ಆರ್'ಸಿಬಿ ಇಂದು ಗೆದ್ದರೆ ಪ್ಲೇ ಆಫ್'ಗೆ ಒಂದಿಷ್ಟು ಅವಕಾಶ
ಐಪಿಎಲ್ ಅಂತಿಮ ಘಟ್ಟದಲ್ಲಿ ಏನು ಬೇಕಿದ್ದರೂ ಆಗಬಹುದಾದ ಸಾಧ್ಯತೆ ಇರುವುದರಿಂದ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಭಾರೀ ಒತ್ತಡಕ್ಕೆ ಸಿಲುಕಲಿದೆ. ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್ಭಟಿಸಿ ಲಯ ಕಾಯ್ದುಕೊಂಡಿದ್ದರೆ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 245 ರನ್ ಚಚ್ಚಿಸಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ಗಳು ಆರ್ ಸಿಬಿಯ ತಾರಾ ಜೋಡಿಯನ್ನು ಕಟ್ಟಿಹಾಕಲು ಹರಸಾಹಸ ಪಡಬೇಕಾಗಬಹುದು.
ಇಂಧೋರ್(ಮೇ.14): ಸುರಂಗದ ಕೊನೆಯಲ್ಲಿ ಬೆಳಕು ಕಾಣುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ ಪ್ಲೇ-ಆಫ್ ಲೆಕ್ಕಾಚಾರವನ್ನು ತೆಲೆಕೆಳಗು ಮಾಡಲು ಕಾಯುತ್ತಿದೆ.
ಇಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಲಿವೆ. ಆರ್ಸಿಬಿ ಪ್ಲೇ-ಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿದ್ದರೂ, ತಾಂತ್ರಿಕವಾಗಿ ತಂಡ ಅಂತಿಮ ೪ರಲ್ಲಿ ಸ್ಥಾನ ಪಡೆಯಲು ಸಣ್ಣ ಅವಕಾಶವಿದೆ. ಹೀಗಾಗಿ, ತಂಡಕ್ಕಿದು ಮತ್ತೊಮ್ಮೆ ಮಾಡು ಇಲ್ಲವೇ ಮಡಿ ಪಂದ್ಯ. ಲೀಗ್ನ ಆರಂಭಿಕ ಹಂತದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್ಸ್ ಇಲೆವೆನ್ ಪಂಜಾಬ್, ಕಳೆದೆರಡು ಪಂದ್ಯಗಳಲ್ಲಿ ಸೋಲುಂಡು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಆದರೂ 12 ಅಂಕಗಳೊಂದಿಗೆ ತಂಡ ಅಗ್ರ 4ರಲ್ಲಿ ಸ್ಥಾನ ಪಡೆದಿದೆ.
ಐಪಿಎಲ್ ಅಂತಿಮ ಘಟ್ಟದಲ್ಲಿ ಏನು ಬೇಕಿದ್ದರೂ ಆಗಬಹುದಾದ ಸಾಧ್ಯತೆ ಇರುವುದರಿಂದ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಭಾರೀ ಒತ್ತಡಕ್ಕೆ ಸಿಲುಕಲಿದೆ. ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್ಭಟಿಸಿ ಲಯ ಕಾಯ್ದುಕೊಂಡಿದ್ದರೆ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 245 ರನ್ ಚಚ್ಚಿಸಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ಗಳು ಆರ್ ಸಿಬಿಯ ತಾರಾ ಜೋಡಿಯನ್ನು ಕಟ್ಟಿಹಾಕಲು ಹರಸಾಹಸ ಪಡಬೇಕಾಗಬಹುದು.
