ಬಿಜೆಪಿಯ ಜನಸ್ಪಂದನ ಕಾರ್ಯಕ್ರದಲ್ಲಿ ಅಷ್ಟೊಂದು ಜನ ಸೇರಿಲ್ಲ. ಖಾಲಿ ಕುರ್ಚಿಗಳು ಇರುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ ಎಂದು ವ್ಯಂಗ್ಯವಾಡಿದ ಸತೀಶ ಜಾರಕಿಹೊಳಿ 

ಬೆಳಗಾವಿ(ಸೆ.14): ನಮ್ಮ ತಾಕತ್‌ ಏನು ಅಂತ ಬೆಳಗಾವಿಯ ಎರಡೂ ಪರಿಷತ್‌ ಚುನಾವಣೆಯಲ್ಲಿ ತೋರಿಸಿದ್ದೇವೆ. ಸಿಎಂ ಬೊಮ್ಮಾಯಿ ಅವರು ಜೋಶ್‌ನಲ್ಲಿ ಆ ರೀತಿ ಮಾತನಾಡಿದ್ದಾರೆ. ಅವರಿಗೆ ಬಹುಶಃ ಖಾಲಿ ಖುರ್ಚಿಗಳನ್ನು ನೋಡಿ ಜೋಶ್‌ ಬಂದಿರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಿಎಂ ಬೊಮ್ಮಾಯಿ ಅವರಿಗೆ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧಮ್‌ ತಾಕತ್‌ ಭಾಷಣ ವಿಚಾರ ಮಾತನಾಡಿದರು. ಸಿದ್ದರಾಮೋತ್ಸವ ಆದ ಮೇಲೆ ಬಿಜೆಪಿಯವರು ಹತಾಶರಾಗಿದ್ದಾರೆ. ಅಲ್ಲಿ ಸೇರಿದ ಜನ ನೋಡಿ ಅವರಿಗೆ ಹತಾಶೆ ಆಗಿದೆ. ಸಿಎಂ ಅಬ್ಬರದ ಭಾಷಣ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಈಗಾಗಲೇ ನಮ್ಮ ನಾಯಕರು, ಮುಖಂಡರು ಸಿಎಂ ಹೇಳಿಕೆಗೆ ಉತ್ತರ ನೀಡಿದ್ದಾರೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರದಲ್ಲಿ ಅಷ್ಟೊಂದು ಜನ ಸೇರಿಲ್ಲ. ಖಾಲಿ ಕುರ್ಚಿಗಳು ಇರುವುದನ್ನು ಮಾಧ್ಯಮಗಳಲ್ಲಿ ನಾವು ನೋಡಿದ್ದೇವೆ ಎಂದು ವ್ಯಂಗ್ಯವಾಡಿದರು.

ಮಠಾಧೀಶರ ವಿರುದ್ಧದ ಆರೋಪ ಸತ್ಯಕ್ಕೆ ದೂರ; ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್

ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಅಪಾರ ಮಳೆಯಿಂದ ಜನತೆಗೆ ತೊಂದರೆ ಉಂಟಾಗುತ್ತಿದ್ದರೂ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಕಳೆದ ಬಾರಿ ಕೂಡ ಸರ್ಕಾರವಾಗಲಿ, ಸಚಿವರಾಗಲಿ ಜನತೆಗೆ ಸ್ಪಂದನೆ ನೀಡಲಿಲ್ಲ. ಈ ಬಾರಿಯೂ ನಿರ್ಲಕ್ಷ್ಯ ಮುಂದುವರೆದಿದೆ. ಕೆಲವು ಕಡೆ ಮಳೆಯಿಂದ ಮನೆಗಳು ಬಿದ್ದಿವೆ. ಕೆಲವರನ್ನು ಸ್ಥಳಾಂತರ ಮಾಡಲಾಗಿದ್ದು, ಇನ್ನುಳಿದವರನ್ನು ಹಾಗೆ ಬಿಡಲಾಗಿದೆ ಎಂದು ತಿಳಿಸಿದರು.

ಕೆಪಿಟಿಸಿಎಲ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಈಗಾಗಲೇ 20 ಜನರನ್ನು ಬಂಧಿಸಿದ್ದಾರೆ. ಬರೀ ಬಂಧನ ಮಾಡಿದರೆ ಪ್ರಯೋಜನ ಇಲ್ಲ. ದುಡ್ಡು ಕೊಟ್ಟು ನೌಕರಿ ಪಡೆಯುವ ಸ್ಥಿತಿ ನಿರ್ಮಾಣವಾದರೆ ನಿರಂತರ ಅಧ್ಯಯನ ಮಾಡಿದವರಿಗೆ ಅನ್ಯಾಯವಾಗುತ್ತೆ. ಕಾರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಪ್ರಕರಣ ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಯಮಕನಮರಡಿಯಲ್ಲಿ ನನ್ನನ್ನು ಟಾರ್ಗೆಟ್‌ ಮಾಡಿ ಪ್ರಯೋಜನವಿಲ್ಲ. ಜನ ಬೆಂಬಲ ನಮ್ಮ ಕಡೆ ಇದ್ದಾಗ ಬಿಜೆಪಿಯವರು ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿಯವರು ಅಧಿಕಾರಕ್ಕಾಗಿ ಅನ್ಯ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ದೂರಿದರು.