ಬಿಜೆಪಿ ಸರ್ಕಾರವನ್ನು ‘40 ಪರ್ಸೆಂಟ್‌ ಕಮಿಷನ್‌ ಸರ್ಕಾರ’ ಎಂದ ಅಂಬಿಕಾಪತಿ ಮನೆಯಿಂದ 42 ಕೋಟಿ ರು. ಜಪ್ತಿ ಮಾಡಲಾಗಿದೆ. ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿರುವ ಅಂಬಿಕಾಪತಿ ಮತ್ತು ಅವರ ಗುತ್ತಿಗೆದಾರ ಗುಂಪು, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ನವದೆಹಲಿ(ಅ.15): ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ 42 ಕೋಟಿ ರು. ವಶಪಡಿಸಿಕೊಂಡಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ‘ಭ್ರಷ್ಟಾಚಾರ ಎಂಬುದು ಕಾಂಗ್ರೆಸ್‌ನ ಡಿಎನ್‌ಎದಲ್ಲಿಯೇ ಇದೆ’ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್‌, ‘ಕಳೆದ ವರ್ಷ ಜುಲೈ- ಅಗಸ್ಟ್‌ನಲ್ಲಿ ಕಾಂಗ್ರೆಸ್‌ ಪರವಾಗಿ ಅಂಬಿಕಾಪತಿಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ‘ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಸರ್ಕಾರ’ ಎಂದು ರಾಜ್ಯ ಚುನಾವಣೆ ಮುನ್ನ ಲೇಬಲ್‌ ಹಾಕಿಬಿಟ್ಟರು. ಅದು ಬೃಹತ್‌ ನಾಟಕವಾಗಿದ್ದು, ಭ್ರಷ್ಟಾಚಾರವೇ ಅದರ ಹಿಂದಿನ ಉದ್ದೇಶ ಎಂಬುದು ಈಗ ಸ್ಪಷ್ಟವಾಗಿದೆ. ದುರದೃಷ್ಟವಶಾತ್‌ ಕರ್ನಾಟಕದ ಮತದಾರರನ್ನು ದಾರಿ ತಪ್ಪಿಸಲಾಯಿತು ಮತ್ತು ಈಗ ಕಾಂಗ್ರೆಸ್‌ ಅಧಿಕಾರ ಹಿಡಿದಿದೆ’ ಎಂದು ಕಿಡಿಕಾರಿದ್ದಾರೆ.

ಮಕ್ಕಳ ಲೈಂಗಿಕ ಶೋಷಣೆ ವಿಷಯ ತೆಗೆಯಲು ಈ 3 ಸಾಮಾಜಿಕ ಜಾಲತಾಣಗಳಿಗೆ ಐಟಿ ಸಚಿವಾಲಯ ಸೂಚನೆ: ರಾಜೀವ್‌ ಚಂದ್ರಶೇಖರ್‌

ಅಲ್ಲದೇ ‘ಬಿಜೆಪಿ ಸರ್ಕಾರವನ್ನು ‘40 ಪರ್ಸೆಂಟ್‌ ಕಮಿಷನ್‌ ಸರ್ಕಾರ’ ಎಂದ ಅಂಬಿಕಾಪತಿ ಮನೆಯಿಂದ 42 ಕೋಟಿ ರು. ಜಪ್ತಿ ಮಾಡಲಾಗಿದೆ. ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿರುವ ಅಂಬಿಕಾಪತಿ ಮತ್ತು ಅವರ ಗುತ್ತಿಗೆದಾರ ಗುಂಪು, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ’ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಬಗ್ಗೆ ಹರಿಹಾಯ್ದ ರಾಜೀವ್‌, ‘ಕಾಂಗ್ರೆಸ್‌ ನಕಲಿ ಭರವಸೆಗಳು, ಸುಳ್ಳುಗಳು ಮತ್ತು ಭ್ರಷ್ಟಾಚಾರವನ್ನು ನಂಬಿದೆ. ಕಾಂಗ್ರೆಸ್‌ನ ಡಿಎನ್‌ಎದಲ್ಲಿಯೇ ಭ್ರಷ್ಟಾಚಾರವಿದೆ. ಇದನ್ನು ಕರ್ನಾಟಕದಲ್ಲಿ ನೋಡಿದ್ದೇವೆ ಮತ್ತು ಅದೇ ರಾಜಕೀಯ ತಂತ್ರವನ್ನು ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯ ಪ್ರದೇಶಗಳಲ್ಲಿ ಬಳಸುತ್ತಿದೆ. ‘ಇಂಡಿಯಾ ಕೂಟದ ಲೂಟಿ ಯಾತ್ರೆ’ಗಾಗಿ ಕರ್ನಾಟಕವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಕೈಯಲ್ಲಿ ಎಟಿಎಂ ಆಗಿ ಮಾರ್ಪಾಡಾಗಿರುವುದನ್ನು ನೋಡಲು ಬೇಸರವಾಗುತ್ತದೆ’ ಎಂದರು.