ಚಹಲ್ ಗೆ ‘ಸರ್’ಎನ್ನಬೇಡ ಎಂದು ಧೋನಿ ಗದರಿದ್ದೇಕೆ?
ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಸಖತ್ ಜಾಲಿ ಮೂಡ್ನಲ್ಲಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಚಹಲ್, ಇದೀಗ ಇಂಗ್ಲೆಂಡ್ ಟೂರ್ಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ನವದೆಹಲಿ(ಜೂ.3): ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಸಖತ್ ಜಾಲಿ ಮೂಡ್ನಲ್ಲಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಚಹಲ್, ಇದೀಗ ಇಂಗ್ಲೆಂಡ್ ಟೂರ್ಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ಈ ನಡುವೆ ತಾವು ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಘಳಿಗೆಯನ್ನು ಚಹಲ್ ಮೆಲುಕು ಹಾಕಿದ್ದಾರೆ. ಜಿಂಬಾಬ್ವೆ ವಿರುದ್ದದ ತಮ್ಮ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ತಮ್ಮನ್ನು ಸ್ವಾಗತಿಸಿದ ರೀತಿಯನ್ನು ಚಹಲ್ ನೆನಪಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆಯಾದ ಸುದ್ದಿ ತಿಳಿದಾಗ ನಂಬಲು ಸಾಧ್ಯವೇ ಆಗಿರಲಿಲ್ಲ ಎಂದಿರುವ ಅವರು, ಟಿವಿಯಲ್ಲಿ ಈ ಸುದ್ದಿ ಕೇಳಿದಾಗ ಸುಮಾರು ಅರ್ಧ ಗಂಟೆ ಬಿಕ್ಕಿ ಬಿಕ್ಕಿ ಅತ್ತಿದ್ದಾಗಿ ಆ ದಿನವನ್ನು ನೆನೆದಿದ್ದಾರೆ.
ಪಂದ್ಯಕ್ಕೂ ಮೊದಲು ನಾಯಕ ಎಂ.ಎಸ್. ಧೋನಿ, ಚಹಲ್ ಅವರಿಗೆ ಭಾರತ ತಂಡದ ಕ್ಯಾಪ್ ನೀಡಿ ಸ್ವಾಗತಿಸಿದ್ದರು. ಈ ವೇಳೆ ಚಹಲ್ ‘ಥ್ಯಾಂಕ್ಯೂ ಮಾಹೀ ಸರ್’ ಎಂದಿದ್ದರಂತೆ. ಕೂಡಲೇ ಚಹಲ್ ಅವರನ್ನು ಬಳಿ ಕರೆದ ಧೋನಿ, ತಮ್ಮನ್ನು ಮಾಹೀ, ಧೋನಿ, ಭಾಯೀ..ಹೀಗೆ ಯಾವ ಹೆಸರಿನಿಂದಾದರೂ ಕೂಗು ಆದರೆ ಸರ್ ಎಂದು ಮಾತ್ರ ಸಂಭೋಧಿಸಬೇಡ ಎಂದಿದ್ದರಂತೆ.
ಇದೇ ವೇಳೆ ಟೀ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಕುರಿತಾಗಿಯೂ ಮೆಚ್ಚುಗೆಯ ಮಾತುಗಳನ್ನಾಡಿರುವ ಚಹಲ್, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೊಹ್ಲಿ ತಮ್ಮ ಮೇಲೆ ಭರವಸೆ ಇಡುವ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೇ ಯುವ ಪ್ರತಿಭೆಗಳಿಗೆ ಕೊಹ್ಲಿ ನೀಡುವ ಮಾರ್ಗದರ್ಶನದ ಪರಿಯನ್ನೂ ಚಹಲ್ ಕೊಂಡಾಡಿದ್ದಾರೆ.