ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಸಲಹೆ ನೀಡಿದ್ದಾರೆ. ನ್ಯೂಸ್ ಪೇಪರ್ ಹಾಗೂ ಸಾಮಾಜಿಕ ಜಾಲತಾಣದಿಂದ ದೂರ ಇರಲು ಎಂ ಎಸ್ ಧೋನಿ ಸಲಹೆ ನೀಡಿದ್ದೇಕೆ? ಇಲ್ಲಿದೆ ವಿವರ.

ನವದಹೆಲಿ(ಜು.29) ಯುವ ಕ್ರಿಕೆಟಿಗರಿಗೆ ಮೈದಾನದಲ್ಲಿ ಉಪಯುಕ್ತ ಸಲಹೆ, ಸೂಚನೆಗಳನ್ನು ನೀಡುವ ಮಾಜಿ ನಾಯಕ ಎಂ.ಎಸ್.ಧೋನಿ, ಮೈದಾನದಾಚೆಗೂ ಆಟಗಾರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಭಾರತ ತಂಡದ ಯುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಖಾಸಗಿ ಕಾರ್ಯಕ್ರಮದಲ್ಲಿ ಧೋನಿ ತಮಗೆ ನೀಡಿರುವ ಸಲಹೆಗಳನ್ನು ಬಿಚ್ಚಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

‘ಭಾರತ ತಂಡಕ್ಕೆ ನಾನು ಸೇರ್ಪಡೆಗೊಂಡ ಬಳಿಕ, ಧೋನಿ ನನಗೆ ದಿನಪತ್ರಿಕೆಗಳಿಂದ ದೂರವಿರುವಂತೆ ಸಲಹೆ ನೀಡಿದರು’ ಎಂದು ಶ್ರೇಯಸ್ ಹೇಳಿದ್ದಾರೆ. ‘ಆದಷ್ಟು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡು. ಆಟದತ್ತ ಹೆಚ್ಚು ಗಮನ ಹರಿಸು’ ಎಂದು ಧೋನಿ ಹೇಳಿರುವುದಾಗಿ ಶ್ರೇಯಸ್ ಹೇಳಿದರು.

ಹಿಂದೆ ಬಿದ್ದಿದ್ದ ಹುಡುಗಿ!: ಕಾರ್ಯಕ್ರಮದಲ್ಲಿ ಶ್ರೇಯಸ್ ಸಾಮಾಜಿಕ ಮಾಧ್ಯಮಗಳಿಂದ ಆಟಗಾರರಿಗೆ ಎದುರಾಗುವ ಸಮಸ್ಯೆಗಳ ಕುರಿತು ಸಹ ಮಾತನಾಡಿದರು. ‘ಐಪಿಎಲ್ ಹರಾಜಿನ ಬಳಿಕ ನನಗೆ ಪರಿಚಯವಿದ್ದ ಹುಡುಗಿಯೊಬ್ಬಳು ಪ್ರತಿ ದಿನ ನನಗೆ ಸಂದೇಶಗಳನ್ನು ಕಳುಹಿಸಲು ಆರಂಭಿಸಿದಳು. ನನ್ನನ್ನು ಸಂಪರ್ಕಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದಳು. ನನ್ನ ಯಶಸ್ಸಿನ ಬಗ್ಗೆ ಆಕೆಗೆ ಖುಷಿ ಇದೆ ಎಂದು ನನಗೆ ತಿಳಿಯಿತು. ಇದೇ ವೇಳೆ ಆಕೆ ದುಡ್ಡಿನ ಹಿಂದೆ ಬಿದ್ದಿದ್ದಾಳೆ ಎನ್ನುವುದು ಸಹ ಅರ್ಥವಾಯಿತು’ ಎಂದು ಶ್ರೇಯಸ್ ಹೇಳಿದರು.

‘ಭಾರತ ತಂಡದಲ್ಲಿ ಸ್ಥಾನ ಪಡೆದ ಬಳಿಕ ನನ್ನ ಆಟ ಬಹಳಷ್ಟು ಸುಧಾರಿಸಿತು. ಧೋನಿ ಜತೆ ಹಿರಿಯ ಆಟಗಾರರಾದ ಕೊಹ್ಲಿ, ರಹಾನೆ ಸಹ ನನಗೆ ಅನೇಕ ಸಲಹೆಗಳನ್ನು ನೀಡಿದ್ದಾರೆ. ನನ್ನ ಆತ್ಮವಿಶ್ವಾಸ ಹೆಚ್ಚಾಗಿದ್ದು, ತಂಡದಲ್ಲಿ ಮತ್ತಷ್ಟು ಅವಕಾಶಗಳಿಗೆ ಕಾಯುತ್ತಿದ್ದೇನೆ’ ಎಂದಿದ್ದಾರೆ.