‘‘ಈ ನಾಲ್ವರು ಆಟಗಾರರಿಂದಲೇ ಫಲಿತಾಂಶವನ್ನು ಎದುರು ನೋಡುತ್ತಿದ್ದೇನೆ. ಒಂದೊಮ್ಮೆ ತಂಡಕ್ಕೆ ಅಗತ್ಯವೆನಿಸಿದರೆ ಪೇಸ್ ಹಾಗೂ ಬೋಪಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಲಾಗುತ್ತದೆ’’- ಮಹೇಶ್ ಭೂಪತಿ

ನವದೆಹಲಿ(ಮಾ.28): ಇದೇ ಮೊದಲ ಬಾರಿಗೆ ಡೇವಿಸ್ ಕಪ್ ತಂಡದ ಆಟವಾಡದ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮಾಜಿ ಡಬಲ್ಸ್ ಆಟಗಾರ ಮಹೇಶ್ ಭೂಪತಿ, ಬೆಂಗಳೂರಿನಲ್ಲಿ ಏಪ್ರಿಲ್ 7ರಿಂದ 9ರವರೆಗೆ ನಡೆಯಲಿರುವ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಾವಳಿಗೆ ನಾಲ್ವರು ಸಿಂಗಲ್ಸ್ ಆಟಗಾರರನ್ನು ಆರಿಸುವ ಮೂಲಕ ದಿಟ್ಟ ನಿರ್ಧಾರ ತಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿರುವ ಭೂಪತಿ, 269ನೇ ವಿಶ್ವ ಶ್ರೇಯಾಂಕಿತ ರಾಮ್‌ ಕುಮಾರ್ ರಾಮನಾಥನ್, ಯೂಕಿ ಭಾಂಬ್ರಿ (307), ಪ್ರಗ್ನೇಶ್ ಗುಣೇಶ್ವರನ್ (325) ಹಾಗೂ ಎನ್. ಶ್ರೀರಾಮ್ ಬಾಲಾಜಿ (350)ಗೆ ಅವಕಾಶ ಕಲ್ಪಿಸಿದ್ದಾರೆ.

ಸಾಮಾನ್ಯವಾಗಿ ಡೇವಿಸ್ ಕಪ್ ಟೂರ್ನಿಯಲ್ಲಿ ಡಬಲ್ಸ್ ಆಟಗಾರರು ತಂಡದ ಬಲವಾಗಿರುತ್ತಾರೆ. ಸ್ವತಃ ಭೂಪತಿ ಹಾಗೂ ಪೇಸ್ ಜೋಡಿ ಡೇವಿಸ್ ಕಪ್‌'ನಲ್ಲಿ ಮಾತ್ರವಲ್ಲದೆ, 1990ರ ದಶಕದಲ್ಲಿ ಎಟಿಪಿ ಟೂರ್‌'ನಲ್ಲಿಯೂ ವಿಶೇಷ ಛಾಪು ಮೂಡಿಸಿದ್ದರು. ಆದರೆ, ಉಜ್ಬೇಕಿಸ್ತಾನ ವಿರುದ್ಧದ ಭಾರತ ತಂಡಕ್ಕೆ ಆಯ್ಕೆಯಾಗಿರುವ ನಾಲ್ವರು ಸಿಂಗಲ್ಸ್ ಆಟಗಾರರಾಗಿದ್ದಾರೆ.

‘‘ಈ ನಾಲ್ವರು ಆಟಗಾರರಿಂದಲೇ ಫಲಿತಾಂಶವನ್ನು ಎದುರು ನೋಡುತ್ತಿದ್ದೇನೆ. ಒಂದೊಮ್ಮೆ ತಂಡಕ್ಕೆ ಅಗತ್ಯವೆನಿಸಿದರೆ ಪೇಸ್ ಹಾಗೂ ಬೋಪಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಲಾಗುತ್ತದೆ’’ ಎಂದು ತಂಡದ ಆಯ್ಕೆಯನ್ನು ಭೂಪತಿ ಸಮರ್ಥಿಸಿಕೊಂಡಿದ್ದಾರೆ.