ಕಾಂಗ್ರೆಸ್ ಟಿಕೆಟ್ ಸಿಗದಿದಕ್ಕೆ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಮತ್ತು ಕಾರ್ಯಕರ್ತರ  ಆಕ್ರೋಶ ಭುಗಿಲೆದ್ದಿದೆ. ಇಬ್ಬರೂ ಟಿಕೆಟ್ ಆಕಾಂಕ್ಷಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬೆಳಗಾವಿ (ಏ.7): ಕಾಂಗ್ರೆಸ್ ಟಿಕೆಟ್ ಸಿಗದಿದಕ್ಕೆ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಮತ್ತು ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಟಿಕೆಟ್ ಕೈ ತಪ್ಪಿದ್ದಕ್ಕೆ ಕಿತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಡಿ ಬಿ ಇನಾಮ್ದಾರ್ ಸೊಸೆ ಲಕ್ಷ್ಮೀ ಇನಾಮ್ದಾರ್ ಮತ್ತು ಸವದತ್ತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಪಂಚನಗೌಡ ದ್ಯಾಮನಗೌಡರ ಬಿಕ್ಕಿ‌ ಬಿಕ್ಕಿ ಅತ್ತಿದ್ದಾರೆ.

Add Asianetnews Kannada as a Preferred SourcegooglePreferred

ಪಂಚನಗೌಡ ಅವರು ಟಿಕೆಟ್ ಸಿಗದಿರುವುದಕ್ಕೆ ಸ್ವಗ್ರಾಮ ಮುನವಳ್ಳಿಯಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಜೊತೆ ಸಭೆ ನಡೆಸಿ ಕಣ್ಣೀರು ಹರಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸವದತ್ತಿ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪಂಚನಗೌಡ ದ್ಯಾಮನಗೌಡರಿಂದ ಅಸಮಾಧಾನಗೊಂಡು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಮುಖಂಡರ ವಿರುದ್ದ ಹರಿಹಾಯ್ದರು. ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಕಣ್ಣೀರು ಹಾಕಿದರು. 

ಸ್ವಗ್ರಾಮ ಮುನವಳ್ಳಿಯ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ್ದು, ಈ ಭಾರೀ ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಲಿದೆ. ನಮಗೆ ಪಕ್ಷದ ಮುಖಂಡರು ಮೋಸ ಮಾಡಿದ್ದಾರೆ. ಟಿಕೆಟ್ ಘೋಷಣೆ ಆಗುವ ವೇಳೆ ನನ್ನನ್ನು ಕರೆದು ಮಾತನಾಡಿಸಬೇಕಿತ್ತು. ಅದನ್ನು ಬಿಟ್ಟು ಟಿಕೆಟ್ ಘೋಷಣೆ ನಂತರ ಕರೆದು ಮನವೊಲಿಸುವ ಮಾತು ಆಡುತ್ತಿದ್ದಾರೆ ಎಂದು ಅಭಿಮಾನಿಗಳ ಎದುರು ಪಂಚನಗೌಡ ದ್ಯಾಮನಗೌಡರ ನೋವು ತೋಡಿಕೊಂಡಿದ್ದಾರೆ.

ಟಿಕೆಟ್ ಕೈತಪ್ಪಿದಕ್ಕೆ ಲಕ್ಷ್ಮೀ ಇನಾಮ್ದಾರ್ ಕಣ್ಣೀರು, ಇಡೀ ಕುಟುಂಬವೇ ರಾಜೀನಾಮೆ!
ಬೆಳಗಾವಿಯಲ್ಲಿ ಡಿ ಬಿ ಇನಾಮ್ದಾರ್ ಸೊಸೆ ಲಕ್ಷ್ಮೀ ಇನಾಮ್ದಾರ್ ಸುದ್ಧಿಗೋಷ್ಠಿ ನಡೆಸಿ ಟಿಕೆಟ್ ಕೈತಪ್ಪಿದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ‌ನೀಡಲು ಡಿ ಬಿ ಇನಾಮ್ದಾರ್ ಕುಟುಂಬ ತೀರ್ಮಾನ ತೆಗೆದುಕೊಂಡಿದೆ.

ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವ ಆಗಿದೆ. 40 ವರ್ಷಗಳಿಂದ ಡಿ.ಬಿ ಇನಾಮದಾರ್ ಪಕ್ಷ ಕಟ್ಟಿದ್ದಾರೆ. ಡಿ.ಬಿ ಇನಾಮದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಲಾಯಲಿಸ್ಟ್ ಆಗಿದ್ದರು. ಅವರಿಗೆ ಹುಷಾರಿಲ್ಲ ಇಂತಹ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಮ್ಮನ್ನು ಕೈ ಬಿಟ್ಟಿದೆ. ಪರಿಸ್ಥಿತಿ ನೆನೆದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಲಕ್ಷ್ಮಿ ‌ಇನಾಮದಾರ. ಇಂತಹ ಸಮಯದಲ್ಲಿ ಯಾರು ನಮಗೆ ಕೈ ಹಿಡಿತಾರೆ ಅವರು ನಮಗೆ ದೇವರಾಗ್ತಾರೆ.

