Asianet Suvarna News Asianet Suvarna News

ಪಕ್ಷದಲ್ಲಿ ಅನ್ಯಾಯ, ಇನ್ನೊಂದು ತಿಂಗಳಲ್ಲಿ ಬೃಹತ್ ಸಮಾವೇಶದಲ್ಲಿ ಐತಿಹಾಸಿಕ ತೀರ್ಮಾನ: ಎಂ.ಆರ್. ಸೀತಾರಾಂ

* ಪಕ್ಷದಲ್ಲಿ ತಮಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚೆ

* ಅರಮನೆ ಮೈದಾನದಲ್ಲಿ ನಡೆದ ಬೆಂಬಲಿಗರ ಸಭೆ ಯಶಸ್ವಿ

* ಇನ್ನೊಂದು ತಿಂಗಳಲ್ಲಿ ಬೃಹತ್ ಸಮಾವೇಶದಲ್ಲಿ ಐತಿಹಾಸಿಕ ತೀರ್ಮಾನ: ಎಂ.ಆರ್. ಸೀತಾರಾಂ

 

MR Seetharam hits out State Congress leadership; to take decision next month pod
Author
Bangalore, First Published Jun 25, 2022, 9:09 AM IST

ಬೆಂಗಳೂರು(ಜೂ, 24); ಪಕ್ಷದಲ್ಲಿ ತಮಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಮಾಜಿ ಸಚಿವ ಎಂ.ಆರ್. ಸೀತಾರಾಂ ಕರೆದಿದ್ದ ಸಭೆ ಯಶಸ್ವಿಯಾಗಿದೆ. ಶಾಸಕರು, ಮಾಜಿ ಶಾಸಕರು, ಪಕ್ಷದ ಮಾಜಿ ಪದಾಧಿಕಾರಿಗಳು, ಹಿರಿಯ ಮುಖಂಡರು, ಸಾಮಾಜಿಕ ಸಂಘಟನೆಗಳ ಪ್ರಮುಖರು ಒಳ ಗೊಂಡಂತೆ ಸಹಸ್ರಾರು ಮಂದಿ ಬೆಂಬಲಿಗರು, ಸ್ನೇಹಿತರು ಎಂ.ಆರ್. ಸೀತಾರಾಂ ಅವರು ಕೈಗೊಳ್ಳುವ ನಿರ್ಧಾರಕ್ಕೆ ಅಚಲವಾದ ಬೆಂಬಲ ಘೋಷಿಸಿದರು.

ಆದರೆ ಹಾಲಿ ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್ ತೊರೆಯದಂತೆ ಮನವಿ ಮಾಡಿದರು. ಪಕ್ಷದ ನಾಯಕತ್ವ ತಮ್ಮ ನೋವಿಗೆ ಸ್ಪಂದಿಸಲಿದ್ದು, ಪಕ್ಷದಲ್ಲೇ ಉಳಿಯವಂತೆ ಕೋರಿಕೊಂಡರು. ಎಂ.ಎಸ್. ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ ಬಗ್ಗೆಯೂ ಸಮಾವೇಶದಲ್ಲಿ ಆಕ್ರೋಶ ವ್ಯಕ್ತವಾಯಿತು.

ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ಗಾರ್ಡೇನಿಯಾದಲ್ಲಿ ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ  ಎಂ.ಆರ್. ಸೀತಾರಾಂ, “ಕಾಂಗ್ರೆಸ್ ಒಳ್ಳೆಯ ಪಕ್ಷ. ಆದರೆ ಪಕ್ಷದ ಚುಕ್ಕಾಣಿ ಹಿಡಿದಿರುವವರು ಸರಿಯಿಲ್ಲ. 1984 ರಿಂದ ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದು, ತಮಗೆ ಈ ವರೆಗೆ ನಾಲ್ಕು ಬಾರಿ ಅನ್ಯಾಯ ಮಾಡಲಾಗಿದೆ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಇನ್ನೂ ಹಲವು ಹಿರಿಯ ಮುಖಂಡರು, ಬೆಂಬಲಿಗರ ಜೊತೆ ಸಭೆಗಳನ್ನು ನಡೆಸಿ ಆಷಾಢ ಮಾಡದ ನಂತರ ಮತ್ತೊಂದು ಬೃಹತ್ ಸಮಾವೇಶದ ಮೂಲಕ ರಾಜಕೀಯವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಬಾರಿ ತಮ್ಮ ನಿರ್ಧಾರ ಐತಿಹಾಸಿಕವಾಗಿರಲಿದ್ದು, ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ” ಎಂದು ಘೋಷಿಸಿದರು.

ಪಕ್ಷದಲ್ಲಿ ತಮಗಷ್ಟೇ ಅನ್ಯಾಯವಾಗಿಲ್ಲ. ತಮ್ಮ ಪುತ್ರ ಎಂ.ಎಸ್. ರಕ್ಷಾ ರಾಮಯ್ಯ ಅವರಿಗೂ ತೊಂದರೆಯಾಗಿದೆ. ನನ್ನ ಮಗನ ಎದುರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಿಂತಿದ್ದ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ಆದರೆ ಪಕ್ಷದ ಚುಕ್ಕಾಣಿ ಹಿಡಿದಿರುವವರು ಒತ್ತಡ ಹೇರಿ ನಾಮಪತ್ರವನ್ನು ಸ್ವೀಕರಿಸುವಂತೆ ಮಾಡಿದ್ದರು. ಒಮ್ಮೆ ಉಮೇದುವಾರಿಕೆ ತಿರಸ್ಕೃತವಾದ ನಂತರ ಮತ್ತೆ ಹೇಗೆ ಅದನ್ನು ಸ್ವೀಕರಿಸಲು ಸಾಧ್ಯ?. ಇಷ್ಟಾದರೂ ಕೊನೆಗೆ ರಕ್ಷಾ ರಾಮಯ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ನಂತರ ರಾಜೀ ಸಂಧಾನ ನಡೆಸಿ ನನ್ನ ಮಗನಿಗೆ ಒಂದು ವರ್ಷ ಅಧಿಕಾರ, ಉಳಿದ ಎರಡು ವರ್ಷ ಸೋತವರಿಗೆ ಅಧಿಕಾರ ಕೊಡಿಸಿದ್ದಾರೆ. ಸೋತ ವ್ಯಕ್ತಿಯಲ್ಲಿ ಅವರು ಅದೇನು ಗುಣ ಕಂಡಿದ್ದಾರೋ ಗೊತ್ತಿಲ್ಲ. ಇಷ್ಟಾದರೂ ನಾವು ಬಂಢತನ ತೋರಲಿಲ್ಲ. ಗಡುವಿಗಿಂತ ಮೂರು ದಿನ ಮುನ್ನ ರಕ್ಷಾ ರಾಮಯ್ಯ ರಾಜೀನಾಮೆ ನೀಡಿದರು. ಇದಾದ ಬಳಿಕ ಆರು ತಿಂಗಳು ಮಗನಿಗೆ ಯಾವುದೇ ಅಧಿಕಾರ ಕೊಡಲಿಲ್ಲ. ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ದೊರೆಯದೇ ತಾವು ಅಸಮಾಧಾನಗೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಏಕಾಏಕಿ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಯಿತು. ಇದನ್ನು ಅವರು ಕಾಣಿಕೆ ರೀತಿಯಲ್ಲಿ ಕೊಟ್ಟಿದ್ದಾರೆ. ಆದರೆ ನಾವು ಕಾಣಿಕೆ ಸ್ವೀಕರಿಸುವ ಗುಂಪಿಗೆ ಸೇರಿದವರಲ್ಲ ಎಂದು ಎಂ.ಆರ್. ಸೀತಾರಾಂ ಅಸಮಾಧಾನ ವ್ಯಕ್ತಪಡಿಸಿದರು.

1999 ರಲ್ಲಿ ತಾವು ಮಾಜಿ ಸಚಿವ ರಘುಪತಿ ವಿರುದ್ಧ ಮಲ್ಲೇಶ್ವರಂನಲ್ಲಿ 11 ಸಾವಿರ ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಕಾರಣನಾದೆ. ಸತತ ಎರಡು ಬಾರಿ ಗೆದ್ದಿದ್ದ ತಮಗೆ 2008 ರಲ್ಲಿ ವಿಶ್ವಾಸ ದ್ರೋಹವಾಯಿತು. ತಮ್ಮನ್ನು ಪಕ್ಷದಲ್ಲಿದ್ದವರೇ ಸೋಲಿಸಿದರು. ಮರು ಚುನಾವಣೆಯಲ್ಲಿ ಹಿರಿಯ ನಾಯಕರೊಬ್ಬರ ಸಹೋದರನಿಗೆ ಟಿಕೆಟ್ ಕೊಟ್ಟರು. ತಮಗೆ 2018 ರಲ್ಲಿ ಚುನಾವಣೆ ಘೋಷಣೆಯಾದ ನಂತರ ಮಲ್ಲೇಶ್ವರಂ ನಿಂದ ತಮಗೆ ಟಿಕೆಟ್ ಕೊಡುವುದಾಗಿ ಪ್ರಕಟಿಸಿದರು. ಆದರೆ ಹತ್ತು ವರ್ಷ ಕ್ಷೇತ್ರದ ಜನರಿಂದ ದೂರ ಇದ್ದ ತಮಗೆ ಏಕಾಏಕಿ ಮತದಾರರನ್ನು ಎದುರಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದೆ. ಇದರಲ್ಲಿ ತಮ್ಮ ಯಾವುದೇ ತಪ್ಪಿಲ್ಲ ಎಂದು ಹೇಳಿದರು.

