Karnataka Politics: ಕಾಂಗ್ರೆಸ್ಗೆ ಗುಡ್ ಬೈ ಹೇಳುವ ಸುಳಿವು ನೀಡಿದ ಸಿಎಂ ಇಬ್ರಾಹಿಂ!
*ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ತಬ್ಬಲಿಯಾಗಿದ್ದಾರೆ
*ಬಾದಾಮಿಗೆ ಕರೆದೊಯ್ದು ನಾನೇ ನಾಮಿನೇಷನ್ ಮಾಡಿಸಿದ್ದೆ
*ಕಾಂಗ್ರೆಸನ್ನು ನಾನು ಬಿಟ್ಟು ನಾನು ಹೋರ ಹೋಗಿದ್ದೇನೆ: ಸಿಎಂ ಇಬ್ರಾಹಿ
ಬೆಂಗಳೂರು (ಜ. 27): ಆಡಳಿತಾರೂಢ ಬಿಜೆಪಿ(BJP) ಪಕ್ಷದ ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿಕೆ ರಾಜ್ಯರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಎಂಎಲ್ಸಿ ಸಿಎಂ ಇಬ್ರಾಹಿಂ (CM Ibrahim) ಕಾಂಗ್ರೆಸ್ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದಾರೆ. "ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ತಬ್ಬಲಿಯಾಗಿದ್ದಾರೆ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಅಂದಾಗ ಅವರನ್ನ ಬಾದಾಮಿಗೆ ಕರೆದೊಯ್ದು ನಾನೇ ನಾಮಿನೇಷನ್ ಮಾಡಿಸಿದ್ದೆ. ಬಾದಾಮಿಯಲ್ಲಿ ಗೆದ್ದಿದ್ದರಿಂದ ರಾಜಕೀಯವಾಗಿ ಅವರು ಉಳಿಯಲು ಸಹಾಯವಾಯ್ತು" ಎಂದು ಹೇಳಿದ್ದಾರೆ.
"ನಾನು ಕಾಂಗ್ರೆಸ್ ಬೇಡ ಎಂಬ ತೀರ್ಮಾನ ಮಾಡಿದ ಮೇಲೆ ಕಾಂಗ್ರೆಸ್ನಲ್ಲಿ ನಾನೇಕೆ ಇರಬೇಕು. ಕಾಂಗ್ರೆಸನ್ನು ನಾನು ಬಿಟ್ಟು ನಾನು ಹೋರ ಹೋಗಿದ್ದೇನೆ. ಕಾಂಗ್ರೆಸ್ ಈಗ ನನಗೆ ಪರಸ್ತ್ರೀ! ಪರಸ್ತ್ರೀ ಬಗ್ಗೆ ಮಾತಾಡಬಾರದು" ಎಂದು ಇಬ್ರಾಹಿಂ ಹೇಳಿದ್ದಾರೆ. ಒಂದು ಕಡೆ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ, ಇನ್ನೊಂದು ಕಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು (HD Devegowda) ಹೊಗಳಲು ಆರಂಭಿಸಿದ್ದ ಸಿ.ಎಂ. ಇಬ್ರಾಹಿಂ ಬಹುತೇಕ ಜೆಡಿಎಸ್ ಸೇರಲಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು. ಈ ಬೆನ್ನಲ್ಲೇ ಸಿಎಂ ಇಬ್ರಾಹಿಂ ಅವರು ಡಿಸೆಂಬರ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಹತ್ವದ ಮಾತುಕತೆ ಕೂಡ ನಡೆಸಿದ್ದರು.
