ಬಿಜೆಪಿ ಸೋತ 144 ಕ್ಷೇತ್ರ ಗೆಲ್ಲಲು ಮೋದಿ, ಶಾ ಪಣ: ಜೋಡೆತ್ತಿನಿಂದ ಈಗಿಂದಲೇ ರ್ಯಾಲಿ..!
ಒಂದೂವರೆ ವರ್ಷದ ಬಳಿಕ ನಡೆಯಬೇಕಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಭರದ ತಯಾರಿ ಆರಂಭಿಸಿದ ಆಡಳಿತಾರೂಢ ಬಿಜೆಪಿ
ನವದೆಹಲಿ(ಅ.10): ಒಂದೂವರೆ ವರ್ಷದ ಬಳಿಕ ನಡೆಯಬೇಕಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಈಗಿನಿಂದಲೇ ಭರದ ತಯಾರಿ ಆರಂಭಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಪರಾಜಯ ಹೊಂದಿದ 144 ಕ್ಷೇತ್ರಗಳಲ್ಲಿ ‘ಕಮಲ’ ಅರಳಿಸುವ ಉದ್ದೇಶದೊಂದಿಗೆ ಬೃಹತ್ ಯೋಜನೆಯೊಂದನ್ನು ಹಾಕಿಕೊಂಡಿದೆ. ಅದರ ಪ್ರಕಾರ, 144 ಲೋಕಸಭಾ ಕ್ಷೇತ್ರಗಳ ಪೈಕಿ 40ಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ತೆರಳಿ ರ್ಯಾಲಿ ನಡೆಸಿ ‘ಸಂಚಲನ’ ಮೂಡಿಸಲಿದ್ದಾರೆ.
ಬಿಜೆಪಿ ದುರ್ಬಲವಾಗಿರುವ ಅಥವಾ ಸೋತಿರುವ 144 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಪರ ಅಲೆ ಎಬ್ಬಿಸಲು ‘ಲೋಕಸಭಾ ಪ್ರವಾಸ ಯೋಜನೆ ಹಂತ-2’ ಎಂಬ ಕಾರ್ಯಕ್ರಮವನ್ನು ಬಿಜೆಪಿ ಹಮ್ಮಿಕೊಂಡಿದೆ. 40 ಕಡೆಗಳಲ್ಲಿ ಮೋದಿ ಅವರು ಬೃಹತ್ ಸಮಾವೇಶ ನಡೆಸಲಿದ್ದಾರೆ. ಉಳಿದ 104 ಕ್ಷೇತ್ರಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ಸಚಿವರು ತೆರಳಿ ರಾರಯಲಿಗಳನ್ನು ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಭಿವೃದ್ಧಿ ಕಾರ್ಯ ಮೆಚ್ಚಿ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆ
ಕೇಂದ್ರ ಸಚಿವರಿಗೆ ಈ ಕ್ಷೇತ್ರಗಳ ಹೊಣೆಗಾರಿಕೆಯನ್ನು ನೀಡಲಾಗುತ್ತದೆ. ಜವಾಬ್ದಾರಿ ಹೊತ್ತವರು ಆಯಾ ಕ್ಷೇತ್ರದ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಜತೆ ನಿರಂತರವಾಗಿ ಸಭೆ ನಡೆಸಬೇಕು. ಸ್ಥಳೀಯ ಬಿಜೆಪಿ ಘಟಕದಲ್ಲಿರುವ ಅಸಮಾಧಾನಿತ ನಾಯಕ ದೂರು-ದುಮ್ಮಾನ ಆಲಿಸಿ, ಇತ್ಯರ್ಥಪಡಿಸಬೇಕು ಎಂದು ವಿವರಿಸಿವೆ.
40 ಕೇಂದ್ರ ಸಚಿವರಿಗೆ 5 ಅಂಶಗಳ ಕಾರ್ಯಕ್ರಮವನ್ನು ನೀಡಲಾಗುತ್ತದೆ. ಪ್ರಚಾರ ಯೋಜನೆ ಅನುಷ್ಠಾನ, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಆಯೋಜನೆ, ರಾಜಕೀಯ ನಿರ್ವಹಣೆ, ಅಭಿಪ್ರಾಯ ಸಮಿತಿ ರಚನೆ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ವಾಸ್ತವ್ಯ ಎಂಬ ಗುರಿಯನ್ನು ಕೊಡಲಾಗುತ್ತದೆ. ವಾಸ್ತವ್ಯದ ಸಂದರ್ಭದಲ್ಲಿ ಕೇಂದ್ರ ಮಂತ್ರಿಗಳು ಸ್ಥಳೀಯ ಧಾರ್ಮಿಕ ನಾಯಕರು, ಸ್ವಾಮೀಜಿಗಳು, ವಿವಿಧ ಸಮುದಾಯಗಳ ಮುಖಂಡರ ಮನೆಗೆ ತೆರಳಿ ಗುಪ್ತ ಮಾತುಕತೆ ನಡೆಸಬೇಕು. ಸ್ಥಳೀಯ ಹಬ್ಬ, ಆಚರಣೆ, ಜಾತ್ರೆ, ಸಂಪ್ರದಾಯ, ಬೀದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ ಎಂದು ಪಕ್ಷ ಹೇಳಿದೆ. ವೈದ್ಯರು, ಪ್ರಾಧ್ಯಾಪಕರು, ಉದ್ಯಮಿಗಳು ಹಾಗೂ ವೃತ್ತಿಪರರ ಜತೆ ವರ್ಚುವಲ್ ಸಭೆ ನಡೆಸಬೇಕು ಎಂದು ಪಕ್ಷ ನಿರ್ದೇಶಿಸಿದೆ.