ಪ್ರಮಾಣ ಪಾಲನೆ ಮಾಡಿಲ್ಲದಿರುವುದರಿಂದ ಯಡಿಯೂರಪ್ಪ ಪೂರ್ಣಾವಧಿ ಸಿಎಂ ಆಗಿಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಆಣೆ ಪ್ರಮಾಣ..?

ದಾವಣಗೆರೆ, (ನ.21): ಮುಖ್ಯಮಂತ್ರಿ ಕುರ್ಚಿ ಗಟ್ಟಿಯಾಗಿ ಉಳಿಯಬೇಕೆಂದರೆ ಸಿಎಂ ಬಿ.ಎಸ್. ಯಡಿಯೂರಪ್ಪ ಈ ಬಾರಿಯಾದರೂ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಆಗಮಿಸಬೇಕು ಎಂದು ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠ ಮುಕ್ತಿಗಾಗಿ ನಡೆಸಿದ ಆರಂಭಿಕ ಹೋರಾಟದಲ್ಲಿ ಬಿ.ಎಸ್. ಯಡಿಯೂರಪ್ಪ ಅವರೂ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು ತಾವು ಮುಖ್ಯಮಂತ್ರಿಯಾದರೆ ದತ್ತಪೀಠಕ್ಕೆ ಮಾಲೆ ಹಾಕಿಕೊಂಡು ಬರುವುದಾಗಿ ಪ್ರಮಾಣ ಮಾಡಿದ್ದರು. ಆದರೆ, ಅವರು 3 ಬಾರಿ ಮುಖ್ಯಮಂತ್ರಿಯಾದರೂ ಈ ಪ್ರಮಾಣ ಪಾಲನೆ ಮಾಡಿಲ್ಲ. ಈ ಕಾರಣದಿಂದಾಗಿಯೇ ಅವರು ಒಮ್ಮೆಯೂ ಪೂರ್ಣಾವಧಿ ಮುಖ್ಯಮಂತ್ರಿಯಾಗಿಲ್ಲ ಎಂದು ತಿಳಿಸಿದರು.

ದತ್ತಪೀಠ ವಿವಾದ ಕೋರ್ಟ್ ಹೊರಗೇ ಬಗೆಹರಿಸಿಕೊಳ್ಳಿ

 ಈ ಬಾರಿಯಾದರೂ ಅವರು ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಆದೇಶದೊಂದಿಗೆ ಬರಬೇಕು. ಆಗಲಾದರೂ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿಗೆ ತಗುಲಿದ ಪಾಪ ತೊಳೆಯಲು ಸಾಧ್ಯವಾಗಬಹುದು ಎಂದರು.

ದತ್ತಪೀಠ ಹಿಂದುಳಿಗಳಿಗೆ ಸೇರಿದ್ದು ಎಂಬುದಕ್ಕೆ ಎಲ್ಲ ದಾಖಲೆಗಳೂ ಇವೆ. ದಾಖಲೆಗಳೆಲ್ಲವೂ ಸ್ಪಷ್ಟವಾಗಿಯೂ ಇವೆ. ಆದರೂ ಈ ವಿವಾದವನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿರುವುದು ಸರಿಯಲ್ಲ. ದತ್ತಪೀಠವನ್ನು ಹಿಂದುಳಿಗಳಿಗೆ ವಹಿಸಿಕೊಡಲು ಯಡಿಯೂರಪ್ಪ ಅವರಿಗೆ ಒಳ್ಳೆಯ ಅವಕಾಶವಿದೆ. ಈಗಲೂ ಅವರು ದತ್ತಪೀಠ ಮುಕ್ತಿಗೊಳಿಸುವ ಕೆಲಸ ಮಾಡದಿದ್ದರೆ ಚಳಿಗಾಲದ ಅಧಿವೇಶನ ಮುಗಿದು ಮುಂದಿನ ಅಧಿವೇಶನದ ವೇಳೆಗೆ ರಾಜ್ಯಾದ್ಯಂತ ದೊಡ್ಡ ಹೋರಾಟ ಮಾಡಲಾಗುವುದು. ಈ ಹೋರಾಟದಲ್ಲಿ ಏನೇ ಅವಘಡಗಳಾದರೂ ಅದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಚಿವ ಸಿ.ಟಿ. ರವಿಯವರು ಸಹ ದತ್ತಮಾಲೆ ಧರಿಸಿದ ವೇಳೆಯೇ ತಮ್ಮ ಸರಕಾರ ಬಂದ 24ಗಂಟೆಗಳಲ್ಲಿ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ, ಈವರೆಗೂ ಆ ಕೆಲಸ ಮಾಡಿಸಲು ಆಗಿಲ್ಲ. ಅವರು ಧರ್ಮದ ಜತೆ ಅವರು ಆಟ ಆಡುತ್ತಿದ್ದಾರೆ. ಅವರಿಗೆ ತಮ್ಮ ನಾಲಿಗೆ ಮೇಲೆ ಸ್ವಾಭಿಮಾನವಿದ್ದರೆ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.