ಇದನ್ನೂ ಓದಿ: ಸಿದ್ದು ಯಾವ ಪಕ್ಷದ ಬಾಲಂಗೋಚಿ: ಬಿಎಸ್ವೈರಿಂದ ಪಡೆದ ಹಣಕ್ಕೆ ಇನ್ನೂ ಉತ್ತರವಿಲ್ಲ: HDK
ಭೀಕ್ಷೆ ಬೇಡುವ ಸ್ಥಿತಿ ಬಂದಿದೆ: ಆದರೆ ಈಗ ಕಾಂಗ್ರೆಸ್ ಪರಿಷತ್ ಸ್ಥಾನ ನನಗೆ ಬೇಡ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. "ಇನ್ನೂ ಮೂರು ವರ್ಷ ಪರಿಷತ್ ಸ್ಥಾನ ಇದೆ. ಪರಿಷತ್ ಸದಸ್ಯತ್ವ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ದೇವೇಗೌಡರು ಅಧಿಕಾರದಲ್ಲಿದ್ದಾಗ ಕರ್ನಾಟಕ ರಾಜ್ಯಕ್ಕೆ ಗೌರವ ಇತ್ತು. ಈಗ ಬಿಜೆಪಿ ಸಂಸದರು ಇಷ್ಟೊಂದು ಸಂಖ್ಯೆಯಲ್ಲಿದ್ರು ಮೋದಿ ಎದುರು ಹೋಗಿ ಭೀಕ್ಷೆ ಬೇಡುವ ಸ್ಥಿತಿ ಬಂದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಶಕ್ತಿ ರಾಜ್ಯದಲ್ಲಿ ಬೆಳೆಯಬೇಕು: "ಒಬ್ಬರಿಗೂ ಗಂಡಸ್ತನ ಇಲ್ಲ. ಧೈರ್ಯವಾಗಿ ಮಾತಾಡಲ್ಲ. ಕೇಂದ್ರ ಸರ್ಕಾರ ನಮ್ಮ ಜಿಎಸ್ ಟಿ ಹಣವನ್ನ ನಮ್ಮ ರಾಜ್ಯಕ್ಕೆ ಕೊಡಲ್ಲ. ಕರ್ನಾಟಕ ಗತವೈಭವ ಮರುಕಳಿಸುವಂತೆ ಪ್ರಾದೇಶಿಕ ಶಕ್ತಿ ನಮ್ಮ ರಾಜ್ಯದಲ್ಲಿ ಬೆಳೆಯಬೇಕು. ರಾಜ್ಯ ಸಂಪುಟದಲ್ಲಿ ಬದಲಾವಣೆ ಆಗುತ್ತೆ. ರಾಜ್ಯದಲ್ಲಿ ಬಿಜೆಪಿ ಮುಗಿದ ಅದ್ಯಾಯ. ಕ್ಯಾಬಿನೆಟ್ ನಲ್ಲಿ ಎಷ್ಟೇ ಬದಲಾವಣೆ ಮಾಡಿದ್ರೂ, ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ವೈನ್ ತೆಗೆದು ಹಾಕಿದ ಹಾಗೆ. ಕಾಲಯ ತಸ್ಮೈ ನಮಃ ನಾನು ಯಾವ ಪಕ್ಷ ಸೇರ್ತೇನೆ ಅನ್ನೋದನ್ನ ಮುಂದೆ ನೋಡಿ! ಜೋಳಿಗೆ ಹಿಡ್ಕೊಂಡು ಹೋಗ್ತಿರುವವರು ನಾವು" ಎಂದು ಇಬ್ರಾಹಿಂ ಹೇಳಿದ್ದಾರೆ.
ಇದನ್ನೂ ಓದಿ: News Hour ಜೆಡಿಎಸ್ ಇಲ್ಲದೆ 2023ರಲ್ಲಿ ಸರ್ಕಾರ ರಚನೆ ಸಾಧ್ಯವಿಲ್ಲ, ಕಿಂಗ್ಮೇಕರ್ ಹೇಳಿಕೆ ಕೊಟ್ಟ HDK!
