ಚಿಕ್ಕಮಗಳೂರು ಚುನಾವಣಾ ರಣರಂಗದಲ್ಲಿ‌ ಪತಿ ಪರ ಪತ್ನಿಯರ ಅಬ್ಬರದ ಪ್ರಚಾರ. ಚುನಾವಣಾ ಪ್ರಚಾರಕ್ಕಿಳಿದ " ಹೋಂ ಮಿನಿಸ್ಟರ್ಸ್" ಸಿ.ಟಿ.ರವಿ ಪರ ಪತ್ನಿ ಪಲ್ಲವಿ ಶೃಂಗೇರಿಯಲ್ಲಿ ಶಾಸಕ ಟಿ.ಡಿ. ರಾಜೇಗೌಡ ಪರ ಪತ್ನಿ ಪುಷ್ಪ ರಾಜೇಗೌಡ ಅಬ್ಬರದ ಪ್ರಚಾರ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಏ.5): ದಿನದಿಂದ ದಿನಕ್ಕೆ ಚುನಾವಣಾ ಕಾವು-ಕಣ ರಂಗೇರುತ್ತಿದೆ. ಟಿಕೆಟ್ ಕನ್ಫರ್ಮ್ ಆದವರು, ಲಾಬಿ ಮಾಡ್ತಿರೋರು, ದೆಹಲಿಯಲ್ಲಿ ಬೀಡು ಬಿಟ್ಟವರ ಬೆಂಬಲಿಗರು ಈಗಾಗಲೇ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶೃಂಗೇರಿ ಕ್ಷೇತ್ರದಲ್ಲಿ "ಹೋಂ ಮಿನಿಸ್ಟರ್" ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. "ಹೋಂ ಮಿನಿಸ್ಟರ್" ಅಂದ್ರೆ ಅರಗ ಜ್ಞಾನೇಂದ್ರ ಅವರೋ ಅಥವ ಅಮಿತ್ ಶಾ ಅವರೋ ಅಲ್ಲ. ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳ ಪತ್ನಿಯರು ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸುತ್ತಾ ಪತಿಯ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಪತಿ ಪರ ಪತ್ನಿಯರ ಅಬ್ಬರದ ಪ್ರಚಾರ: 
ವಿಧಾನಸಭೆಯ ಚುನಾವಣೆ ಕಾವು ದಿನದಿಂದ ಏರಿಕೆಯಾಗುತ್ತಿದ್ದು, ಟಿಕೆಟ್ ಘೋಷಣೆಯಾಗುವ ಮೊದಲೇ ಶಾಸಕರ ಪತ್ನಿಯರು ಚುನಾವಣಾ ಅಖಾಡಕ್ಕೆ ಇಳಿಯುವ ಮೂಲಕ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಟಿ.ಡಿ.ರಾಜೇಗೌಡ ಅವರಿಗೆ ಕೈ ಟಿಕೆಟ್ ಸಿಕ್ಕಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ತಿಮ್ಮಶೆಟ್ಟಿ ಹೆಸರು ಘೋಷಣೆಯಾಗಿದ್ದು, ಅವರ ಸ್ವಲ್ಪ ದಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅನಾರೋಗ್ಯದ ಸಮಸ್ಯೆಯಿಂದ ಪ್ರಚಾರ ಕಾರ್ಯಕ್ಕೆ ಮುಂದಾಗಿಲ್ಲವೆಂದು ಆ ಪಕ್ಷದ ಮುಖಂಡರೇ ಸಭೆಯಲ್ಲಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲು ಮುಂದಾಗಿಲ್ಲ ಆದರೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ, ಕಡೂರು ಕ್ಷೇತ್ರದಲ್ಲಿ ಬೆಳ್ಳಿ ಪ್ರಕಾಶ್, ತರೀಕೆರೆಯಲ್ಲಿ ಡಿ.ಎಸ್.ಸುರೇಶ್ ಪ್ರಚಾರ ಆರಂಭಿಸಿದ್ದಾರೆ. ಈ ಕ್ಷೇತ್ರಗಳು ಈ ಬಾರಿ ಜಟಿಲವಾಗಿರುವುದರಿಂದ ಶಾಸಕರ ಪತ್ನಿ ಚುನಾವಣಾ ಅಖಾಡಕ್ಕೆ ಧುಮಿಕಿದ್ದು, ಪ್ರಚಾರಕಾರ್ಯದಲ್ಲಿ ನಿರತರಾದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ಅವರು ಚಿಕ್ಕಮಗಳೂರು ನಗರದಲ್ಲಿ ಮಹಿಳಾ ಮೋರ್ಚಾದ ಮುಖಂಡರೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು. 2023ರ ಚುನಾವಣೆಯಲ್ಲಿ ಹೆಚ್ಚು ಕ್ರಿಯಾಶೀಲರಾಗುವ ಮೂಲಕ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ, ಗುಬ್ಬಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಉಚ್ಛಾಟನೆ

