ರಾಜ್ಯ ಬಿಜೆಪಿಯಲ್ಲಿ ಕಾರ್ಯಕರ್ತರ ಕಿತ್ತಾಟ ಅತಿರೇಕಕ್ಕೆ ಹೋದ ಪರಿಣಾಮ ಬಿಎಸ್​ವೈ ಬೆಂಬಲಿಗರಿಗೆ ಕಚೇರಿಯಿಂದಲೇ ಗೇಟ್​ಪಾಸ್ ನೀಡಲಾಗಿದೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ಬೆಂಬಲಿಗನ ಕೊರಳು ಪಟ್ಟಿ ಹಿಡಿದು ಕಚೇರಿಯಿಂದ ಹೊರಹಾಕಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಆಗಿದ್ದೇನು? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಅ.14); ಬಿಎಸ್‌ವೈ ಹಾಗೂ ನಳೀನ್ ಕುಮಾರ್ ಕಟೀಲ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 

Add Asianetnews Kannada as a Preferred SourcegooglePreferred

ಬಿ.ಎಸ್​. ಯಡಿಯೂರಪ್ಪ ಅವರನ್ನುಸೈಡ್‌ ಲೈನ್ ಮಾಡಲು ಎಲ್ಲಾ ರೀತಿ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಬಿಎಸ್‌ವೈ ಬೆಂಬಲಿಗರ ಮಾತುಗಳು ಎಲ್ಲೋ ಒಂದು ಕಡೆ ನಿಜವೇನೋ ಅನ್ನಿಸುತ್ತಿವೆ. ಯಾಕಂದ್ರೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಮೊದಲಿನ ರೀತಿಯಲ್ಲಿ ಟ್ರೀಟ್ ಮಾಡುತ್ತಿಲ್ಲ.

ಬಿಜೆಪಿ ಕಚೇರಿಗೆ ಲಿಂಗಾಯತರಿಗೆ ಪ್ರವೇಶ ನಿರಾಕರಣೆ ಆರೋಪ

ಇದಕ್ಕೆ ಪೂರಕವೆಂಬಂತೆ ಮೂವರು ಡಿಸಿಎಂಗಳನ್ನು ಮಾಡಿದ್ದು ಸೇರಿದಂತೆ ರಾಜ್ಯ ಬಿಜೆಪಿ ಘಟಕದಲ್ಲಿ ಪದಾಧಿಕಾರಿಗಳಲ್ಲಿ ಬದಲಾವಣೆ ಮಾಡಿದೆ. ಅಷ್ಟೇ ಅಲ್ಲದೇ ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಸಭೆಯಲ್ಲಿ ಬಿಎಸ್‌ವೈ ಹಾಗೂ ನಳೀನ್ ಕುಮಾರ್ ಕಟೀಲ್ ನಡುವೆ ವಾಗ್ವಾದಗಳು ನಡೆದಿವೆ ಎನ್ನುವುದನ್ನು ಇನ್‌ಸೈಡ್ ಮೂಲಗಳು ತಿಳಿಸಿವೆ.

ಇದೀಗ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಿಂದ ಬಿಎಸ್‌ವೈ ಬೆಂಬಲಿಗನ ಮೇಲೆ ಹಲ್ಲೆ ನಡೆಸಿ ಕೊರಳ ಪಟ್ಟಿ ಹಿಡಿದು ಕಚೇರಿಯಿಂದಲೇ ಹೊರ ಹಾಕಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಕಾರ್ಯಕರ್ತರು ಹಾಗೂ ಮುರಳೀಧರ್ ರಾವ್ ಅವರ ಸಿಬ್ಬಂದಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಕಿತ್ತಾಟ ಶುರುವಾಗಿದ್ದು, ಅದು ತಾರಕಕ್ಕೇರಿದೆ.

ಕೊನೆಗೆ ರಾಜ್ಯದ ಪ್ರಮುಖ ಬಿಜೆಪಿ ನಾಯಕರ ಎದುರೇ ಬಿಎಸ್​ವೈ ಬೆಂಬಲಿಗ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಮುರಳೀಧರ್ ರಾವ್ ಸಿಬ್ಬಂದಿಗಳು ಆತನಿಗೆ ಕಪಾಳಮೋಕ್ಷ ಮಾಡಿ ಮತ್ತೆ ಕಚೇರಿಗೆ ಬರದಂತೆ ಧಮಕಿ ಹಾಕಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಬಿಜೆಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟ, ಕಂಪ್ಯೂಟರ್ ಅಪರೇಟರ್, ಪೋಟೋಗ್ರಾಫರ್, ವಿಡಿಯೋಗ್ರಾಫರ್, ಕಚೇರಿ ಸೂಪರ್ ವೈಸರ್, ರಿಸೆಪ್ಷನಿಸ್ಟ್ ಸೇರಿದಂತೆ ಯಡಿಯೂರಪ್ಪ ಬೆಂಬಲಿಗರಾದ ಒಟ್ಟು 9 ನೌಕರರಿಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಮ್ ಗೇಟ್ ಪಾಸ್ ನೀಡಿದೆ.

ಸಿಎಂ ಬಿಎಸ್​ವೈ ಮೇಲಿನ ಸಿಟ್ಟಿನಿಂದಾಗಿಯೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: