ಕ್ಷಮೆ ಕೋರಿದ ಬಿಬಿಎಂಪಿ ಆಯುಕ್ತರ ನಡೆಗೆ ಸಿದ್ದರಾಮಯ್ಯ ಮೆಚ್ಚುಗೆ
ಸಕಾಲದಲ್ಲಿ ಅಂಬ್ಯುಲೆನ್ಸ್ ಬಾರದ ಕಾರಣದಿಂದಾಗಿ ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ಮೃತ ಪಟ್ಟ ವ್ಯಕ್ತಿಯ ಕುಟುಂಬಸ್ಥರಲ್ಲಿ ಕ್ಷಮೆ ಕೋರಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಅವರ ನಡೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಜುಲೈ.05): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಅನಿಲ್ ಕುಮಾರ್ ಮಾನವೀಯತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊಗಳಿದ್ದಾರೆ.
ಬೆಂಗಳೂರಿನ ಹನುಮಂತನಗರದ ಕೊರೋನಾ ಸೋಂಕಿತ ವ್ಯಕ್ತಿ ಅಂಬ್ಯಲೆನ್ಸ್ಗಾಗಿ ಕಾದು ಕುಳಿತು ಕೊನೆಗೆ ರಸ್ತೆಯಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮೃತರ ಮನೆಗೆ ತೆರಳಿ ಅವರ ಕುಟುಂಬಸ್ಥರಲ್ಲಿ ಕ್ಷಮೆ ಯಾಚಿಸಿದ್ದರು.
ಆಂಬುಲೆನ್ಸ್ ಕೊರತೆ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸಾವಿನ ಸಂಖ್ಯೆ
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅನಿಲ್ ಕುಮಾರ್ ಅವರ ನಡೆಯನ್ನು ಹೊಗಳಿದ್ದಾರೆ. ಸಕಾಲದಲ್ಲಿ ಅಂಬ್ಯುಲೆನ್ಸ್ ಬರದೆ ಸಾವನಪ್ಪಿದ್ದ ಕೊರೋನಾ ಸೋಂಕಿತರ ಮನೆಗೆ ತೆರಳಿ ಕುಟುಂಬದ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ನಮ್ಮೆಲ್ಲ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ, ಅವರಿಗೆ ಅಭಿನಂದನೆಗಳು. ಜನತೆ ಅಧಿಕಾರಿಗಳಿಂದ ನಿರೀಕ್ಷಿಸುವುದು ಇಂತಹ ಸೂಕ್ಷ್ಮ ಅಂತಕರಣದ ಮಾನವೀಯ ನಡವಳಿಕೆಯನ್ನು ಎಂದು ಅಭಿಪ್ರಾಯ ತಿಳಿಸಿದ್ದಾರೆ.