ನನಗೆ ದೊರಕಿರುವ ಖಾತೆ ಬಗ್ಗೆ ನನಗೆ ಪೂರ್ಣ ಸಮಾಧಾನವಿದೆ. ಖಾತೆಗಳ ಬಗ್ಗೆ ಗೊತ್ತಿಲ್ಲದವರು ಏನಾದರೂ ವ್ಯಾಖ್ಯಾನ ಮಾಡಬಹುದು. ಈಗಾಗಲೇ ಈ ಖಾತೆಯನ್ನು ಒಮ್ಮೆ ನಿರ್ವಹಿಸಿದ್ದೇನೆ ಎಂದ ಸಚಿವ ಎಚ್‌.ಕೆ. ಪಾಟೀಲ್‌

ಗದಗ(ಮೇ.30):  ಜೂನ್‌ 1ರಂದು ಗ್ಯಾರಂಟಿ ಕಾರ್ಡ್‌ ಬಗ್ಗೆ ಮಾತನಾಡುವವರ ಬಾಯಿ ಮುಚ್ಚುವಂತಹ ಕ್ರಾಂತಿಕಾರಕ, ದೊಡ್ಡ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರಿಗೆ ಆಗಮಿಸಿದ ಸಚಿವರಿಗೆ ಗದಗಿನ ಮುಳಗುಂದ ನಾಕಾದಲ್ಲಿ ಭವ್ಯ ಸ್ವಾಗತ ನೀಡಲಾಯಿತು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಗ್ಯಾರಂಟಿ ಕಾರ್ಡ್‌ ವಿಚಾರದಲ್ಲಿ ಕೆಲವರು ಗೊಂದಲ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾನು ಏನನ್ನೂ ಹೇಳುವುದಿಲ್ಲ. ಜೂನ್‌ 1ರಂದು ಕ್ಯಾಬಿನೆಟ್‌ ಸಭೆ ನಡೆಯುತ್ತದೆ. ಆ ಸಭೆಯಲ್ಲಿ ವಿವರವಾದ, ಕ್ರಾಂತಿಕಾರಕ, ದೊಡ್ಡ ನಿರ್ಣಯವನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು. ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಖಾತೆ ದೊರಕಿರುವ ಕುರಿತು ಪ್ರತಿಕ್ರಿಯಿಸಿ, ‘ನನಗೆ ದೊರಕಿರುವ ಖಾತೆ ಬಗ್ಗೆ ನನಗೆ ಪೂರ್ಣ ಸಮಾಧಾನವಿದೆ. ಖಾತೆಗಳ ಬಗ್ಗೆ ಗೊತ್ತಿಲ್ಲದವರು ಏನಾದರೂ ವ್ಯಾಖ್ಯಾನ ಮಾಡಬಹುದು. ಈಗಾಗಲೇ ಈ ಖಾತೆಯನ್ನು ಒಮ್ಮೆ ನಿರ್ವಹಿಸಿದ್ದೇನೆ ಎಂದರು.

ನನಗೂ 200 ಯೂನಿಟ್‌ ಕರೆಂಟ್‌ ಬೇಕು, ಇಲ್ಲವಾದರೆ ಪ್ರತಿಭಟನೆ: ಶಾಸಕ ಸಿ.ಸಿ.ಪಾಟೀಲ್‌ ಎಚ್ಚರಿಕೆ

ಆ ಸಮಯದಲ್ಲಿ ಉತ್ತರ ಕರ್ನಾಟಕಕ್ಕೆ ಕಾನೂನು ವಿಶ್ವವಿದ್ಯಾಲಯ ತರುವ ದೊಡ್ಡ ಪ್ರಯತ್ನವಾಗಿತ್ತು. ನಾನು ಆ ಖಾತೆಯಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ಸರ್ಕ್ಯೂಟ್‌ ಬೆಂಚ್‌ ಮಾಡಿರುವುದು ಜನಕ್ಕೆ ಗೊತ್ತಿದೆ. ಜೊತೆಗೆ, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆಯನ್ನೂ ಸಹ ಕೊಟ್ಟಿದ್ದಾರೆ. ಕೊಟ್ಟಿರುವ ಖಾತೆಗಳನ್ನು ನಿರ್ವಹಿಸಲಿಕ್ಕೆ ನನಗೆ ಸಂತೋಷ ಮತ್ತು ಅಭಿಮಾನ ಎನಿಸುತ್ತಿದೆ. ಈ ಖಾತೆಗಳ ಮೂಲಕ ಬಾಕಿ ಉಳಿದ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವೆ’ ಎಂದರು.