ಅಂದಿದ್ಲು. ಆದರೆ ವಿಜಯಲಕ್ಷ್ಮಿಯನ್ನ ಒಲಿಸಿಕೊಳ್ಳುವ ಜವಾಬ್ದಾರಿ ಹೊತ್ತಿದ್ದು ಮಾತ್ರ ಭುವನೇಶ್ವರ್ ಕುಮಾರ್.
ಒಂದು ಹಂತದಲ್ಲಿ ಟೀಂ ಇಂಡಿಯಾ ಸೋತೇಬಿಡ್ತು ಅಂತ ಎಲ್ಲರೂ ಅಂದುಕೊಂಡಿದ್ದರು. 231ರನ್'ಗಳ ಟಾರ್ಗೆಟ್ ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 131ರನ್'ಗಳಿಗೆ ಪ್ರಮುಖ 7 ವಿಕೆಟ್'ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿಬಿಟ್ಟಿತ್ತು. ಆದರೆ ಈ ವೇಳೆ ಕ್ರೀಸ್'ಗಿಳಿದ ಭುವನೇಶ್ವರ್ ಕುಮಾರ್ ಮ್ಯಾಜಿಕ್ ಮಾಡಿದ್ರು. ಸೋಲಿನ ಹಳ್ಳಕ್ಕೆ ಬೀಳುತ್ತಿದ್ದ ಭಾರತವನ್ನ ಕೈ ಹಿಡಿದು ಮೇಲೆತ್ತಿದ್ದರು.
ಧೋನಿ ಇದ್ರೂ ಮ್ಯಾಚ್ ಫಿನಿಷರ್ ಜವಾಬ್ದಾರಿ ಹೊತ್ತ ಭುವಿ
ಭುವಿ ಎದುರು ಮೊನ್ನೆ ಧೋನಿ ಮಂಕಾಗಿಬಿಟ್ಟಿದ್ದರು. ಟೀಂ ಇಂಡಿಯಾ ಕಂಡ ಅದ್ಭುತ ಮ್ಯಾಚ್ ಫನಿಷರ್ ಕ್ರೀಸ್ನಲ್ಲಿದ್ರೂ ಅವರನ್ನೇ ಸೈಡ್ ಹೊಡೆದು ಭುವಿ ಮ್ಯಾಚ್ ಫಿನಿಷ್ ಮಾಡಿದ್ದರೂ. ಧೋನಿ ಸಿಂಗಲ್ಸ್ ಮೊರೆ ಹೋಗಿದ್ರೆ ಭುವಿ ಮಾತ್ರ ಬೌಂಡರಿ ಸಿಕ್ಸರ್'ಗಳಲ್ಲಿ ಮುಳುಗಿ ಹೋಗಿದ್ರು.
ಇನ್ನೂ ಧೋನಿ ಕ್ರೀಸ್ಗೆ ಬಂದ ನಂತರ ಬಂದಿದ್ದ ಭುವಿ ಮಹಿಗಿಂತ ಹೆಚ್ಚು ರನ್ಗಳಿಸಿದ್ರು. ಧೋನಿ ಕೇವಲ 45 ರನ್ಗಳಿಸದ್ರೆ ಭುವಿ 53ರನ್ಗಳಿಸಿ ಧೋನಿಯನ್ನೇ ಮಂಕು ಮಾಡಿಬಿಟ್ಟಿದ್ರು. ಇನ್ನೂ ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಭುವಿ ಕೊಟ್ಟ ಉತ್ತರವೇನು ಗೊತ್ತಾ?
ಭುವಿ ಕ್ರೀಸ್ಗೆ ಬಂದಾಗ ಧೋನಿ ಹೇಳಿದ್ದೇನು..?
ಭುವಿ ಏನೋ ಧೋನಿಯನ್ನೇ ಸೈಡ್ ಹೊಡೆದು ಮ್ಯಾಚ್ ಫಿನಿಷ್ ಮಾಡಿದ್ದರು. ಆದ್ರೆ ಆ ರೀತಿ ಬ್ಯಾಟಿಂಗ್ ಮಾಡಲು ಹೇಳಿದ್ದೇ ಧೋನಿಯಂತೆ. 7 ವಿಕೆಟ್ ಕಳೆದುಕೊಂಡಿದ್ದ ಸಂಧರ್ಭದಲ್ಲಿ ಕ್ರೀಸ್'ಗೆ ಇಳಿದ ಭುವಿ ನೇರಾ ಧೋನಿಯತ್ತ ತೆರಳಿದ್ರು. ಆಗ ಧೋನಿ ಹೇಳಿದ ಮಾತು ಒಂದೇ ನೀನು ನಿನ್ನ ಆಟವಾಡು ಅಂತ.
