2019ರ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಇದೀಗ ಟೀಮ್ಇಂಡಿಯಾ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ವಿಶ್ವಕಪ್ ಆಡೋ ಗುರಿ ಇಟ್ಟುಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸ್ಥಾನ ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಮುಂಬೈ(ಜೂನ್.2): ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕನಾಗಿ ಅದ್ಬುತ ಪ್ರದರ್ಶನ ನೀಡಿದ ಮುಂಬೈ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂಬರೋ ವಿಶ್ವಕಪ್ ಟೂರ್ನಿ ಆಡಬೇಕೆಂಬ ಛಲದಲ್ಲಿದ್ದಾರೆ. ಸಿಕ್ಕ ಅವಕಾಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 2019ರ ವಿಶ್ವಕಪ್ ಟೂರ್ನಿ ಆಡಲಿದ್ದೇನೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇಂಗ್ಲೆಂಡ್ ವಿರುದ್ಧದ ನಿಗಧಿತ ಓವರ್ ಕ್ರಿಕೆಟ್ ಸರಣಿಗೆ ಆಯ್ಕೆಯಾಗಿರುವ ಶ್ರೇಯಸ್ ಅಯ್ಯರ್ ಸಿಕ್ಕ ಅವಕಾಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜುಲೈನಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿ, ವಿಶ್ವಕಪ್ ದೃಷ್ಟಿಯಿಂದ ಮಹತ್ವದ್ದಾಗಿದೆ. 2019ರಲ್ಲಿ ವಿಶ್ವಕಪ್ ಕೂಡ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಹೀಗಾಗಿ ಈ ಪ್ರವಾಸ ನನ್ನ ಪಾಲಿಗೆ ಮಾಡು ಇಲ್ಲವೇ ಮಡಿ ಎಂದು ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಅಯ್ಯರ್ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದರು. ಗೌತಮ್ ಗಂಭೀರ್ ದಿಢೀರ್ ನಾಯಕತ್ವದಿಂದ ಕೆಳಗಿಳಿದ ಕಾರಣ, ಶ್ರೇಯಸ್ ಅಯ್ಯರ್ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕತ್ವ ವಹಿಸಿಕೊಂಡರು. ಬ್ಯಾಟ್ಸ್‌ಮನ್ ಆಗಿ ಅದ್ಬುತ ಪ್ರದರ್ಶನ ನೀಡಿದ ಅಯ್ಯರ್, 14 ಪಂದ್ಯದಲ್ಲಿ 411 ರನ್ ಸಿಡಿಸಿದರು. ಅಜೇಯ 93 ರನ್ ಅಯ್ಯರ್ 2018ರ ಐಪಿಎಲ್‌ನ ವೈಯುಕ್ತಿಕ ಗರಿಷ್ಠ ಸ್ಕೋರ್. ಇದೀಗ ಇಂಗ್ಲೆಂಡ್ ಪ್ರವಾಸದಲ್ಲೂ ಇದೇ ರೀತಿ ಪ್ರದರ್ಶನ ನೀಡಲು ಅಯ್ಯರ್ ತಯಾರಿ ಆರಂಭಿಸಿದ್ದಾರೆ.ಜುಲೈ 2 ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 3 ಟಿ-ಟ್ವೆಂಟಿ, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯ ಆಡಲಿದೆ.