* ದಿಢೀರ್ ನವದೆಹಲಿ ಹಾರಿದ ರಮೇಶ್ ಜಾರಕಿಹೊಳಿ* ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ ನಡೆ* ಕೇಂದ್ರ ನಾಯಕರ ಭೇಟಿ ಸಾಧ್ಯತೆ

ಬೆಂಗಳೂರು/ನವದೆಹಲಿ, (ಜೂನ್.29): ಗೋಕಾಕ್ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಹೇಳಿಕೆ ಕೊಟ್ಟ ಬೆನ್ನಲ್ಲೇ ಸಾಹುಕಾರ ಇಂದು (ಮಂಗಳವಾರ) ದೆಹಲಿಗೆ ಹಾರಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಅನೌಪಚಾರಿಕವಾಗಿ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ನಿನ್ನೆ ರಾತ್ರಿ 2 ಗಂಟೆಗೆ ನನಗೆ ದೆಹಲಿಯ ಒಬ್ಬರಿಂದ ಕರೆ‌ ಬಂದಿದೆ. ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದೇ‌ನೆ ಎಂದು ಸ್ಪಷ್ಟಪಡಿಸಿದರು.

ನಾನು ಯಾರನ್ನು ಭೇಟಿಯಾಗುತ್ತೇನೆಂದು ನಂತರ ತಿಳಿಸುತ್ತೇನೆ. ಒಂದು ಅಥವಾ ಎರಡು ಗಂಟೆ ಬಳಿಕ ಗೊತ್ತಾಗಲಿದೆ. ಭೇಟಿಯ ನಂತರ ಫೋಟೋ, ವಿಡಿಯೊವನ್ನು ನಾನೇ ಕೊಡುತ್ತೇನೆ ಎಂದು ತಿಳಿಸಿದರು.

ಸೋದರರಿಂದ ಮನವೊಲಿಕೆ: ರಮೇಶ್‌ ಜಾರಕಿಹೊಳಿ ರಾಜೀನಾಮೆ ನಿರ್ಧಾರ ವಾಪಸ್‌!

ದೆಹಲಿಯಲ್ಲಿ ಕೇಂದ್ರದ ನಾಯಕರುಗಳನ್ನ ಭೇಟಿ ಮಾಡುವ ಸಾಧ್ಯತೆಗಳಿದ್ದು, ಸಚಿವ ಸ್ಥಾನಕ್ಕೆ ಲಾಬಿ ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಚರ್ಚೆ ಮಾಡುವ ಸಾಧ್ಯತೆಗಳಿವೆ.

ರಾಜ್ಯ ರಾಜಕಾರಣದಲ್ಲಿನ ಅನೇಕ ಬೆಳವಣಿಗೆಗಳ ಮದ್ಯೆ ದಿಢೀರ್‌ ದಿಲ್ಲಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೇ ಶಾಸಕ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸುವುದಾಗಿ ಹೇಳಿದ್ದ ಅವರು, ಮಂಗಳವಾರ‌ ಬೆಳಿಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಕೆಎನ್ ರಾಜಣ್ಣ ಅವರನ್ನ ಭೇಟಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ವಾರದಿಂದ ರಮೇಶ್ ಜಾರಕಿಹೊಳಿ ಅವರಿವರನ್ನ ಭೇಟಿ ಮಾಡುತ್ತಿದ್ದಾರೆ. ಅಥಣಿಯಲ್ಲಿ ಆರ್‌ಎಸ್‌ಎಸ್‌ ನಾಯಕರನ್ನ ಭೇಟಿ ಮಾಡಿದ್ರು. ಇದಾದ ಬಳಿಕ ಲಖನ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಇತರೆ ತಮ್ಮ ಆಪ್ತ ಜೊತೆ ಗುಪ್ತ್ ಗುಪ್ತ್ ಮೀಟಿಂಗ್ ಮಾಡಿದ್ದರು.

ಇದೀಗ ಏಕಾಏಕಿ ದಿಲ್ಲಿಗೆ ಹೋಗಿರುವುದು ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.