Asianet Suvarna News Asianet Suvarna News

ಜಾತ್ಯತೀತ ತತ್ವವನ್ನು ಬಿಟ್ಟು, ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ: ಯತೀಂದ್ರ ಸಿದ್ದರಾಮಯ್ಯ

ಭಾರತ ಹಿಂದುರಾಷ್ಟ್ರ ಆಗಬಾರದು, ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

There is no other danger if India becomes a Hindu nation says yathindra siddaramaiah gvd
Author
First Published Jan 4, 2024, 3:39 PM IST

ದಾವಣಗೆರೆ (ಜ.04): ಭಾರತ ಹಿಂದುರಾಷ್ಟ್ರ ಆಗಬಾರದು, ಹಿಂದು ರಾಷ್ಟ್ರವಾದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿ, ಭಾರತವೇನಾದರೂ ಹಿಂದು ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಆಗುತ್ತದೆ. ನಮ್ಮ ದೇಶ ಹಿಂದು ರಾಷ್ಟ್ರವಾಗಬಾರದು, ಹಾಗೇನಾದರೂ ಆದರೆ ಅದಕ್ಕಿಂತಲೂ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ನಮ್ಮ ದೇಶ ಹಿಂದು ರಾಷ್ಟ್ರವಾದರೆ ದೇಶಕ್ಕೆ ತೊಂದರೆಯಾಗಲಿದೆ ಎಂದು ಹೇಳಿದರು.

ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡಿದಂಥ ಪಾಕಿಸ್ತಾನ, ಅಫ್ಘಾನಿಸ್ತಾನಗಳು ದಿವಾಳಿಯಾಗಿವೆ. ದೇಶವು ಜಾತ್ಯತೀತ ತತ್ವವನ್ನು ಬಿಟ್ಟು, ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣುವುದಿಲ್ಲ. ಇಂದು ದೇಶದಲ್ಲಿ ಜಾತ್ಯತೀತ ತತ್ವಕ್ಕೆ ಅಪಾಯ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ಆರ್‌ಎಸ್ಎಸ್‌ನಿಂದಾಗಿ ದೇಶದ ಜಾತ್ಯತೀತ ತತ್ವಕ್ಕೆ ಸಂಕಷ್ಟ ಬಂದಿದ್ದು, ದೇಶದಲ್ಲಿ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಈಗ ಭಾರತವನ್ನು ಹಿಂದು ದೇಶವನ್ನಾಗಿ ಮಾಡಲು ಹೊರಟಿವೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ, ನಮ್ಮ ದೇಶವೂ ಪಾಕಿಸ್ತಾನ, ಅಫ್ಘಾನಿಸ್ತಾನದಂತೆಯೇ ಆಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರಕ್ಕೆ 5ನೇ ಗ್ಯಾರಂಟಿಯೇ ಪ್ರಮುಖ ಅಸ್ತ್ರ: ಸಚಿವ ಮಧು ಬಂಗಾರಪ್ಪ

ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಸದಾ ಹುಷಾರಾಗಿರಬೇಕು. ಧರ್ಮದಿಂದಾಗಿ ಹಿಂದುಳಿದವರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಇತಿಹಾಸವನ್ನು ನೋಡಿ, ನಾವು ಪಾಠ ಕಲಿಯಬೇಕು. ಇತಿಹಾಸವನ್ನು ನೋಡಿ ನಾವು ದೇಶವನ್ನು ಕಟ್ಟಬೇಕು ಎಂದರು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಯಾರು ಹಿಂದುಳಿದವರು, ಅಲ್ಪಸಂಖ್ಯಾತ ನ್ಯಾಯಾಧೀಶರಿದ್ದಾರೆ? ಎಷ್ಟು ಜನರಿದ್ದಾರೆ? ಮೇಲ್ವರ್ಗದವರೇ ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ನಮಗೂ ಸಮಾಜದಲ್ಲಿ ಉನ್ನತ ಸ್ಥಾನಗಳು ಸಿಗಬೇಕು. ಧರ್ಮಕ್ಕಾಗಿ ಮತ್ತೊಬ್ಬರ ಜೊತೆ ಹೋರಾಟ ಮಾಡಲು ಹೋದರೆ ನಮ್ಮ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು ಎಂದರು.

Follow Us:
Download App:
  • android
  • ios