*  ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುವರ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಶಿಕ್ಷೆ ವಿಧಿಸಬೇಕು*  ಕೇಂದ್ರ ಸರ್ಕಾರ ದೇಶ ವಿರೋಧಿ ಕೃತ್ಯ ಮಾಡುವವರ ಮೇಲೆ ಪ್ರಕರಣಗಳು ದಾಖಲು*  ನೋಂದಾಯಿತ ಪಕ್ಷವಾಗಿದ್ದರಿಂದ ಕಾನೂನಾತ್ಮಕವಾಗಿ ಕ್ರಮ 

ಹುಬ್ಬಳ್ಳಿ(ಮೇ.29): ಎಸ್‌ಡಿಪಿಐ ಮತ್ತು ಪಿಎಫ್‌ಐ ಪಕ್ಷಗಳಿಗೆ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ. ಆ ಎರಡು ಪಕ್ಷಗಳು ಕಾಂಗ್ರೆಸ್‌ ಕೂಸಾಗಿದೆ. ಅವುಗಳನ್ನು ಬೆಳೆಸುತ್ತಿರುವುದು ಕಾಂಗ್ರೆಸ್‌ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಪಕ್ಷಗಳ ಮೇಲಿರುವ ಪ್ರಕರಣಗಳಿಂದ ಮುಕ್ತ ಮಾಡಿದ್ದರು.ಇದು ತುಷ್ಟೀಕರಣದ ಪರಾಕಾಷ್ಠೆಯಾಗಿದೆ ಎಂದರು.

MLC Election: 'ಬಿಜೆಪಿ ಸೇರಿ ವ್ಯಕ್ತಿತ್ವ, ಮೌಲ್ಯ ಕಳೆದುಕೊಂಡ ಹೊರಟ್ಟಿ'

ಸಿದ್ದರಾಮಯ್ಯ ಅವರನ್ನು ಮೂಲ ಜಾಗದಿಂದ ಜನರು ಓಡಿಸಿದ್ದಾರೆ ಬಹುಶಃ ಅವರು ಅದನ್ನು ಮರೆತಂತೆ ಕಾಣುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೆ. ಆದರೆ ಸಿದ್ದರಾಮಯ್ಯ ಆರ್‌ಎಸ್‌ಎಸ್‌ನ ಮೂಲದ ಬಗ್ಗೆ ಕೆದಕುತ್ತಿದ್ದಾರೆ ಎಂದು ಹರಿಹಾದರು.

ಎಸ್‌ಡಿಪಿಐ ಮತ್ತು ಪಿಎಫ್‌ಐ ಪಕ್ಷಗಳು ದೇಶ ವಿರೋಧಿ ಚುಟುವಟಿಕೆ, ಬಹಿರಂಗವಾಗಿ ದೇಶ ವಿರೋಧಿ ಘೋಷಣೆ ಕೂಗುತ್ತಿದ್ದರು. ಕೇರಳ ಸರ್ಕಾರ ಸುಮ್ಮನಿರುವುದು ವಿಪರ್ಯಾಸ. ಇಂತಹ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುವರ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಿಮಿ ಸಂಘಟನೆ ಸ್ಥಗಿತ ಮಾಡಿದ ನಂತರ ಎಸ್‌ಡಿಪಿಐ ಮತ್ತು ಪಿಎಫ್‌ಐ ಹೆಸರಿನಲ್ಲಿ ಇವರು ಗುರುತಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ದೇಶ ವಿರೋಧಿ ಕೃತ್ಯ ಮಾಡುವವರ ಮೇಲೆ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಅಪರಾಧಿಗಳನ್ನು ಬಂಧಿಸಲಾಗಿದೆ. ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅವು ನೋಂದಾಯಿತ ಪಕ್ಷವಾಗಿದ್ದರಿಂದ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.