ಎರಡೂ ತಂಡಗಳು ತಮ್ಮ ಬ್ಯಾಟಿಂಗ್ ವಿಭಾಗದ ಮೇಲೆ ಹೆಚ್ಚು ಅವಲಂಬಿತ ಗೊಂಡಿವೆ. ಕೊಹ್ಲಿ-ಎಬಿಡಿ ಆರ್ಸಿಬಿಯ ಬ್ಯಾಟಿಂಗ್ ಬೆನ್ನೆಲುಬಾದರೆ, ಪ್ರೀತಿ ಜಿಂಟಾ ಪಡೆ ಕೆ.ಎಲ್.ರಾಹುಲ್ ಹಾಗೂ ಕ್ರಿಸ್ ಗೇಲ್ ರನ್ನು ನೆಚ್ಚಿಕೊಂಡಿದೆ. ಆರ್ಸಿಬಿಯ ಆರಂಭಿಕರ ಸಮಸ್ಯೆ ಮುಂದುವರಿದಿದ್ದು, ಕೆಳ ಮಧ್ಯಮ ಕ್ರಮಾಂಕ ದಿಂದಲೂ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ದೊರೆಯುತ್ತಿಲ್ಲ. ಇದು ಕೊಹ್ಲಿ-ಎಬಿಡಿ ಮೇಲಿನ ಒತ್ತಡವನ್ನು ದುಪ್ಪಟ್ಟಾಗಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಪರಿಸ್ಥಿತಿ ಸಹ ವಿಭಿನ್ನವಾಗೇನೂ ಇಲ್ಲ. ರಾಹುಲ್ ಹಾಗೂ ಗೇಲ್ ಸ್ಫೋಟಕ ಆರಂಭ ಒದಗಿಸಿದರೆ ಮಾತ್ರ ತಂಡ ಗೆಲುವು ಸಾಧಿಸಲಿದೆ. ಇವರಿಬ್ಬರ ಪ್ರದರ್ಶನದ ಮೇಲೆ ತಂಡದ ಬ್ಯಾಟಿಂಗ್ ವಿಭಾಗ ನಿಂತಿದೆ. ಮಯಾಂಕ್ ಅಗರ್ವಾಲ್ ನಿರೀಕ್ಷೆ ಹುಸಿಗೊಳಿಸುತ್ತಿದ್ದರೆ, ಕರುಣ್ ದೊಡ್ಡ ಮೊತ್ತ
ಗಳಿಸುತ್ತಿಲ್ಲ. ಮನೋಜ್ ತಿವಾರಿ, ಆ್ಯರೋನ್ ಫಿಂಚ್ ಸಹ ಜವಾಬ್ದಾರಿ ಅರಿತು ಆಡುತ್ತಿಲ್ಲ.
ಆರ್ಸಿಬಿ, ಪಂಜಾಬ್ ಎರಡೂ ತಂಡಗಳಿಗೆ ಬೌಲರ್ಗಳದ್ದೇ ಚಿಂತೆ. ಪಂಜಾಬ್ಗೆ ಆ್ಯಂಡ್ರೂ ಟೈ ಹಾಗೂ ಮುಜೀಬ್ ರಹಮಾನ್ ಆಸರೆಯಾಗಿದ್ದಾರೆ. ಆದರೆ ಆರ್.ಅಶ್ವಿನ್, ಅಕ್ಷರ್ ಪಟೇಲ್, ಮೋಹಿತ್ ಶರ್ಮಾ, ಬರೀಂದರ್ ಸ್ರನ್ ದುಬಾರಿಯಾಗುತ್ತಿದ್ದಾರೆ. ಇದು ತಂಡದ ಈ ಸ್ಥಿತಿಗೆ ಕಾರಣವಾಗಿದೆ. ಮತ್ತೊಂದೆಡೆ ಆರ್ಸಿಬಿಯ ಯಶಸ್ವಿ ಬೌಲರ್ ಎನಿಸಿಕೊಂಡಿರುವುದು ಯಜುವೇಂದ್ರ ಚಹಲ್ ಮಾತ್ರ. ಉಮೇಶ್ ಯಾದವ್ ವಿಕೆಟ್ ಕಬಳಿಸಿದ್ದಾರೆಯಾದರೂ, ಅವರ ಎಕಾನಮಿ ರೇಟ್ ಹೆಚ್ಚಿದೆ. ಮೊಹ ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಸೇರಿ ಮತ್ತೆಲ್ಲರೂ ನಿರಾಸೆ ಮೂಡಿಸಿದ್ದಾರೆ. ಅನುಭವಿ ವೇಗಿ ಟಿಮ್ ಸೌಥಿ ಮೇಲೆ ಕೊಹ್ಲಿ ಹೆಚ್ಚಿನ ನಂಬಿಕೆ ಇಡಬೇಕಾಗಿದೆ.