ಇನ್ನೂ ಸದ್ಯ ಇಡೀ ದೇಶವೇ ಭುವಿಯ ಬಗ್ಗೆ ಆಡಿ ಹೊಗಳುತ್ತಿದೆ. ಎಲ್ಲರಿಗೂ ಭುವನೇಶ್ವರ್ ಕುಮಾರ್ ಒಬ್ಬ ಅದ್ಭುತ ಬೌಲರ್ ಎನ್ನುವುದು ಗೊತ್ತಿತ್ತು. ಆದರೆ ಆತನಲ್ಲಿ ಒಬ್ಬ ಸೂಪರ್ ಬ್ಯಾಟ್ಸ್'ಮನ್ ಕೂಡ ಇದ್ದಾನೆ ಆತನೂ ಮ್ಯಾಚ್ ಫಿನಿಷ್ ಮಾಡಬಲ್ಲ ಎನ್ನುವುದು ಗೊತ್ತಾಗಿದ್ದು ಮೊನ್ನಯೇ. ಇನ್ನೂ ಭುವಿಗಂತೂ ಆತನಲ್ಲಿ ಇಷ್ಟೆಲ್ಲಾ ಶಕ್ತಿ ಇದೆ ಅನ್ನೋದೇ ಗೊತ್ತಿರಲಿಲ್ಲವಂತೆ.
ಸತತ ವೈಫಲ್ಯದಿಂದ ಕೊನೆಗೂ ಹೊರ ಬಂದ ಭುವಿ
ಈಗ ಭುವಿ ಎಲ್ಲರ ಪಾಲಿನ ಹೀರೋ ಆಗಿರಬಹುದು. ಆದರೆ ಇದೇ ಭುವಿ 2ದಿನದ ಹಿಂದೆ ಹೀಗಿರಲಿಲ್ಲ. ಸತತ ವೈಫಲ್ಯ ಅವರನ್ನ ಇನ್ನಿಲ್ಲದಂತೆ ಕಾಡಿಬಿಟ್ಟಿದೆ. ಟೆಸ್ಟ್ ಮತ್ತು ಏಕದಿನ ಸರಣಿಗೆಂದು ಲಂಕಾಗೆ ಆಗಮಿಸಿದ ಭುವಿಗೆ ಮೂರು ಟೆಸ್ಟ್ನಲ್ಲೂ ಅವಕಾಶ ಸಿಗಲಿಲ್ಲ. ಇನ್ನೂ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕರೂ ಆಡಿದ್ದ ಎರಡೂ ಪಂದ್ಯದಲ್ಲೂ ಒಂದೂ ವಿಕೆಟ್ ಪಡೆಯಲು ಆಗಿರಲಿಲ್ಲ. ಇನ್ನೇನು ಮತ್ತೆ ಭುವಿಗೆ ಮತ್ತೆ ಬೆಂಚ್ ಕಾಯೋ ಟೈಮ್ ಬಂತು ಎನ್ನುವಾಗಲೇ ಮ್ಯಾಜಿಕ್ ಆಗಿಬಿಟ್ಟಿತ್ತು. ಬೌಲಿಂಗ್'ನಲ್ಲಿ ವಿಫಲವಾದರೂ ಬ್ಯಾಟ್ನಲ್ಲಿ ಅಬ್ಬರಿಸಿಬಿಟ್ರು.
ಒಟ್ಟಿನಲ್ಲಿ ಸದ್ಯ ಭುವಿಯ ಶುಕ್ರದೆಸೆ ಶುರುವಾಯ್ತು ಅನಿಸುತ್ತೆ. ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು ವರ್ಷಗಳೇ ಕಳೆದ್ರೂ ತಂಡದಲ್ಲಿ ಖಾಯಂ ಸ್ಥಾನ ಇಲ್ಲದೆ ಪರದಾಡುತ್ತಿದ್ದ ಭವನೇಶ್ವರ ಕುಮಾರ್ ಈ ಒಂದು ಇನ್ನಿಂಗ್ಸ್'ನಿಂದ ತಂಡದಲ್ಲಿನ ತಮ್ಮ ಸ್ಥಾನವನ್ನ ಗಟ್ಟಿ ಮಾಡಿಕೊಳ್ತಾರಾ..? ಕಾದು ನೋಡಬೇಕು.