ರಾಮನಗರದಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಶಂಕಿತರನ್ನು ಅರೆಸ್ಟ್ ಮಾಡಲಾಗಿದೆ. ಚಿನ್ನ, ವಿವಿಧ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು [ನ.11]: ಇಬ್ಬರು ಮಹಿಳೆಯರೂ ಸೇರಿದಂತೆ ಮನೆಯೊಂದರಲ್ಲಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ಘಟನೆ ನಗರದ ಐಜೂರು ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಆರೋಪಿಗಳಿಂದ 700 ಗ್ರಾಂ ಚಿನ್ನದ ಬಿಸ್ಕತ್, ಡ್ರ್ಯಾಗರ್, ಲಾಂಗ್, ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಯಾವುದೇ ಅಧಿಕೃತ ಗುರುತಿನ ಚೀಟಿ, ದಾಖಲೆಗಳನ್ನು ಹೊಂದಿರದ ಇವರು ಅಕ್ರಮ ಬಾಂಗ್ಲಾ ವಲಸಿಗರಿರಬಹುದೇ ಎಂಬ ಸಂಶಯ ವ್ಯಕ್ತವಾಗಿದೆ.
ಬಂಧಿತರು ಮೂರು ದಿನಗಳ ಹಿಂದಷ್ಟೇ ಐಜೂರು ಬಡಾವಣೆಯ ಮಸೀದಿ ಹಿಂಭಾಗದ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಮನೆ ಮಾಲೀಕರಿಗೆ ಯಾವುದೇ ವಿಳಾಸ ದೃಢೀಕರಣ ದಾಖಲಾತಿ ನೀಡಿರಲಿಲ್ಲ. ಹೀಗಾಗಿ ಮನೆಯ ಮಾಲೀಕ ಹಾಗೂ ಮನೆಯನ್ನು ಬಾಡಿಗೆಗೆ ಕೊಡಿಸಿದ್ದ ಆಟೋ ಚಾಲಕನನ್ನೂ ಐಜೂರು ಪೊಲೀಸ್ ಠಾಣೆ ಯಲ್ಲಿ ವಿಚಾರಣೆ ನಡೆಸಲಾಗಿದೆ.
ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
5 ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿ, ಬೆಂಗಳೂರು ನಗರದ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಖಲೆಗಳ ಪರಿಶೀಲನೆ ನಂತರವಷ್ಟೇ ಸತ್ಯಾಂಶ ಹೊರ ಬರಲಿದೆ ಎಂದು ಮಾಹಿತಿ ನೀಡಿದರು.
