ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸಲು ರೆಡಿಯಾದ ಭಾರತದ ಯುವ ಪಡೆ
ಇಲ್ಲಿನ ನೆಹರೂ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಭಾರತ ಮತ್ತೊಮ್ಮೆ ಬಲಿಷ್ಠ ಎದುರಾಳಿಯ ವಿರುದ್ಧ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದೆ.
ನವದೆಹಲಿ(ಅ.9): ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ 0-3 ಗೋಲುಗಳಿಂದ ಸೋತರೂ ಅಭಿಮಾನಿಗಳ ಮನ ಸೆಳೆದಿದ್ದ ಭಾರತ ತಂಡ, ಇಂದು ನಡೆಯಲಿರುವ ಅಂಡರ್-17 ಫುಟ್ಬಾಲ್ ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಸೆಣಸಾಡಲಿದೆ.
ಇಲ್ಲಿನ ನೆಹರೂ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಭಾರತ ಮತ್ತೊಮ್ಮೆ ಬಲಿಷ್ಠ ಎದುರಾಳಿಯ ವಿರುದ್ಧ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದೆ. ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ನೈಜರ್ ತಂಡದಿಂದ ಭಾರತ ಸ್ಫೂರ್ತಿ ಪಡೆಯಬೇಕಿದೆ. ನೈಜರ್ ತನ್ನ ಚೊಚ್ಚಲ ಪಂದ್ಯದಲ್ಲಿ ಉ.ಕೊರಿಯಾ ವಿರುದ್ಧ ಜಯಭೇರಿ ಬಾರಿಸಿತ್ತು. ಆಫ್ರಿಕಾದ ತಂಡ ಜಯ ಸಾಧಿಸಿದಂತೆಯೇ ಭಾರತ ಸಹ ಗೆಲುವು ಪಡೆಯಲಿದೆ ಎನ್ನುವ ಚರ್ಚೆ ನಡೆಯುತ್ತಿದೆಯಾದರೂ ಅದು ಅಷ್ಟು ಸುಲಭವಲ್ಲ.
ದ.ಅಮೆರಿಕದ ಬಲಿಷ್ಠ ತಂಡಗಳಲ್ಲಿ ಒಂದಾದ ಕೊಲಂಬಿಯಾ, ತಾನಾಡಿದ ಮೊದಲ ಪಂದ್ಯದಲ್ಲಿ ಘಾನಾ ವಿರುದ್ಧ ಸೋಲು ಕಂಡಿತ್ತು. ಹೀಗಾಗಿ, ಮೊದಲ ಗೆಲುವಿಗಾಗಿ ಕೊಲಂಬಿಯಾ ಪಣ ತೊಟ್ಟಿದೆ. ‘ಕೊಲಂಬಿಯಾ ಬಲಿಷ್ಠ ತಂಡ. ನಮ್ಮನ್ನು ಸೋಲಿಸಲು ತಂಡ ಸಮರ್ಥವಾಗಿದೆ. ಆದರೆ ನಾವು ಹೋರಾಟ ಬಿಡುವುದಿಲ್ಲ’ ಎಂದು ಭಾರತದ ಕೋಚ್ ಲೂಯಿಸ್ ನಾರ್ಟನ್ ಹೇಳಿದ್ದಾರೆ.
ಪಂದ್ಯ ಆರಂಭ: ಸಂಜೆ 8ಕ್ಕೆ, ಪ್ರಸಾರ:
ಸೋನಿ ಟೆನ್ 3, ಡಿಡಿ ಸ್ಪೋರ್ಟ್ಸ್.