* ಕರ್ನಾಟಕ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ* ಸಂಪುಟ ಪುನಾರಚನೆಗೆ ಜೋರಾಯ್ತು ಕೂಗು* ಅಧ್ಯಕ್ಷರಿಂದ ಖಡಕ್ ಎಚ್ಚರಿಕೆ ರವಾನೆ

ಬೆಂಗಳೂರು, (ಜ.25): ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆ ಮಾಡುಬೇಕೆನ್ನುವ ಕೂಗು ಕರ್ನಾಟಕ ಬಿಜೆಪಿಯಲ್ಲಿ(Karnataka BJP) ಜೋರಾಗಿದೆ. ಅಲ್ಲದೇ ಬಿಜೆಪಿ ಶಾಸಕರುಗಳು ಸಚಿವ ಸ್ಥಾನಕ್ಕೆ ಪೈಪೋಟಿಗೆ ಇಳಿದಿದ್ದು, ಹಲವೆಡೆ ಗೌಪ್ಯ ಸಭೆಗಳನ್ನ ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಇದರಿಂದ ಬಿಜೆಪಿಯಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಖಡಕ್ ಎಚ್ಚರಿಕೆ ಸಂದೇಶವನ್ನ ರವಾನಿಸಿದ್ದಾರೆ.

Karnataka Politics ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಯತ್ನಾಳ್‌ ಕೊಟ್ಟ ಸುಳಿವು

ಸಂಪುಟ ವಿಸ್ತರಣೆ ಒಳಗೊಂಡು ಇತರ ವಿಚಾರವಾಗಿ ಗೊಂದಲದ ಹೇಳಿಕೆಗಳನ್ನು ಕೊಟ್ಟ ಕೆಲವರಿಗೆ ನೋಟಿಸ್ ಕೊಡಲು ಚಿಂತನೆ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಈ ಮೂಲಕ ಶಾಸಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಪಕ್ಷದಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅಗತ್ಯ. ಯಾರೇ ಆಗಲಿ ಬಹಿರಂಗವಾಗಿ ಪಕ್ಷದ ವಿಚಾರಗಳನ್ನು ಚರ್ಚೆ ಮಾಡುವಂತಿಲ್ಲ. ಯಾರು ಮಾಧ್ಯಮದಲ್ಲಿ ಮಾತಾಡುತ್ತಿದ್ದಾರೋ ಅವರನ್ನು ಕರೆದು ಮಾತಾಡುತ್ತೇನೆ. ಈಗಾಗಲೇ ಪದೇ ಪದೇ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ರಾಜ್ಯದ ಶಿಸ್ತು ಸಮಿತಿ ಮೂಲಕ‌ ಸ್ಪಷ್ಟೀಕರಣ ಪಡೆದು ಕೇಂದ್ರಕ್ಕೆ ವರದಿ ನೀಡಲಾಗಿದೆ, ಅಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಯಾವುದೇ ಶಾಸಕರು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ನಾಯಕರು ಯೋಚನೆ ಮಾಡ್ತಾರೆ. ಈಗಾಗಲೇ ಸಿಎಂ ಕೂಡ ಅದನ್ನ ಸ್ಪಷ್ಟಪಡಿಸಿದ್ದಾರೆ. ಸಿಎಂ ಹಾಗೂ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ, ಸಿಎಂ ಮುಂದಿನ ವರ್ಷವೂ ಪೂರ್ಣ ಮಾಡ್ತಾರೆ. ನಮ್ಮ ಟಾರ್ಗೆಟ್ ಇರೋದು ಬಿಬಿಎಂಪಿ ಎಲೆಕ್ಷನ್ . ಪಾರ್ಟಿ ಹಾಗೂ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಟೀಲ್ ಸ್ಪಷ್ಟಪಡಿಸಿದರು.

ಬಿಎಸ್ ವೈ, ಬೊಮ್ಮಾಯಿ ಉತ್ತಮ ಆಡಳಿತ ಕೊಡ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಬಿಬಿಎಂಪಿ ಗೆಲ್ಲುವ ಗುರಿಇದೆ, ಗೆದ್ದೇ ಗೆಲ್ತೇವೆ. ಕಾಂಗ್ರೆಸ್ ನವರು ಹಗಲು ಕನಸು ಕಾಣ್ತಾ ಇದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ಅನ್ನೋದು ಅವರಿಗೆ ಅರ್ಥ ಆಗಿದೆ. ಅದಕ್ಕೆ ಜನರ ಮನಸ್ಸು ಡೈವರ್ಟ್ ಮಾಡ್ತಿದ್ದಾರೆ. ಬಿಜೆಪಿಯ ಯಾವುದೇ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿಲ್ಲ. ನಮ್ಮ ಪಾರ್ಟಿ ಶಿಸ್ತು, ನಿಯಮದ ಅಡಿಯಲ್ಲಿದೆ. ಯಾವುದೇ ಅಭಿಪ್ರಾಯಗಳಿದ್ರೂ ಪಕ್ಷದ ವೇದಿಕೆಯಲ್ಲಿ ಹೇಳಿದ್ದಾರೆ.

ಬಿಜೆಪಿ ಶಾಸಕರ ಗೌಪ್ಯ ಸಭೆ
ಹೌದು..ಮೊನ್ನೇ ಅಷ್ಟೇ ಬಿಜೆಪಿ ಶಾಸಕರಾದ ಎಂಪಿ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್‌ ಬೆಂಗಳೂರಿನಲ್ಲಿ ಗೌಪ್ಯ ಮಾತುಕತೆ ನಡೆಸಿದ್ದು, ಸಂಪುಟ ಪುನಾರಚನೆ ಆಗಲೇಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಸಂದರ್ಭ ಬಂದರೆ ಹೈಕಮಾಂಡ್ ನಾಯಕರನ್ನ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಗೌಪ್ಯ ಸಭೆ
ಯೆಸ್..ಇತ್ತ ಸಿಡಿ ಕೇಸ್‌ನಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಸಹ ಮತ್ತೆ ಬೊಮ್ಮಾಯಿ ಸಂಪುಟ ಸೇರಲು ಇನ್ನಿದ ಕಸರತ್ತು ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆರ್‌ಎಸ್‌ಎಸ್‌ ಪ್ರಮುಖ ನಾಯಕರನ್ನ ಜೊತೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಬಸನಗೌಡ ಪಾಟೀಲ್ ಯತ್ನಾಳ್‌ ಜತೆ ಸಭೆ ಮಾಡಿದ್ದು, ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ.