ಡಿಕೆ ಶಿವಕುಮಾರ್ಗೆ ಬಿಗ್ ರಿಲೀಫ್, ಬಂಧನ ಭೀತಿಯಿಂದ ಬಚಾವ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ಬಂಧನದ ಭೀತಿ ಎದುರಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರಾಳರಾಗಿದ್ದಾರೆ. ಇದರಿಂದ ಡಿಕೆಶಿ ಬಂಧನದ ಭೀತಿಯಿಂದ ಬಚಾವ್ ಆಗಿದ್ದಾರೆ.
ಬೆಂಗಳೂರು, (ಆಗಸ್ಟ್.02): ಅಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಡಿಕೆ ಶಿವಕುಮಾರ್ಗೆ ಇಂದು (ಮಂಗಳವಾರ) ದೆಹಲಿ ವಿಶೇಷ ನ್ಯಾಯಾಲಯ ಜಾಮೀನು ವಿಸ್ತರಣೆ ಮಾಡಿದೆ.
ಇದರಿಂದ ಡಿ.ಕೆ.ಶಿವಕುಮಾರ ಈಗ ಬಂಧನ ಭೀತಿಯಿಂದ ಬಚಾವ್ ಆಗಿದ್ದಾರೆ.
ಇತ್ತೀಚೆಗೆ ಜಾರಿ ನಿರ್ದೇಶನಾಲಯ ಡಿಕೆಶಿ ಮತ್ತು ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಸಾಕ್ಷ್ಯಗಳನ್ನು ತಿರುಚುವಂತಿಲ್ಲ, ದೇಶದಿಂದ ಹೊರಗೆ ಹೋಗುವಂತೆ ಇಲ್ಲ, 1 ಲಕ್ಷ ಶ್ಯೂರಿಟಿ ಈ ಮೂರು ಷರತ್ತುಗಳೊಂದಿಗೆ ಜಾಮೀನು ವಿಸ್ತರಣೆ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಮತ್ತು ಅವರ ಸಹಚರರನ್ನು ಇ.ಡಿ 2018ರಲ್ಲಿ ಬಂಧಿಸಿತ್ತು. ಅನಾರೋಗ್ಯ ಕಾರಣ ನೀಡಿ ಡಿಕೆ ಶಿವಕುಮಾರ್ ಹಾಗೂ ಸಹ ಆರೋಪಿಗಳು ತಾತ್ಕಾಲಿಕ ಜಾಮೀನು ಪಡೆದಿದ್ದರು.
ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದು ವಿರುದ್ಧದ ಚಾರ್ಜ್ಶೀಟ್ಗೆ ತಡೆ
ಜಾಮೀನು ವಿಸ್ತರಣೆ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಕಾಸ್ ಧುಲ್ ಅವರು ಜುಲೈ 30 ರಂದು ಎರಡೂ ಕಡೆಯ ವಿಚಾರಣೆಯ ನಂತರ ಆದೇಶವನ್ನು ಕಾಯ್ದಿರಿಸಿದ್ದರು. ಖುದ್ದು ಉಪಸ್ಥಿತಿಗೆ ಸೂಚಿಸಿದ್ದರು. ಹೀಗಾಗಿ ಬಂಧನ ಸಾಧ್ಯತೆ ಇದೆ ಎಂಬ ಚರ್ಚೆ ಪ್ರಾರಂಭವಾಗಿತ್ತು. ಆದರೆ ಶಿವಕುಮಾರ್ ಮತ್ತು ಉದ್ಯಮಿ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್ಪೋರ್ಟ್ ಮಾಲೀಕ ಸುನೀಲ ಕುಮಾರ್ ಶರ್ಮಾ, ಕರ್ನಾಟಕ ಭವನದ ಉದ್ಯೋಗಿ ಆಂಜನೇಯ ಮತ್ತು ರಾಜೇಂದ್ರ ಸೇರಿದಂತೆ ಇತರ ಆರೋಪಿಗಳ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿವರ್ತಿಸಲಾಗಿದೆ.
ಹೀಗಾಗಿ ಬಂಧನ ಭೀತಿಯಿಂದ ಶಿವಕುಮಾರ್ ಬಚಾವ್ ಆಗಿದ್ದಾರೆ. ಒಂದೆಡೆ ಪಕ್ಷದ ಒಳ ರಾಜಕಾರಣ, ಇನ್ನೊಂದೆಡೆ ವ್ಯಾಜ್ಯದಿಂದ ಬಳಲಿದ್ದ ಡಿಕೆ ಶಿವಕುಮಾರ್ ಈಗ ನಿರಾಳರಾಗಿದ್ದಾರೆ. ದೇಶ ಬಿಟ್ಟು ಹೋಗಬಾರದು, ಸಾಕ್ಷ್ಯ ನಾಶ ಮಾಡಬಾರದು ಹಾಗೂ ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ್ದ ಇಡಿ ನ್ಯಾಯಾಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಿತ್ತು. ಈ ಹಿನ್ನಲೆ ಡಿ.ಕೆ ಶಿವಕುಮಾರ್ ತಮ್ಮ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿಗಣಿಸಲು ಮನವಿ ಮಾಡಿದ್ದರು. ಅದೇ ವೇಳೆ ಪ್ರಕರಣದ ಇತರೆ ಆರೋಪಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ಶನಿವಾರ ಈ ಎಲ್ಲ ಅರ್ಜಿಗಳನ್ನು ನ್ಯಾ ವಿಕಾಸ್ ದುಲ್ ವಿಚಾರಣೆ ನಡೆಸಿದ್ದು, ಇತರ ಆರೋಪಿಗಳಿಗೆ ಜಾಮೀನು ನೀಡದಂತೆ ಇಡಿ ಪರ ವಕೀಲರು ಮನವಿ ಮಾಡಿದ್ದರು.