ಬಹುದಿನಗಳಿಂದ ಬಾಕಿ ಉಳಿದಿರುವ ವಿಧಾನಪರಿಷತ್ತಿನ ಸಭಾಪತಿ ಚುನಾವಣೆ ಈ ತಿಂಗಳ 21ರಂದು ನಡೆಯುವ ಸಾಧ್ಯತೆಯಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ಬಳಿಕ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿದೆ.  ಹಿಂದಿನ ಸಭಾಪತಿ ಬಸವರಾಜ ಹೊರಟ್ಟಿಅವರನ್ನೇ ಬಿಜೆಪಿ ಈ ಬಾರಿ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ

ಬೆಂಗಳೂರು (ಸೆ.15) :ಬಹುದಿನಗಳಿಂದ ಬಾಕಿ ಉಳಿದಿರುವ ವಿಧಾನಪರಿಷತ್ತಿನ ಸಭಾಪತಿ ಚುನಾವಣೆ ಈ ತಿಂಗಳ 21ರಂದು ನಡೆಯುವ ಸಾಧ್ಯತೆಯಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದ್ದು, ಬಳಿಕ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿದೆ. ರಾಜ್ಯಪಾಲರ ಅನುಮೋದನೆ ಬಳಿಕ ಚುನಾವಣೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಹಿಂದಿನ ಸಭಾಪತಿ ಬಸವರಾಜ ಹೊರಟ್ಟಿಅವರನ್ನೇ ಬಿಜೆಪಿ ಈ ಬಾರಿ ಕಣಕ್ಕಿಳಿಸುವ ಸಂಭವ ಹೆಚ್ಚಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸಿ: ಹೊರಟ್ಟಿ

ಬಿಜೆಪಿ ಇದೇ ಮೊದಲ ಬಾರಿಗೆ ವಿಧಾನಪರಿಷತ್ತಿನಲ್ಲಿ ಪೂರ್ಣ ಬಹುಮತ ಸಾಧಿಸಿರುವುದರಿಂದ ಬೇರೆ ಯಾವುದೇ ಪಕ್ಷದ ನೆರವಿಲ್ಲದೆ ಸಭಾಪತಿ ಸ್ಥಾನವನ್ನು ಪಡೆಯಬಹುದಾಗಿದೆ. ಹೊರಟ್ಟಿಅವರು ಹಿಂದೆ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗುವ ವೇಳೆ ತಮಗೆ ಮತ್ತೆ ಸಭಾಪತಿ ಸ್ಥಾನ ನೀಡುವಂತೆ ಷರತ್ತು ವಿಧಿಸಿದ್ದರು. ಇದಕ್ಕೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡಿದ್ದರು. ಹೀಗಾಗಿ, ಈಗ ಅವರನ್ನೇ ಮತ್ತೆ ಸಭಾಪತಿಯನ್ನಾಗಿ ಮಾಡಲು ವೇದಿಕೆ ಸಜ್ಜಾಗಿದೆ ಎನ್ನಲಾಗಿದೆ.

ಈ ನಡುವೆ ಪಕ್ಷದ ಹಿರಿಯ ಸದಸ್ಯರಾದ ಆಯನೂರು ಮಂಜುನಾಥ್‌, ಶಶಿಲ್‌ ನಮೋಶಿ, ಹಾಲಿ ಹಂಗಾಮಿ ಸಭಾಪತಿ ರಘುನಾಥ್‌ ಮಲ್ಕಾಪುರೆ ಮೊದಲಾದವರು ಕೂಡ ಸಭಾಪತಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಅವರಿಗೆ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಮೆ. ಮಹಾರಾಷ್ಟ್ರಕ್ಕಿಂತ ಕರ್ನಾಟಕದಲ್ಲಿ ಕಲಿಕಾ ಗುಣಮಟ್ಟ ಕಳಪೆ: ಬಸವರಾಜ ಹೊರಟ್ಟಿ

ಪರಿಷತ್ತಿನ ಬಲಾಬಲ:

  • ಬಿಜೆಪಿ- 39
  • ಕಾಂಗ್ರೆಸ್‌- 26
  • ಜೆಡಿಎಸ್‌- 08
  • ಪಕ್ಷೇತರ- 01
  • ಹಂಗಾಮಿ ಸಭಾಪತಿ- 01