* ಕಾಂಗ್ರೆಸ್  ಕಾರ್ಯ ಚಟುವಟಿಕೆಗಳಿಂದ ದೂರ ಉಳಿದ ಎಸ್.ಆರ್.ಪಾಟೀಲ್  * ಪಕ್ಷದಿಂದ ದೂರ ಉಳಿದಿದ್ಯಾಕೆ? ಬಿಜೆಪಿಯಿಂದ ಆಫರ್‌ ಬಂತಾ? * ಎಲ್ಲವುದಕ್ಕೂ ಉತ್ತರಿಸಿದ ಕಾಂಗ್ರೆಸ್ ಹಿರಿಯ ನಾಯಕ ಎಸ್‌ಆರ್ ಪಾಟೀಲ್

ಬೆಂಗಳೂರು, (ಏ.10): ತಮ್ಮನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಮಾಜಿ ಸಚಿವ ಎಸ್.ಆರ್.ಪಾಟೀಲ್ ಕಾಂಗ್ರೆಸ್ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಮೂಲ ಕಾಂಗ್ರೆಸ್ಸಿಗರಾಗಿ ಪಕ್ಷದ ಪರ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ, ಹಿರಿಯರಾದ ತಮ್ಮನ್ನು ಪಕ್ಷ ಕಡೆಗಣಿಸುತ್ತಿರುವುದಕ್ಕೆ ಮುನಿಸಿಕೊಂಡಿರುವ ಎಸ್.ಆರ್.ಪಾಟೀಲ್ ಸೈಲೆಂಟ್ ಆಗಿದ್ದಾರೆ.

Add Asianetnews Kannada as a Preferred SourcegooglePreferred

ಇನ್ನು ಇಂದು(ಭಾಣುವಾರ) ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ನನಗೆ ವಿಶ್ರಾಂತಿ ಬೇಕಿದೆ, ಸತತ 45 ವರ್ಷಗಳ ಪಕ್ಷ, ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀನಿ. ಸದ್ಯಕ್ಕೆ ಈಗ ಸ್ವಲ್ಪ ವಿಶ್ರಾಂತಿ ಸಿಕ್ಕಿದೆ ಎಂದರು.

Bagalkot: ಏ.13 ರಿಂದ ಕೃಷ್ಣಾ-ಮಹದಾಯಿ ಸಂಕಲ್ಪ ಯಾತ್ರೆ: ಎಸ್‌.ಆರ್‌.ಪಾಟೀಲ

ಟಿಕೆಟ್ ತಪ್ಪಿ 6 ತಿಂಗಳಾಯಿತು, ನಾನು ಯಾರ ಮೇಲೂ ದೋಷಾರೋಪಣೆ ಮಾಡಿಲ್ಲ. ಯಾರ ಮೇಲೂ ಆಕ್ರೋಶ ವ್ಯಕ್ತಪಡಿಸಿಲ್ಲ. ಇದು ಪಕ್ಷದ ನಿರ್ಧಾರ, ನಾನು ಸ್ವೀಕರಿಸಿದ್ದೇನೆ ಅಂತಾ ಹೇಳಿದ್ದೇನೆ. ನಾನು ಮೇಲ್ಮನೆಯಲ್ಲಿ ಇದ್ರೇನೆ ಕೆಲಸ ಮಾಡಬೇಕೆಂಬ ಕಾನೂನು ಇಲ್ಲ. ಸದ್ಯ ಶಕ್ತಿ ಸೌಧದಿಂದ ನಾನು ಹೊರಗಿದ್ದೇನೆ. ಅಷ್ಟೇ ಶಕ್ತಿಶಾಲಿಯಾಗಿ ಜನ ಸೇರಿಸಿ ಉ.ಕ ನ್ಯಾಯ ಕೊಡಲು ಹೋರಾಟ ಮಾಡ್ತಿದೀನಿ ಎಂದು ಹೇಳಿದರು.

ಹಿರಿಯ ರಾಜಕಾರಣಿಯನ್ನು ಕಡೆಗಣಿಸಲಾಗ್ತಿದಿಯಾ? ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾನು ಏನೂ ಹೇಳಲ್ಲ, ನಾನೇನಾದ್ರೂ ಹೇಳಿದ್ರೆ ಕಾಂಟ್ರವರ್ಸಿ ಆಗುತ್ತೆ. ನಾನು ಒಬ್ಬ ಕಮಿಟೆಡ್ ಕಾಂಗ್ರೆಸ್ ಮ್ಯಾನ್ ಸಮಾಜಾಯಿಷಿ ನೀಡಿದರು.