ಎಲ್ಲ ರಾಜ್ಯ ನಾಯಕರಿಗೆರನ್ನು ಭೇಟಿ ಆದಾಗ ಸರ್ವೇನಲ್ಲಿ ಚೆನ್ನಾಗಿತ್ತು ಅಂದ್ರು. ಮೊದಲ ಲಿಸ್ಟ್‌ನಲ್ಲಿಯೇ ಅವರ ಹೆಸರು ಬರಬೇಕಾಗಿತ್ತು ಅವರಿಗೆ ಅನಾರೋಗ್ಯದ ಕಾರಣದಿಂದ ಟಿಕೆಟ್ ಮೊದಲ ಲಿಸ್ಟ್ ನಲ್ಲಿ ಬರಲಿಲ್ಲ ಅಂದ್ರು, ಡಿ.ಬಿ ಇನಾಮದಾರ್ ಅವರ ಪರಿಸ್ಥಿತಿ ಎಲ್ಲ ನಾಯಕರ ಮುಂದೆಯೂ ಹೇಳಿದ್ದೇವೆ. ಬೆಂಗಳೂರಿಗೆ ಹೋಗಿ ನಮ್ಮನ್ನೂ ಸಹ ಟಿಕೆಟ್‌ಗೆ ಕನ್ಸಿಡರ್ ಮಾಡಿ ಅಂತ ಹೇಳಿದ್ವಿ. ಹೊಸ ಸರ್ವೇ ಮಾಡಿಸಿ ಅದರಲ್ಲಿ ನಮ್ಮ ಹೆಸರು ಬಂದ್ರೆ ಟಿಕೆಟ್ ಕೊಡಿ ಇಲ್ಲವಾದ್ರೆ ಬೇಡ ಅಂದ್ವಿ. ಅದಕ್ಕೆ ರಾಜ್ಯ ನಾಯಕರೂ ಸಹ ಸಮ್ಮತಿ ಸೂಚಿಸಿದರು. ಹೈಕಮಾಂಡ್ ನಿಂದ ಪೋನ್ ಬಂತು ನನ್ನ ಕನ್ವಿನ್ಸ್ ಮಾಡಿದ್ರು. ಆಗ ನಾನು ಕಾರ್ಯಕರ್ತರು ಏನು ತೀರ್ಮಾನ ತಗೋತಾರೆ ಅದಕ್ಕೆ ನಾನು ಬದ್ಧವಾಗಿದ್ದೇನೆ ಎಂದಿದ್ದೆ. ಏನೇ ನಿರ್ಧಾರ‌ ಮಾಡಿದ್ರೂ ಸಹ ಫ್ಯಾಮಿಲಿ ಕಾರ್ಯಕರ್ತರ ನಿರ್ಧಾರ‌ ಮಾಡ್ತಾರೆ ಎಂದ್ದಿದೆ.

ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್ ದಾಖಲು

ಕಿತ್ತೂರು ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ. ಆದರೆ ಹೈಕಮಾಂಡ್ ಗೆ ತೋರಿಸಿದ್ದೆ ಬೇರೆ ಇದೆ. ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ ಘೋಷಣೆ ಮಾಡ್ತಿವಿ ಎಂದು ಲಕ್ಷ್ಮೀ ಹೇಳಿದ್ದಾರೆ.

ದತ್ತಾಗೆ ತಪ್ಪಿದ 'ಕೈ' ಟಿಕೆಟ್‌ ,ಅಭಿಮಾನಿಗಳ ಸಭೆ ಕರೆದ ಮಾಜಿ ಶಾಸಕ

ಕಾರ್ಯಕರ್ತರು ಹೇಳಿದ್ರೆ ಬಂಡಾಯ ಸ್ಪರ್ಧೆ‌ ಮಾಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಅವರು, ಅದನ್ನು ನಾವು ಇನ್ನೂ ಡಿಸೈಡ್ ಮಾಡಿಲ್ಲ ಆದರೆ ಆದಷ್ಟು ಬೇಗ ನಿರ್ಧಾರ ಮಾಡ್ತಿವಿ ಎಂದಿದ್ದಾರೆ. ಡಿ ಬಿ ಇನಾಮದಾರ್ ಅವರನ್ನು ಬಿಟ್ಟು ನಮ್ಮ ಕುಟುಂಬದವರು ರಾಜೀನಾಮೆ ನೀಡುತ್ತೇವೆ. ಕಿತ್ತೂರು ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ್ದೆವು. ಸದ್ಯದಲ್ಲೇ ಕಾರ್ಯಕರ್ತರನ್ನು ಕೂಡಿಸಿ ನಿರ್ಧಾರ ಮಾಡ್ತೇವೆ ಎಂದು ಲಕ್ಷ್ಮೀ ಇನಾಮದಾರ್ ಹೇಳಿದ್ದಾರೆ.

ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.