Asianet Suvarna News Asianet Suvarna News

ಪ್ರತಿ ಮನೆಗೂ ಮೋದಿ ಸರ್ಕಾರದ ಸವಲತ್ತು ತಲುಪಿದೆ: ಬಿ.ಎಸ್‌.ಯಡಿಯೂರಪ್ಪ

ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಗಳ ಯೋಜನೆಗಳು ದೇಶದ ಪ್ರತಿ ಮನೆಯ ಪ್ರಜೆಗೆ ತಲುಪಿಸಲಾಗಿದೆ. ಇದು ಬಿಜೆಪಿಗೆ ಇರುವ ಬದ್ಧತೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. 

Privilege of Narendra Modi government has reached every household Says BS Yediyurappa gvd
Author
First Published Mar 12, 2023, 1:59 PM IST

ಲಿಂಗಸುಗೂರು (ಮಾ.12): ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಗಳ ಯೋಜನೆಗಳು ದೇಶದ ಪ್ರತಿ ಮನೆಯ ಪ್ರಜೆಗೆ ತಲುಪಿಸಲಾಗಿದೆ. ಇದು ಬಿಜೆಪಿಗೆ ಇರುವ ಬದ್ಧತೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ದೀನ-ದಲಿತರು, ಬಡವರು, ಮಹಿಳೆಯರ ಅಭಿವೃದ್ಧಿಗೆ ಕೇಂದ್ರ ರಾಜ್ಯ ಸರ್ಕಾರಗಳು ಬದ್ಧತೆಯಿಂದ ಕಾರ್ಯ ಮಾಡುತ್ತಿವೆ. ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಮಾತೆಯ ಸೇವೆಯನ್ನು ರಜೆ ಪಡೆಯದೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಣಾಮ ದೇಶ ಪ್ರಪಂಚ ಮುಂದುವರೆದ ದೇಶಗಳ ಸಾಲಿನಲ್ಲಿ ಬಂದು ನಿಂತಿದೆ ಎಂದು ಶ್ಲಾಘಿಸಿದರು.

ಕಾಗಿನೆಲೆ 40 ಕೋಟಿ ಹಣ ನೀಡಿ ಅಭಿವೃದ್ಧಿ ಪಡಿಸಿದ್ದು, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ನಿರ್ಮಿಸಲು ಬಿಜೆಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು ಕಾಗಿನೆಲೆ ಅಭಿವೃದ್ಧಿ ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್‌ ಕೊಟ್ಟರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 140ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್‌ ಭ್ರಮೆಯಲ್ಲಿ ಇರುವ ಜನರಿಗೆ ತಿಳಿ ಹೇಳಿ ಅವರನ್ನೂ ಬಿಜೆಪಿಗೆ ಕರೆ ತನ್ನಿ, ಕಾಂಗ್ರೆಸ್‌ ಈಗ ಹಣ, ಹೆಂಡ, ತೋಲ್ಬಳ, ಜಾತಿವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದು ಅದರ ಕಾರ್ಯತಂತ್ರ ಫಲಿಸದು ಎಂದು ಛೇಡಿಸಿದರು.

ನಂದಿನಿ ಹಾಲು ಕೊರತೆ ಹಿನ್ನೆಲೆ: ಕೆಎಂಎಫ್‌ಗೆ ಪತ್ರ ಬರೆದ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘಟನೆ

ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ನೆರೆದ ಜನರಲ್ಲಿ ಮನವಿ ಮಾಡಿದ ಬಿಎಸ್‌ವೈ ಮಾಜಿ ಶಾಸಕ ಬಿಜೆಪಿ ಆಕಾಂಕ್ಷಿ ಹೆಸರು ಘೋಷಣೆ ಮಾಡದೇ ಇರುವುದು ರಾಜಕೀಯದ ಲೆಕ್ಕಾಚಾರಕ್ಕೆ ಕಾರಣವಾಯಿತು. ಈ ವೇಳೆ ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್‌, ಪ್ರತಾಪಗೌಡ ಪಾಟೀಲ್‌, ಮುಖಂಡರಾದ ನಾಗಪ್ಪ ವಜ್ಜಲ್‌, ಉಮೇಶ ಸಜ್ಜನ್‌, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್‌ ಲೆಕ್ಕಿಹಾಳ ಸೇರಿದಂತೆ ಇದ್ದರು.

ಬಿಜೆಪಿ ಪಕ್ಷ ಅಧಿಕಾರ ತನ್ನಿ: ವಿಜಯ ಸಂಕಲ್ಪ ಯಾತ್ರೆಯು ಶನಿವಾರ ಸಿಂಧನೂರು ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ನಡೆಸಿದ ರೋಡ್‌ ಶೋನಲ್ಲಿ ಬಿಜೆಪಿ ಪಕ್ಷದ ಬಾವುಟಗಳು, ಮುಖಂಡರ ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸಿದವು. ನಗರದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ವಿಜಯ ಸಂಕಲ್ಪ ಯಾತ್ರೆಯು ಬಾಬು ಜಗಜೀವನರಾಮ್‌ ವೃತ್ತ ಬಸವೇಶ್ವರ ವೃತ್ತದ ಮೂಲಕ ಬಸವೇಶ್ವರ ವೃತ್ತ ಹಾಗೂ ಮಹಾತ್ಮಗಾಂಧಿ ವೃತ್ತದಲ್ಲಿ ಬಂದು ಯಾತ್ರೆ ವಾಹನದಲ್ಲಿ ನಿಂತು ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. 

ರಾಜ್ಯದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನಿಶ್ಚಿತ: ಜಗದೀಶ್‌ ಶೆಟ್ಟರ್‌ ಅಭಿಮತ

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 2 ಟಿಎಂಸಿ ನೀರು ಹರಿಸಿ, ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಬೆಳೆದ ಬೆಳೆಗಳನ್ನು ಸರ್ಕಾರ ರಕ್ಷಣೆ ಮಾಡಲಿದೆ ಎಂದು ಹೇಳಿದರು. ಸಚಿವ ಬಿ.ಶ್ರೀರಾಮುಲು ಮಾತನಾಡಿ ಈ ಭಾಗದ ರೈತರ ಹಿತದೃಷ್ಟಿಯಿಂದ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ಅನುದಾನ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ರೂ.5 ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಅಲ್ಲದೆ ರಾಯಚೂರಿನಲ್ಲಿ ವಿಮಾನ ನಿಲ್ದಾಣ, ಐಐಐಟಿ, ಏಮ್ಸ್‌ ಮಾದರಿ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಆದ್ದರಿಂದ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದರು.

Follow Us:
Download App:
  • android
  • ios