Asianet Suvarna News Asianet Suvarna News

ಇಂದಿನಿಂದ ಉಪಸಮರ ಕಣಕ್ಕೆ ರಂಗು: ಭರ್ಜರಿ ವಾಕ್ಸಮರ ಸಂಭವ!

* ದಸರಾ ಹಬ್ಬಕ್ಕೆ ತೆರೆ: ಇಂದಿನಿಂದ ಮೂರೂ ಪಕ್ಷಗಳ ಘಟಾನುಘಟಿ ನಾಯಕರ ಪ್ರಚಾರ

* ಹಾನಗಲ್‌, ಸಿಂದಗಿಯಲ್ಲಿ ಕಾವೇರಲಿದೆ ಅಖಾಡ

* ಭರ್ಜರಿ ವಾಕ್ಸಮರ ನಡೆವ ಸಂಭವ

Mysore Dasara Ends Political Parties Get Ready For hanagal Sindagi By Election Campaign pod
Author
Bangalore, First Published Oct 16, 2021, 7:34 AM IST

ಬೆಂಗಳೂರು(ಅ.16): ದಸರಾ ಹಬ್ಬದ(Mysore Dasara) ಬೆನ್ನಲ್ಲೇ ಶನಿವಾರದಿಂದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ(Assembly By Elections) ಪ್ರಚಾರ ರಂಗು ಪಡೆದುಕೊಳ್ಳಲಿದೆ.

ಹಾನಗಲ್‌ ಮತ್ತು ಸಿಂದಗಿ(Hanagal and Sindhagi) ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ(BS Yediyurappa), ಎಚ್‌.ಡಿ.ಕುಮಾರಸ್ವಾಮಿ(HD kumaraswamy) ಸೇರಿದಂತೆ ಮೂರೂ ಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಆರಂಭಿಸುತ್ತಿದ್ದಾರೆ.

ಹೀಗಾಗಿ, ಹೆಚ್ಚೂ ಕಡಮೆ ಇನ್ನೂ ಎರಡು ವಾರಗಳ ಕಾಲ ತುರುಸಿನ ವಾತಾವರಣ ಕಂಡು ಬರಲಿದೆ. ರಾಜಕೀಯ ಮುಖಂಡರ ವಾಕ್ಸಮರ, ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಬರ ಇರುವುದಿಲ್ಲ.

ಇಂದು ಹಾನಗಲ್‌ಗೆ ಸಿದ್ದು, ಎಚ್‌ಡಿಕೆ:

ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರದಿಂದ ಎರಡು ದಿನಗಳ ಕಾಲ ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಶನಿವಾರ ಪ್ರಚಾರ ಕೈಗೊಳ್ಳುವ ನಿರೀಕ್ಷೆಯಿದೆ.

ನಾಳೆ ಹಾನಗಲ್‌ಗೆ ಬೊಮ್ಮಾಯಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಭಾನುವಾರದಿಂದ ಹಾನಗಲ್‌ನಲ್ಲಿ ಪ್ರಚಾರ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ. ‘ಭಾನುವಾರದಿಂದ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದೇನೆ. ಮೊದಲು ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವೆ. ನಂತರ ಎರಡು ದಿನಗಳ ಕಾಲ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ’ ಎಂದು ಖುದ್ದು ಬೊಮ್ಮಾಯಿ ತಿಳಿಸಿದ್ದಾರೆ.

20ರಿಂದ ಬಿಎಸ್‌ವೈ ಯಾತ್ರೆ:

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಈ ತಿಂಗಳ 20ರಿಂದ ನಾಲ್ಕು ದಿನಗಳ ಕಾಲ ಉಭಯ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಅಭ್ಯರ್ಥಿಗಳ ಪರ ಮತ ಕೇಳಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ತಲಾ ಎರಡು ದಿನ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುರ್ಜೇವಾಲಾ ಕೂಡ ಅಖಾಡಕ್ಕೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈ ತಿಂಗಳ 19ರಂದು ಸಿಂದಗಿ ಹಾಗೂ 20 ರಂದು ಹಾನಗಲ್‌ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. 18ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪ್ರಚಾರ ನಡೆಸಲಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಈಗಾಗಲೇ ಸಿಂದಗಿ ಕ್ಷೇತ್ರದಲ್ಲಿ ಬೀಡು ಬಿಟ್ಟು ಪ್ರಚಾರ ಕೈಗೊಂಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರೂ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ನಾಳೆಯಿಂದ ಪ್ರಚಾರ

ಉಪಚುನಾವಣೆ ಪ್ರಚಾರದಲ್ಲಿ ಭಾನುವಾರದಿಂದ ಭಾಗವಹಿಸಲು ತೀರ್ಮಾನಿಸಿದ್ದೇನೆ. ಮೊದಲು ಹಾನಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವೆ. ನಂತರ ಎರಡು ದಿನ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಯಾರು ಎಲ್ಲೆಲ್ಲಿ ಪ್ರಚಾರ?

ಸಿದ್ದರಾಮಯ್ಯ: ಶನಿವಾರದಿಂದ 2 ದಿನ ಹಾನಗಲ್‌ನಲ್ಲಿ ಅಬ್ಬರದ ಪ್ರಚಾರ

ಕುಮಾರಸ್ವಾಮಿ: ಮಾಜಿ ಸಿಎಂರಿಂದಲೂ ಶನಿವಾರದಿಂದ ಪ್ರಚಾರ ನಿರೀಕ್ಷೆ

ಬೊಮ್ಮಾಯಿ: ಭಾನುವಾರದಿಂದ ಹಾನಗಲ್‌ನಲ್ಲಿ ಪ್ರಚಾರ. ಬಳಿಕ 2 ದಿನ ಸಿಂದಗಿಗೆ

ಯಡಿಯೂರಪ್ಪ: ಅ.20ರಿಂದ 4 ದಿನ ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಸಂಚಾರ

ಡಿಕೆಶಿ: ಅ.18ರಿಂದ ಪ್ರಚಾರ. 19ಕ್ಕೆ ಸಿಂದಗಿ, 20ಕ್ಕೆ ಹಾನಗಲ್‌ಗೆ ಸುರ್ಜೇವಾಲಾ

Follow Us:
Download App:
  • android
  • ios