2009 ರ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವಂತೆ ನೀಡಿದ ಸೂಚನೆಯಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇ. ಆದರೆ ಕೊನೆಗೆ ವೀರಪ್ಪ ಮೊಯ್ಲಿ ಅವರಿಗೆ ಬಿ ಫಾರಂ ಕೊಟ್ಟರು. 2012 ರಲ್ಲಿ ವಿಧಾನಪರಿಷತ್ತಿನ ಚುನಾವಣೆಯಲ್ಲಿ ತಮ್ಮನ್ನು ನಾಲ್ಕನೇ ಅಭ್ಯರ್ಥಿಯಾಗಿ ಘೋಷಿಸಿದರು. ಆದರೂ ಎಲ್ಲರಿಗಿಂತ ಹೆಚ್ಚು ಮತಗಳನ್ನು ಗಳಿಸಿ ಗೆಲುವು ಸಾಧಿಸಿದೆ. ಪಕ್ಷ ನೀಡಿದ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ಯಶಸ್ವಿಯಾದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ತಮ್ಮ ಸಮುದಾಯದ ಮನೋಹರ ತಾಹಶೀಲ್ದಾರ್ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರಲ್ಲಿದ್ದ ಸಚಿವ ಸ್ಥಾನವನ್ನು ತಮಗೆ ನೀಡಿದರು. ಎರಡು ವರ್ಷ ಸಚಿವನಾಗಿ ನಾಲ್ಕು ಸಾವಿರ ಕೋಟಿ ಅನುದಾನ ತಂದುಕೊಟ್ಟಿದ್ದೇನೆ. ಕೊಡಗಿನಲ್ಲಿ ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಬುಡಕಟ್ಟು ಜನರ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಿ, ಭ್ರಷ್ಟಾಚಾರ ರಹಿತವಾಗಿ ಆಡಳಿತ ನೀಡಿದ ತೃಪ್ತಿ ತಮಗಿದೆ ಎಂದರು.

ಇದೀಗ ಪಕ್ಷದ ಚುಕ್ಕಾಣಿ ಹಿಡಿದಿರುವವರು ಹಾಗೂ ತಾವು ಸಮಕಾಲೀನರು. ಅವರಿಗೆ ಪಕ್ಷದಲ್ಲಿ 39 ವರ್ಷ, ತಮಗೆ 38 ವರ್ಷಗಳ ಅನುಭವವಿದೆ. ಖಜಾಂಚಿಯಾಗಿ ಪಕ್ಷದ ಕಚೇರಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಗೆಲುವಿಗಾಗಿ ಶ್ರಮಿಸಿದ್ದೇನೆ. ಮೇಲ್ಮನೆ ಚುನಾವಣೆಯಲ್ಲಿ ಟಿಕೆಟ್ ದೊರೆಯದ ಕಾರಣ ತಮಗೆ ಅಸಮಾಧಾನವಾಗಿದೆ. ಇಷ್ಟಾದರೂ ಈ ತನಕ ಪಕ್ಷದ ಚುಕ್ಕಾಣಿ ಹಿಡಿದವರು ತಮ್ಮ ಜೊತೆ ಸೌಜನ್ಯಕ್ಕೂ ಮಾತನಾಡಿಲ್ಲ. ಇಲ್ಲಿಯತನಕ ಸೌಮ್ಯವಾಗಿಯೇ ನಡೆದುಕೊಂಡಿದ್ದೇನೆ. ಇನ್ನು ಮುಂದೆ ಕಠಿಣವಾಗಿರಬೇಕು ಎಂದುಕೊಂಡಿದ್ದೇನೆ ಎಂದು ಎಂ.ಆರ್. ಸೀತಾರಾಂ ಹೇಳಿದರು.