ಪಕ್ಷಕ್ಕೆ ಬಂದರೆ ಸ್ವಾಗತ: ಇನ್ನೂ ಈ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಮ್ಮ ಪಕ್ಷ ಹಾಗೂ ದೇವೇಗೌಡರ ಏಳು ಬೀಳುವಿನಲ್ಲಿಯೂ ಇಬ್ರಾಹಿಂ ಜೊತೆಯಾಗಿದ್ದರು ಎಂದು ಹೇಳಿದ್ದಾರೆ. "ಇಬ್ರಾಹಿಂ ಅವರು ಹಿರಿಯರು ಇದ್ದಾರೆ. ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಕೇಳಿ ಬಂದಿತ್ತು. ವಿರೋಧ ಪಕ್ಷದ ನಾಯಕರ ಸ್ಥಾನ ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ ಅಲ್ಲೇ ಅಂದಿದ್ದೆ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದಿದ್ದೆ. ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ. . ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ. ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೀನೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ" ಎಂದು ಹೇಳಿದ್ದಾರೆ.
ನಿರಂತರ ಪಕ್ಷ ಸಂಘಟನೆ: ಇನ್ನು ಜೆಡಿಎಸ್ ಇಲ್ಲದೆ 2023ರಲ್ಲಿ ಸರ್ಕಾರ ರಚನೆ ಸಾಧ್ಯವಿಲ್ಲ, ಎಂಬ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಎಚ್ಡಿಕೆ, ಹೇಳಿಕೆ ತಪ್ಪು ಗ್ರಹಿಕೆಯಿಂದ ಕೆಲವು ಮಾದ್ಯಮಗಳಲ್ಲಿ ಸುದ್ದಿ ಆಗಿದೆ ಎದು ಹೇಳಿದ್ದಾರೆ. "ನಮ್ಮ ಪಕ್ಷದ ಸಂಘಟನೆ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿದ್ದೆ. 2023 ಕ್ಕೆ ನಮ್ಮ ಶಕ್ತಿ ಸಾಬೀತು ಮಾಡ್ತೀವಿ ಅಂತಾ ಹೇಳಿದ್ದೆ. ಜೆಡಿಎಸ್ ಅನ್ನು ಬಿಟ್ಟು ಯಾರೂ ಏನೂ ಮಾಡಲು ಆಗಲ್ಲ ಅಂತಾ ಹೇಳಿದ್ದೆ.ಇದನ್ನು ಕೆಲವು ಮಾದ್ಯಮ ಗಳು ತಪ್ಪು ಗ್ರಹಿಕೆ ಮಾಡಿಕೊಂಡಿವೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
"ಚುನಾವಣೆಗೆ ಉಳಿದಿರುವ ಈ ಸಮಯದಲ್ಲಿ ನಿರಂತರ ಪಕ್ಷ ಸಂಘಟನೆ ಮಾಡುತ್ತೇವೆ. ಮಿಷನ್123 ಯಲ್ಲಿ ಯಾವುದೇ ಬದಲಾವಣೆ ಇಲ್ಲ.ಕೋವಿಡ್ ಕಾರಣದಿಂದ ನಾನು ಇಲ್ಲಿ ವರೆಗೆ ಪಕ್ಷ ಸಂಘಟನೆ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಈಗಾಗಲೇ ಜಲಧಾರೆ,ಪಂಚರತ್ನ ಕಾರ್ಯಕ್ರಮ ಗಳಂತಹವು ಜನರಿಗೆ ಅವಶ್ಯಕತೆ ಇದೆ. ಇದೆಲ್ಲದರ ಬಗ್ಗೆ ಸಿದ್ದತೆ ಗಳನ್ನು ಮಾಡಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಹೋಗಲ್ಲ. ಹಿಂದೆಯೂ ಹೋಗಿಲ್ಲ, ಮುಂದೆ ಕೂಡಾ ಹೋಗಲ್ಲ" ಎಂದು ಎಚ್ಡಿಕೆ ತಿಳಿಸಿದ್ದಾರೆ.