ಆಸ್ಟ್ರೇಲಿಯಾ ಬಾರಿಸಿದ್ದು 158, ಭಾರತ 169 ರನ್ - ಆದರೂ ಸೋಲು ಯಾಕೆ?
ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯದಲ್ಲಿನ ಡಕ್ವರ್ತ್ ನಿಯಮ ಯಾರಿಗೂ ಅರ್ಥವೇ ಆಗಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಆಸ್ಟ್ರೇಲಿಯಾ 158 ರನ್ ಸಿಡಿಸಿದರೆ ಭಾರತ 169 ರನ್ ಸಿಡಿಸಿತು. ಆದರೂ ಟೀಂ ಇಂಡಿಯಾಗೆ ಸೋಲು ಆಗಿದ್ದು ಹೇಗೆ? ಇಲ್ಲಿದೆ ವಿವರ.
ಬ್ರಿಸ್ಬೇನ್(ನ.22): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯ ಹಲವರಲ್ಲಿ ಗೊಂದಲ ಮೂಡಿಸಿದೆ. ಆಸ್ಟ್ರೇಲಿಯಾ ಭಾರಿಸಿದ್ದು 158 ರನ್. ಆದರೆ ಭಾರತಕ್ಕೆ ಟಾರ್ಗೆಟ್ ನೀಡಿದ್ದು 174 ರನ್. ಇನ್ನೂ ಟೀಂ ಇಂಡಿಯಾ 169 ರನ್ ಸಿಡಿಸಿ ಕೇವಲ 4 ರನ್ಗಳಿಂದ ಸೋಲು ಅನುಭವಿಸಿತು.
ಈ ಪರಿಸ್ಥಿತಿಗೆ ಕಾರಣ ಮಳೆ. ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸುಮಾರು 45 ನಿಮಿಷಗಳ ಕಾಲ ಮಳೆ ಸುರಿಯಿತು. ಹೀಗಾಗಿ 16.1 ನೇ ಓವರ್ನಲ್ಲಿ ಪಂದ್ಯವನ್ನ ಸ್ಥಗಿತಗೊಳಿಸಲಾಯಿತು. ಮಳೆಯಿಂದಾಗಿ ಡಕ್ವರ್ತ್ ನಿಯಮ ಅನ್ವಯಿಸಲಾಯಿತು. ಹೀಗಾಗಿ ಮಳೆ ಬಳಿಕ ಪಂದ್ಯವನ್ನ 17 ಓವರ್ಗೆ ಸೀಮಿತಗೊಳಿಸಿದರು.
ಇನ್ನುಳಿದ 5 ಎಸೆತದ ಎದುರಿಸಿದ ಆಸ್ಟ್ರೇಲಿಯಾ ಒಟ್ಟು 4 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು. ಆದರೆ ಡಿಎಲ್ ನಿಯಮದನ್ವಯ ಭಾರತಕ್ಕೆ 174 ರನ್ ಟಾರ್ಗೆಟ್ ನೀಡಲಾಯಿತು. ಆಸಿಸ್ ಪ್ರತಿ ಓವರ್ನಲ್ಲಿ ಗಳಿಸಿದ ರನ್ ಸರಾಸರಿ ಆಧರಿಸಿ ಡಕ್ವರ್ತ್ ನಿಯಮದ ಪ್ರಕಾರ ಭಾರತಕ್ಕೆ 17 ಓವರ್ಗಳಲ್ಲಿ 174 ರನ್ ಟಾರ್ಗೆಟ್ ನೀಡಲಾಗಿತ್ತು.
ಈ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಶಿಖರ್ ಧವನ್ 76 ರನ್ ಕಾಣಿಕೆ ನೀಡಿದರೆ, ರಿಷಬ್ ಪಂತ್ 20 ರನ್ ಸಿಡಿಸಿ ಕೆಟ್ಟ ಹೊಡೆತಕ್ಕೆ ಕೈಹಾಕಿ ಭಾರತಕ್ಕೆ ನಿರಾಸೆ ಮಾಡಿದರು. ಇದೇ ಪಂದ್ಯದ ಗತಿಯನ್ನ ಬದಲಿಸಿತು. ದಿನೇಶ್ ಕಾರ್ತಿಕ್ ಸಿಡಿಸಿದ 30 ರನ್ ಕೂಡ ಗೆಲುವು ದೊರಕಿಸಿಕೊಡಲಿಲ್ಲ. ಹೀಗಾಗಿ ಭಾರತ ಕೇವಲ 4 ರನ್ಗಳ ಸೋಲು ಅನುಭವಿಸಿತು.
ಡಕ್ವರ್ತ್ ನಿಯಮದಿಂದ ಭಾರತ ಪಂದ್ಯವನ್ನ ಸೋತಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಡಕ್ವರ್ತ್ ನಿಯಮಕ್ಕೆ ಮತ್ತೆ ವಿರೋಧ ವ್ಯಕ್ತವಾಗಿದೆ. ಹಲವು ಭಾರಿ ಈ ಡಕ್ವರ್ತ್ ನಿಯಮ ಅರ್ಥವೇ ಆಗೋದಿಲ್ಲ ಅನ್ನೋದು ಹಲವರ ಅಭಿಪ್ರಾಯ. ನಾಯಕ ವಿರಾಟ್ ಕೊಹ್ಲಿ ಕೂಡ ಈ ಹಿಂದೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪಂದ್ಯದ ಬಳಿಕ ಆಸ್ಟ್ರೇಲಿಯಾಕ್ಕಿಂತ ಹೆಚ್ಚಿನ ರನ್ ಹೊಡೆದರೂ ಭಾರತ ಸೋಲುಕಂಡಿದೆ. ಭಾರತ ತಂಡದ ಮೇಲೆ ಜಿಎಸ್ಟಿ ಹೊರೆ ಬಿದ್ದಿದೆ. ಹೀಗಾಗಿ ಭಾರತಕ್ಕೆ ಸೋಲು ಎದುರಾಗಿದೆ. ಆದರೆ ಆಸೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯ ರೋಚಕವಾಗಿತ್ತು ಎಂದು ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಡಕ್ವರ್ತ್ ನಿಯಮವನ್ನ ಹಾಸ್ಯಾಸ್ವದವಾಗಿ ಟೀಕಿಸಿದ್ದಾರೆ.