ವಿಪಕ್ಷಗಳ ಮೈತ್ರಿಕೂಟ ಬರೀ ಇಂಡಿಯಾ ಅಲ್ಲ ಟೀಮ್ ಇಂಡಿಯಾ!
2024ರ ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ ವಿಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು ಉಲ್ಲೇಖಿಸುವಾದ ‘ಟೀಮ್ ಇಂಡಿಯಾ’ ಅಥವಾ ‘ಇಂಡಿಯಾ ಅಲಯನ್ಸ್’ ಎಂದು ಬಳಸುವಂತೆ ಎಲ್ಲಾ ಪಕ್ಷಗಳ ವಕ್ತಾರಿಗೆ ಸೂಚಿಸಿವೆ.

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ ವಿಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು ಉಲ್ಲೇಖಿಸುವಾದ ‘ಟೀಮ್ ಇಂಡಿಯಾ’ ಅಥವಾ ‘ಇಂಡಿಯಾ ಅಲಯನ್ಸ್’ ಎಂದು ಬಳಸುವಂತೆ ಎಲ್ಲಾ ಪಕ್ಷಗಳ ವಕ್ತಾರಿಗೆ ಸೂಚಿಸಿವೆ. ಅಲ್ಲದೇ ‘ಇಂಡಿಯಾ’ ಹೆಸರನ್ನು ಬರೆಯುವಾಗ ಮಧ್ಯದಲ್ಲಿ ಚುಕ್ಕೆಗಳನ್ನು ಬಳಸದಂತೆಯೂ ಸೂಚಿಸಲಾಗಿದೆ.
ಮುಂಗಾರು ಅಧಿವೇಶನದ ಬಳಿಕ ತಮ್ಮ ಮೈತ್ರಿಕೂಟದ 3ನೇ ಸಭೆಗೆ ಸಜ್ಜಾಗುತ್ತಿರುವ ವಿಪಕ್ಷಗಳು ಇದಕ್ಕಾಗಿ 11 ಜನರ ಹೊಂದಾಣಿಕೆ ಸಮಿತಿಯನ್ನು ರಚನೆ ಮಾಡಲು ಮುಂದಾಗಿದೆ. ಅಲ್ಲದೇ 4 ಇತರ ಸಮಿತಿಗಳನ್ನು ಸಹ ರಚನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ‘ಎನ್ಡಿಎ’ಗೆ (NDA) ಪ್ರತಿಸ್ಪರ್ಧಿಯಾಗಿ ‘ಇಂಡಿಯಾ’ (INDIA) ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಅದೇ ರೀತಿ ಇಂಡಿಯಾ ಎಂದು ಬರೆಯುವಾಗ ಮಧ್ಯದಲ್ಲಿ ಚುಕ್ಕೆಗಳನ್ನು ಇಡಬಾರದು. ಏಕೆಂದರೆ ಇದು ‘ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲಾಯನ್ಸ್’ ಎಂಬುದರ ಹೃಸ್ವ ರೂಪವಾಗಿದೆ ಎಂದು ವಕ್ತಾರರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರ ಹಿಂಸೆ ತಗ್ಗಿಸಲು ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿಗೆ ಮಿತ್ರಪಕ್ಷ ಎನ್ಪಿಪಿ ಸಲಹೆ
ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಅಕ್ರಮ ವಲಸಿಗರು ಮತ್ತು ಉಗ್ರಗಾಮಿಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ‘ಸರ್ಜಿಕಲ್ ಸ್ಟ್ರೈಕ್’ನಂತಹ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳವೇಕು ಎಂದು ರಾಜ್ಯದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿ (NCP) ನಾಯಕ ಎಂ. ರಾಮೇಶ್ವರ್ ಸಿಂಗ್ (Rameshwar singh) ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ‘ಕೆಲವು ಅಕ್ರಮ ಕುಕಿ ಉಗ್ರಗಾಮಿಗಳು ಮತ್ತು ಅಕ್ರಮ ವಲಸಿಗರು ಗಡಿಯಾಚೆಯಿಂದ ಬರುತ್ತಿದ್ದಾರೆ ಎಂಬುದು ಗೃಹ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಹಿಂಸಾಚಾರದಲ್ಲಿ ಬಾಹ್ಯ ಆಕ್ರಮಣವಿದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಇದರಿಂದ ರಾಷ್ಟ್ರೀಯ ಭದ್ರೆತೆಯೊಂದಿಗೆ ರಾಜಿಯಾದಂತಾಗಿದೆ. ಮಣಿಪುರ (Manipur) ಮಾತ್ರವಲ್ಲದೇ ಇಡೀ ರಾಷ್ಟ್ರವನ್ನು ಉಳಿಸುವುದು ಮುಖ್ಯ. ಒಮ್ಮೆಲೆ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಸರ್ಜಿಕಲ್ ಸ್ಟೆ್ರೖಕ್ನಂತಹ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು’ ಎಂದರು.
ಅಮಾನತುಗೊಂಡ ಸಂಸತ್ ಸದಸ್ಯ: ಛಡ್ಡಾ ಟ್ವೀಟರ್ ಬಯೋ ಬದಲು
ನವದೆಹಲಿ: ನಕಲಿ ಸಹಿ ಆರೋಪದಲ್ಲಿ ಸಂಸತ್ತಿನಿಂದ ಅಮಾನತುಗೊಂಡಿರುವ ಬೆನ್ನಲ್ಲೇ ಆಪ್ ಸಂಸದ ರಾಘವ್ ಛಡ್ಡಾ (Raghav chadda) ತಮ್ಮ ಟ್ವೀಟರ್ ಖಾತೆಯ ಬಯೋದಲ್ಲಿ ‘ಸಂಸತ್ತಿನಿಂದ ಅಮಾನತುಗೊಂಡ ಸಂಸದ’ ಎಂದು ಬರೆದುಕೊಂಡಿದ್ದಾರೆ. ತಮ್ಮ ಅಮಾನತು ಬಗ್ಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ‘ನೀವು ಪ್ರಶ್ನಿಸಿದರೆ ನಿಮ್ಮ ಧ್ವನಿಯನ್ನೇ ಪುಡಿ ಮಾಡುತ್ತೇವೆ ಎಂದು ನನ್ನ ಅಮಾನತಿನ ಮೂಲಕ ಇಂದಿನ ಯುವಜನರಿಗೆ ಬಿಜೆಪಿ ಕಟು ಸಂದೇಶ ನೀಡಿದೆ. ನಾನು ಕೇಳಿದ ಕಠಿಣ ಪ್ರಶ್ನೆಗಳಿಗೆ ಉತ್ತರವಿಲ್ಲದೆ ನನ್ನನ್ನು ಅಮಾನತು ಮಾಡಲಾಗಿದೆ’ ಎಂದಿದ್ದಾರೆ. ದಿಲ್ಲಿ ಸುಗ್ರೀವಾಜ್ಞೆ ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿ ಪರಿಶೀಲಿಸಬೇಕು ಎಂಬ ತಮ್ಮ ಪ್ರಸ್ತಾವಕ್ಕೆ ಸೂಚಕರಾಗಿ ಛಡ್ಡಾ ಕೆಲವರನ್ನು ಹೆಸರಿಸಿದ್ದರು. ಅವರು ತಮ್ಮ ಅನುಮತಿ ಇಲ್ಲದೇ ಹೆಸರಿಸಲಾಗಿದೆ ಎಂದು ದೂರಿದ್ದಾರೆ.