ಆರ್ಎಸ್ಎಸ್ ನನ್ನಂತಹ ಕೋಟ್ಯಂತರ ಜನರನ್ನು ಬೆಳೆಸಿದೆ. ನಿಮ್ಮ ಕಾಂಗ್ರೆಸ್ಗೆ 130 ವರ್ಷಗಳಾಗಿದ್ದು, ಹಾಳಾಗಿ ಹೋಳಾಗಿ ದೇಶವನ್ನೇ ಹಾಳು ಮಾಡಿದೆ ಎಂದು ಆರ್ಎಸ್ಎಸ್ ನಿಷೇಧ ಮಾಡಬೇಕೆಂದು ಹೇಳಿದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಕಾರವಾರ (ಅ.14): ಆರ್ಎಸ್ಎಸ್ ನನ್ನಂತಹ ಕೋಟ್ಯಂತರ ಜನರನ್ನು ಬೆಳೆಸಿದೆ. ನಿಮ್ಮ ಕಾಂಗ್ರೆಸ್ಗೆ 130 ವರ್ಷಗಳಾಗಿದ್ದು, ಹಾಳಾಗಿ ಹೋಳಾಗಿ ದೇಶವನ್ನೇ ಹಾಳು ಮಾಡಿದೆ ಎಂದು ಆರ್ಎಸ್ಎಸ್ ನಿಷೇಧ ಮಾಡಬೇಕೆಂದು ಹೇಳಿದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುತಾಲಿಕ್, ಆರ್ಎಸ್ಎಸ್ ದೇಶವನ್ನು ಕಟ್ಟುವ ಕೆಲಸವನ್ನು ಮಾಡಿದೆಯೇ ಹೊರತೂ ಹಾಳು ಮಾಡಿಲ್ಲ ಎಂದರು.
ಆರ್ಎಸ್ಎಸ್ನ್ನು ತಾಲಿಬಾನ್ಗೆ ಹೋಲಿಸಿದ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ಅವರ ವಿರುದ್ಧವೂ ಮುತಾಲಿಕ್ ಕೆಂಡಕಾರಿ, ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಎಚ್ಚರಿಸಿದರು. ಪಾಕಿಸ್ತಾನ್ ಜಿಂದಾಬಾದ್ ಅಂತ ಹೇಳುವವರನ್ನು ಬ್ಯಾನ್ ಮಾಡಬೇಕೆಂದು ನಿಮ್ಮ ಬಾಯಿಂದ ಬರುವುದಿಲ್ಲ. ಭಾರತ್ ಮಾತಾಕಿ ಜೈ ಎಂದರೆ ಬ್ಯಾನ್ ಮಾಡಿ ಅಂತೀರಿ ಎಂದು ತಿರುಗೇಟು ನೀಡಿದರು. ನಿಮಗೆ ಧೈರ್ಯವಿಲ್ಲ, ಯಾಕಂದ್ರೆ ವೋಟ್ ಬ್ಯಾಂಕ್ ರಾಜಕಾರಣ. ಮುಸ್ಲಿಮರ ವೋಟ್ನಿಂದಲೇ ನೀವು ಬದುಕುತ್ತಿದ್ದೀರಿ.
ಆರ್ಎಸ್ಎಸ್ಗೆ ಬೈದರೆ ಸರ್ವನಾಶವಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು. ಶಾಸಕ ಮುನಿರತ್ನ ಅವರಿಗೆ ಡಿಕೆಶಿ ಅವರು ಏಯ್ ಕರಿಟೋಪಿ ಬಾ ಇಲ್ಲಿ ಅಂತಾರೆ. ಅದನ್ನೇ ಅವರು ಮುಸ್ಲಿಮರಿಗೆ ಹೇಳಲಿ ನೋಡೋಣ. ಕರಿಟೋಪಿನೇ ನೂರು ವರ್ಷ ಬಾಳಿದೆ. ಕಾಂಗ್ರೆಸ್ ಎಷ್ಟು ಹಾಳಾಗಿದೆ, ಹೋಳಾಗಿದೆ ಎಂದು ಲೆಕ್ಕ ಕೊಡುತ್ತೇವೆ. ಆರ್ಎಸ್ಎಸ್ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಮುತಾಲಿಕ್ ಸವಾಲು ಹಾಕಿದರು.
ಹಿಂದೂಗಳ ವಿರುದ್ಧ ನಡೆದುಕೊಳ್ಳುತ್ತಿರುವ ಪೊಲೀಸ್ ಇಲಾಖೆ
ನಕಲಿ ದಾಖಲೆ ಸೃಷ್ಟಿಸಿ ಕಾನೂನನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಯೂಟ್ಯೂಬರ್ ಮುಕಳೆಪ್ಪ (ಖ್ವಾಜಾ ಶಿರಹಟ್ಟಿ) ಹಿಂದೂ ಯುವತಿಯನ್ನು ಪುಸಲಾಯಿಸಿ ಬ್ರೇನ್ ವಾಷ್ ಮಾಡುವ ಮೂಲಕ ಮತಾಂತರ ಮಾಡಿ ವ್ಯವಸ್ಥಿತವಾಗಿ ವಿವಾಹ ನೋಂದಣಿ ಮಾಡಿಕೊಂಡ ಬಗ್ಗೆ ಯುವತಿಯ ತಾಯಿ ಪೊಲೀಸ ದೂರು ನೀಡಿ ೩ ದಿನ ಕಳೆದರೂ ಕೂಡ ಪೊಲೀಸರು ಯಾರನ್ನು ಕೂಡ ಬಂಧಿಸಿ ವಿಚಾರಣೆ ಮಾಡುವ ಕೆಲಸ ಮಾಡಿಲ್ಲ. ಇದು ಪೊಲೀಸ್ ಇಲಾಖೆಯ ತಾರತಮ್ಯದ ನೀತಿ ತೋರಿಸುತ್ತದೆ ಎಂದು ಆರೋಪಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಏನಾದರೂ ಹಿಂದೂ ಹುಡುಗ ಮುಸ್ಲಿಂ ಹುಡುಗಿಯಾಗಿದ್ದರೆ ಪೊಲೀಸ್ ಇಲಾಖೆ ಹೀಗೆಯೇ ನಡೆದುಕೊಳ್ಳುತ್ತಿತ್ತಾ? ಈ ರೀತಿಯ ಪೊಲೀಸ್ ವ್ಯವಸ್ಥೆಗೆ ಧಿಕ್ಕಾರ. ಹಿಂದೂಗಳ ವಿರುದ್ಧ ನಡೆದುಕೊಳ್ಳುವ ಮಾನಸಿಕತೆ ಇವತ್ತು ಪೊಲೀಸ್ ಇಲಾಖೆಯಲ್ಲಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರದ ಒತ್ತಡ ಇದೆ ಎಂದು ಆರೋಪಿಸಿದರು.