ಶೃಂಗೇರಿ ಪಟ್ಟಣದ ಭಾರತೀಬೀದಿಯಲ್ಲಿ ಮನೆ ಮನೆಗೆ ತೆರಳಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಡಿ.ರಾಜೇಗೌಡರಿಗೆ ಮತ ನೀಡುವಂತೆ ಅವರ ಪತ್ನಿ ಪುಷ್ಪಾರಾಜೇಗೌಡ ಮನವಿ ಮಾಡುತ್ತಿದ್ದಾರೆ. ಕುಟುಂಬದ ಗೃಹಿಣಿಗೆ ಮಾಸಿಕ ಎರಡು ಸಾವಿರ, 200 ಯೂನಿಟ್ ಉಚಿತ ವಿದ್ಯುತ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.. ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಪ್ರಿಯಾಂಕ ಗಾಂಧಿ ಮಹಿಳೆಯರ ಸಂಕಷ್ಟಕ್ಕೆ ಮಹಿಳೆಯರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುವ ಯೋಜನೆ ರೂಪಿಸಿದ್ದು, ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಎಂದು ಮತದಾರರ ಮನವೊಲಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

BAGALAKOTE: ಯುವ ಜನಾಂಗ ಮತದಾನಲ್ಲಿ ಭಾಗವಹಿಸುವ ಸಲುವಾಗಿ ಸಂಚಾರಿ ಅಣಕು ಮತಗಟ್ಟೆ ಅಭಿಯಾನ

ತರೀಕೆರೆಯಲ್ಲಿ ಟಿಕೆಟ್ ಯಾರಿಗೆ ಸಿಗುತ್ತೋ ಗೊತ್ತಿಲ್ಲ ಇದರ ನಡುವೆಯೂ ಪ್ರಚಾರ: 
ಇತ್ತ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಕವಿತಾ ಬೆಳ್ಳಿಪ್ರಕಾಶ್ ಒಮ್ಮೆ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿದ್ದರು. ಈ ಬಾರಿ ಪತಿಯನ್ನು ಗೆಲ್ಲಿಸಿಕೊಂಡು ಬರಲು ನಾಮಪತ್ರ ಸಲ್ಲಿಸಿದ ಬಳಿಕ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲು ನಿರ್ಧರಿಸಿದ್ದಾರೆ.ತರೀಕೆರೆ ಕ್ಷೇತ್ರದಲ್ಲಿ ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ ಅವರ ಪತ್ನಿ ವಾಣಿಶ್ರೀನಿವಾಸ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆಯಲ್ಲಿ ನಿರತವಾಗಿದ್ದರೆ, ಅವರ ಮಗಳು ತಾಯಿಗೆ ಸಾಥ್ ನೀಡುತ್ತಿದ್ದರೆನ್ನಲಾಗಿದೆ.ಈ ಕ್ಷೇತ್ರದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಗೋಪಿಕೃಷ್ಣ ಅವರೂ ಗ್ಯಾರಂಟಿಕಾರ್ಡ್ ಹಿಡಿದು ಮತದಾರರ ಮನೆಬಾಗಿಲಿಗೆ ತೆರಳುತ್ತಿದ್ದಾರೆ.ತರೀಕೆರೆ ಮಾಜಿ ಶಾಸಕ ಶ್ರೀನಿವಾಸ್ ಪುತ್ರಿ ಕೂಡ ಅಪ್ಪನ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ತರೀಕೆರೆಯಲ್ಲಿ ಟಿಕೆಟ್ ಯಾರಿಗೆ ಸಿಗುತ್ತೋ ಗೊತ್ತಿಲ್ಲ. ಆದರೆ, ಇಬ್ಬರ ಬೆಂಬಲಿಗರು ಹಾಗೂ ಮನೆಯವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.