ಗ್ರೇಟರ್​​ ನೋಯ್ಡಾ(ಸೆ.15): ದುಲೀಪ್​​ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಇಂಡಿಯಾ ಬ್ಲೂ ಯಶಸ್ವಿಯಾಗಿದೆ. ಫೈನಲ್​​​ ಪಂದ್ಯದ ಕೊನೆ ದಿನದಾಟದಲ್ಲಿ ಗೆಲ್ಲಲು 10 ವಿಕೆಟ್​​ ಪಡೆಯಲು ಯಶಸ್ವಿಯಾದ ಗಂಭೀರ್​​ ಪಡೆ ಇತಿಹಾಸ ಬರೆದಿದೆ. ಇನ್ನು ಪಿಂಕ್​​​ ಬಾಲ್​​​ನ ಹೊನಲು-ಬೆಳಕಿನ ಟೂರ್ನಿ ಕೂಡ ಯಶಸ್ವಿ ಮುಕ್ತಾಯ ಕಂಡಿದೆ.

ಇಡೀ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಗಂಭೀರ್​​ ಪಡೆ ಕಡೆಗೂ ಟ್ರೋಫಿ ಎತ್ತಿ ಹಿಡಿಯಲು ಸಫಲವಾಯ್ತು. ಲೀಗ್​ ಹಂತದಲ್ಲಿಯೇ ಬ್ಲೂ ಭರ್ಜರಿ ಪ್ರದರ್ಶನ ನೀಡಿತ್ತು. ಒಂದು ಗೆಲುವು ಹಾಗೂ ಒಂದು ಡ್ರಾನೊಂದಿಗೆ ಫೈನಲ್​​ ಪ್ರವೇಶಿಸಿತ್ತು. ಇನ್ನು ಎರಡು ಡ್ರಾಗಳೊಂದಿಗೆ ಫೈನಲ್​​ ಪ್ರವೇಶಿಸಿದ್ದ ರೆಡ್​​​ ತಂಡ ಟ್ರೋಫಿಗಾಗಿ ಬ್ಲೂ ಪಡೆಗೆ ಸವಾಲ್​​ ಎಸೆದಿತ್ತು.

ಮೊದಲ ಇನ್ನಿಂಗ್ಸ್​​ನಲ್ಲಿಯೇ ಗೌತಿ ಪಡೆ ಭರ್ಜರಿ 336ರನ್​​ಗಳ ಮುನ್ನಡೆ ಸಾಧಿಸಿತ್ತು. ಚೇತೇಶ್ವರ್​​ ಪೂಜಾರಾ ಅಜೇಯ ದ್ವಿಶತಕದಾಟ, ಜಾಕ್ಸನ್​​ ಶತಕ ಹಾಗೂ ನಾಯಕ ಗಂಭೀರ್​​ ಅವರ 98ರನ್​​ಗಳ ನೆರವಿನಿಂದ ಫಸ್ಟ್​​​ ಇನ್ನಿಂಗ್ಸ್​​ನಲ್ಲಿ 6 ವಿಕೆಟ್​​ ನಷ್ಟಕ್ಕೆ 693ರನ್​​ ಕಲೆ ಹಾಕಿ ಡಿಕ್ಲೇರ್​​ ಮಾಡ್ಕೊಂಡಿತ್ತು. 

ನಾಲ್ಕನೇ ದಿನದಲ್ಲಿ 2ನೇ ಇನ್ನಿಂಗ್ಸ್​​ ಆಟಕ್ಕೆ ವರುಣ ಕೊಂಚ ಅಡ್ಡಿ ಪಡೆಸಿದ್ದ. ಆದರೆ, 5ನೇ ದಿನದ ಆರಂಭದಲ್ಲಿಯೇ 5 ವಿಕೆಟ್​​ ನಷ್ಟಕ್ಕೆ 179 ರನ್​​ ಕಲೆ ಹಾಕಿದ ಇಂಡಿಯಾ ಬ್ಲೂ 2ನೇ ಇನ್ನಿಂಗ್ಸ್​​ನಲ್ಲಿಯೂ ಡಿಕ್ಲೇರ್​​ ಮಾಡಿಕೊಂಡಿತು.

ಕೊನೆ ದಿನದಾಟದಲ್ಲಿ ಇಂಡಿಯಾ ರೆಡ್​​​ ಗೆಲ್ಲಲು 517 ರನ್​​ಗಳ ಗುರಿ ಬೆನ್ನತ್ತಿತ್ತು. ಆದರೆ, ಜಡೇಜಾ ಸ್ಪಿನ್​​ ಮೋಡಿಯ ಮುಂದೆ ಆಟ ನಡೆಯಲಿಲ್ಲ. ಇದಕ್ಕೆ ಕರಣ್​​ ಶರ್ಮಾ ಕೂಡ ಸಾಥ್​​ ನೀಡಿದರು. ಜಡ್ಡು 5 ವಿಕೆಟ್​​ ಉರುಳಿಸಿದರೆ, ಕರಣ್​​​ 4 ವಿಕೆಟ್​​ ಕೀಳುವ ಮೂಲಕ ರೆಡ್​​​ ತಂಡವನ್ನು 161 ರನ್​​ಗಳಿಗೆ ಆಲೌಟ್​​ ಮಾಡಿದರು.

ಅಲ್ಲಿಗೆ ಇಂಡಿಯಾ ಬ್ಲೂ 355 ರನ್​​ಗಳ ಭರ್ಜರಿ ಜಯ ದಾಖಲಿಸ್ತು. ಇನ್ನು ರೆಡ್​​​ ತಂಡ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.