ಭದ್ರಾವತಿ ಶಾಸಕ ಬಿ,ಕೆ. ಸಂಗಮೇಶ್ ಮಾತನಾಡಿ, ಇತ್ತೀಚಿನ ಬೆಳವಣಿಗೆಗಳು ಎಂ.ಆರ್. ಸೀತಾರಾಂ ಅವರಿಗೆ ಅಸಮಾಧಾನ ತಂದಿದ್ದು, ಇದನ್ನು ಸರಿಪಡಿಸಬೇಕು. ಸೀತಾರಾಂ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಆಗಿರುವ ಲೋಪಗಳಿಗೆ ಹೈಕಮಾಂಡ್ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಹಿಂದುಳಿದ ವರ್ಗದ ಮುಖಂಡ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀ ನಾರಾಯಣ್ ಮಾತನಾಡಿ, ರಾಜಕೀಯವಾಗಿ ಹಿಂದುಳಿದ ವರ್ಗದ ಮುಖಂಡರಿಗೆ ಅನ್ಯಾಯವಾಗಬಾರದು. ಆದರೆ ಇಲ್ಲಿ ಪಿತೂರಿ ರಾಜಕಾರಣ ಕೆಲಸ ಮಾಡಿದೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಇದರ ಪ್ರತಿಫಲವನ್ನು ಕಾಂಗ್ರೆಸ್ ಅನುಭವಿಸಬೇಕಾಗುತ್ತದೆ. ಪಕ್ಷ ಮತ್ತಷ್ಟು ಅಧೋಗತಿಗಿಳಿಯಲಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಬಲಿಜ ಜನಾಂಗದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಲಿಜ ಸಮುದಾಯ ನಿರ್ಣಾಯಕವಾಗಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದೇ ಧೋರಣೆ ಮುಂದುವರೆಸಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನ ಈಗಿನ ಸಂಖ್ಯಾಬಲವನ್ನು ಅರ್ದದಷ್ಟು ಕಡಿತಗೊಳಿಸುತ್ತೇವೆ ಎಂದು ಹೇಳಿದರು.

ಮಾಜಿ ಮೇಯರ್ ಜಿ. ಹುಚ್ಚಪ್ಪ ಮಾತನಾಡಿ, ಎಂ.ಆರ್. ಸೀತಾರಾಂ ಅವರು ಯಾವುದೇ ಕಾರಣಕ್ಕೂ ಪಕ್ಷ ತೊರೆಯಬಾರದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈ ಸಂಬಂಧ ಈಗಾಗಲೇ ಚರ್ಚಿಸಿದ್ದು. ಹಿಂದುಳಿದ ಸಮುದಾಯದ ನಾಯಕನನ್ನು ಕಳೆದುಕೊಳ್ಳಲು ಅವರು ಬಯಸುವುದಿಲ್ಲ. ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ನೀಡಲಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫೀಉಲ್ಲಾ ಮಾತನಾಡಿ, ಸೀತಾರಾಂ ಅವರಿಗೆ ರಾಜಕೀಯವಾಗಿ ತೊಂದರೆಯಾಗಿದ್ದು, ಅವರ ಜೊತೆ ಪಕ್ಷದ ಮುಖಂಡರು ಚರ್ಚಿಸಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯ ಉಜ್ವಲವಾಗಿದ್ದು, ನೀವು ಪಕ್ಷದಲ್ಲೇ ಉಳಿಯಬೇಕು ಎಂದು ಹೇಳಿದರು.

ಮಾಜಿ ಶಾಸಕಿ ಅನಸೂಯಮ್ಮ, ಕಾಂಗ್ರೆಸ್ ನ ಹಿರಿಯ ಮುಖಂಡರಾಧ ಎಲ್.ಎನ್. ಮೂರ್ತಿ, ಹೆಜ್ಜೆ ವೆಂಕಟೇಶ್ ಮತ್ತಿತರರು ಮಾತನಾಡಿದರು. ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಯುವ ಮುಖಂಡ ಸುಂದರ್ ರಾಂ ಮತ್ತಿತರು ಉಪಸ್ಥಿತರಿದ್ದರು.

Follow Us:
Download App:
  • android
  • ios