KPL 2019: ಉದ್ಘಾಟನಾ ಪಂದ್ಯ ಮಳೆಯಿಂದ ರದ್ದು!
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಆದರೆ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗೋ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹೋರಾಡಿದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರ್ ವಾರಿಯರ್ಸ್ ಫಲಿತಾಂಶ ಕಾಣದೆ ಅಂಕ ಹಂಚಿಕೊಂಡಿತು.
ಬೆಂಗಳೂರು(ಆ.16): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಚಾಲನೆ ಸಿಕ್ಕಿದೆ. ಒಪನಿಂಗ್ ಸೆರೆಮನಿ ಬಳಿಕ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರ್ ವಾರಿಯರ್ಸ್ ಹೋರಾಟ ನಡೆಸಿತು. ಆದರೆ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ. ಈ ಮೂಲಕ ಬೆಂಗಳೂರು ಹಾಗೂ ಮೈಸೂರು ಒಂದೊಂದು ಅಂಕ ಹಂಚಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಜೆ ಸುಚಿತ್ ಶಾಕ್ ನೀಡಿದರು. ಸುಚಿತ್ ಸ್ಪಿನ್ ದಾಳಿಗೆ ತತ್ತರಿಸಿದ ಬೆಂಗಳೂರು ಆರಂಭದಲ್ಲೇ ಶರತ್ ಬಿಆರ್ ವಿಕೆಟ್ ಕಳೆದುಕೊಂಡಿತು. ರೋಹನ್ ಕದಮ್ 23 ರನ್ ಸಿಡಿಸಿ ಔಟಾದರು. ಬೆಂಗಳೂರು 40 ರನ್ಗೆ 2 ವಿಕೆಟ್ ಕಳೆದುಕೊಂಡಿತು.
ನಾಯಕ ರಾಂಗ್ಸೆನ್ ಜೊನಾಥನ್ 17 ರನ್ ಸಿಡಿಸಿ ಔಟಾದರು. ಆದರೆ ನಿಕಿನ್ ಜೊಸ್ ತಂಡಕ್ಕೆ ಆಸರೆಯಾದರು. ಜೋಸ್ ಅಜೇಯ 28 ರನ್ ಸಿಡಿಸಿದರು. ಬೆಂಗಳೂರು 13 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 88 ರನ್ ಸಿಡಿಸಿತು. ಅಷ್ಟರಲ್ಲೇ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು. ಆದರೆ ಪಂದ್ಯ ಪುನರ್ ಆರಂಭಕ್ಕೆ ಮಳೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಮಾಡಲಾಯಿತು. 2019ರ ಕೆಪಿಎಲ್ ಟೂರ್ನಿಯ ಮೊದಲ ಪಂದ್ಯವೇ ಮಳೆಗೆ ಆಹುತಿಯಾದ ಕಾರಣ ಅಭಿಮಾನಿಗಳಿಗೆ ನಿರಾಸೆಯಾಯಿತು.