ಬೇರ ಪಕ್ಷದವರು ಆಹ್ವಾನ ನೀಡಿದ್ದಾರಾ ಎಂಬ ಪ್ರಶ್ನೆ ಉತ್ತರಿಸಿದ ಅವರು, ನನಗೆ ಯಾರೂ ಆಹ್ವಾನ ಮಾಡಿಲ್ಲ, ನನಗೆ ಆಹ್ವಾನ ಮಾಡುವುದೂ ಇಲ್ಲ. ಯಾಕಂದ್ರೆ ನನ್ನ ಬದುಕಿನ ಪ್ರಾರಂಭದಿಂದಲೂ ಕಾಂಗ್ರೆಸ್ ನಲ್ಲಿದ್ದೇನೆ. ನಾನೊಬ್ಬ ನಿಷ್ಠಾವಂತ ಕಾಂಗ್ರೆಸ್ಸಿಗ ಅಂತೇಳಿ ನನ್ನ ಯಾರೂ ಕೇಳಲೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ಅನೇಕ ಸಚಿವರು ನನ್ನ ಸ್ನೇಹಿತರು ಇದ್ದಾರೆ. ನನಗೆ ಆತ್ಮೀಯರು ಇರ್ತಾರೆ. ಉಭಯ ಕುಶಲೋಪರಿ ವಿಚಾರ ಮಾಡ್ತೇವಿ, ಚಹಾ ಕುಡಿಯುತ್ತೇವೆ. ಮೊನ್ನೆ ಸಚಿವ ಗೋವಿಂದ ಕಾರಜೋಳ ಭೇಟಿ ಆಗ್ತಿದ್ರು. ಒಂದು ಟೀ ಕುಡಿಯಲು ಆಹ್ವಾನ ನೀಡಿದ್ರು. ಬರೀ ಟೀ ಆಪರ್ ಮಾಡಿದ್ರೆ ವಿನಃ ಪಕ್ಷಕ್ಕೆ ಆಫರ್ ಮಾಡಿಲ್ಲ. ಕಾರಜೋಳ ಹಿರಿಯರು ಹಾಗೆಲ್ಲ ಕರೆಯಲ್ಲ. ಆ ಮಟ್ಟದ ರಾಜಕಾರಣಿ ಅಲ್ಲ.. ಪಕ್ಷಕ್ಕೆ ಆಹ್ವಾನಿಸಿದ್ರೆ ಕರೆದಿದ್ದಾರೆ ಅಂತ ಹೇಳ್ತಿದ್ದೆ ಎಂದು ತಿಳಿಸಿದರು.

ಸಂಕಲ್ಪ ಯಾತ್ರೆ ಕೈಗೊಂಡ ಎಸ್‌ಆರ್‌ ಪಾಟೀಲ್
ಏ.13 ರಿಂದ 6 ದಿನಗಳ ಕಾಲ ಉತ್ತರ ಕರ್ನಾಟಕದ ಎಲ್ಲ ರೈತರು, ಸಂತ್ರಸ್ತರು, ಮುಖಂಡರು ಸೇರಿ ಸುಮಾರು 75 ಟ್ರ್ಯಾಕ್ಟರ್‌ಗಳಲ್ಲಿ ಯಾತ್ರೆಯನ್ನು ನರಗುಂದದಿಂದ(Nargund) ಆರಂಭ ಮಾಡಲಾಗುವುದು ಎಂದು ವಿಧಾನ ಪರಿಷತ್ತ ವಿರೋಧ ಪಕ್ಷದ ಮಾಜಿ ನಾಯಕ ಎಸ್‌.ಆರ್‌.ಪಾಟೀಲ(SR Patil) ಹೇಳಿದರು.

ಇಲ್ಲಿನ ಬಾಪೂಜಿ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿ ಬುಧವಾರ ಉತ್ತರ ಕರ್ನಾಟಕ(North Karnataka) ಸ್ವಾಭಿಮಾನ ವೇದಿಕೆ ಹಮ್ಮಿಕೊಂಡಿದ್ದ ಕೃಷ್ಣಾ ಮಹದಾಯಿ ಸಂಕಲ್ಪ ಯಾತ್ರೆ(Krishna Mahadayi Sankalpa Yatra) ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸಂಚರಿಸುವ ಈ ಯಾತ್ರೆ ಏ.18ರಂದು ಬೀಳಗಿ ತಲುಪಿ ಬೃಹತ್‌ ಸಮಾವೇಶ ಮಾಡಿ ಸರ್ಕಾರಗಳಿಗೆ ಮನವರಿಕೆ ಮಾಡೋಣ. ಈ ಯಾತ್ರೆ ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ನಡೆಯಲಿದೆ. ಹೀಗಾಗಿ ಎಲ್ಲರೂ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಭಾಗವಹಿಸಬೇಕು ಎಂದು ಕೋರಿದರು.

ಕೃಷ್ಣಾ ಯೋಜನೆಯ(Krishna Project) 3ನೇ ಹಂತ ಜಾರಿಯಾದರೆ 130 ಟಿಎಂಸಿ ನೀರು ಸಂಗ್ರಹಣೆಯೊಂದಿಗೆ ಉತ್ತರ ಕರ್ನಾಟಕದ 7 ಜಿಲ್ಲೆಗಳ 14.6 ಲಕ್ಷ ಎಕರೆ ಜಮೀನು ನೀರಾವರಿಗೆ(Irrigation) ಬರಲಿದೆ. ಮಹಾದಾಯಿ(Mahadayi) ನದಿಯನ್ನು ಮಲಪ್ರಭ ನದಿಗೆ ಜೋಡಣೆ ಮಾಡಿದರೆ 4 ಜಿಲ್ಲೆಗಳಿಗೆ ಸುಮಾರು 7.56 ಟಿಎಂಸಿ ನೀರು ಕುಡಿಯಲು ಸಿಗುತ್ತದೆ. ನವಲಿ ಸಮತೋಲನ ಜಲಾಶಯದಲ್ಲಿ ತುಂಗಭದ್ರ ನದಿಗೆ ಡ್ಯಾಂ ನಿರ್ಮಿಸಿ 31 ಟಿಎಂಸಿ ನೀರು ಸಂಗ್ರಹಿಸಬಹುದು. ಹೀಗೆ ಹಲವಾರು ನೀರಾವರಿ ಯೋಜನೆಗಳು ಜಾರಿಗೆ ಬರುತ್ತವೆ. ಇದರಿಂದ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಜತೆಗೆ ಹಲವಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.