ಕರ್ನಾಟಕ ಇಡೀ ದೇಶದಲ್ಲೇ ಮಾದರಿಯಾಗಿತ್ತು. ಆದರೆ ಇಂದು ಶಾಸಕರು ಬ್ರೋಕರ್‌ಗಳಾಗಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಸಿಕ್ಕವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಆದರೆ ಅದರ ವಿರುದ್ಧ ಧ್ವನಿ ಎತ್ತಿದ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು. 

ಕೊಪ್ಪಳ (ಜ.18): ಕರ್ನಾಟಕ ಇಡೀ ದೇಶದಲ್ಲೇ ಮಾದರಿಯಾಗಿತ್ತು. ಆದರೆ ಇಂದು ಶಾಸಕರು ಬ್ರೋಕರ್‌ಗಳಾಗಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಸಿಕ್ಕವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಆದರೆ ಅದರ ವಿರುದ್ಧ ಧ್ವನಿ ಎತ್ತಿದ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು. ಇದು ದೇಶಕ್ಕೆ ಕಪ್ಪು ಚುಕ್ಕೆ, ಇದನ್ನು ಇಡೀ ದೇಶದ ಜನ ನೋಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೊಪ್ಪಳದಲ್ಲಿ ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮಿಗಳು ಮಾಡುವ ಮಹಾನ್‌ ಕಾರ್ಯಕ್ಕೆ ನಾನು ಇಲ್ಲಿನಿಂದಲೇ ಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ ಎಂದು ತಮ್ಮ ಮಾತು ಆರಂಭಿಸಿ, ಪ್ರಜೆಗಳ ಮನದಾಳದ ಮಾತು ತಿಳಿದುಕೊಂಡು, ಅವರಿಗೆ ಸ್ಪಂದಿಸಲು ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ ಎಂದರು.

Add Asianetnews Kannada as a Preferred SourcegooglePreferred

ಭರಪೂರ ಘೋಷಣೆ: ನೂರು ದಿನದಲ್ಲಿ ಚುನಾವಣೆ ಬರುತ್ತದೆ. ಇದು ನಮ್ಮ ಪರೀಕ್ಷೆ ಯ ಕಾಲ. ಇದಕ್ಕೆ ಮತ ನೀಡುವ ಅಧಿಕಾರ ನಿಮ್ಮ ಕೈಯಲ್ಲಿ ಇದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತಿವರ್ಷ ಐದು ಸಾವಿರ ಕೋಟಿ ರುಪಾಯಿ ನೀಡುತ್ತೇವೆ. ಐವತ್ತು ಸಾವಿರ ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ ಮಾಡುತ್ತೇವೆ. ಒಂದು ಲಕ್ಷ ಖಾಸಗಿ ಉದ್ಯೋಗ ನೀಡುತ್ತೇವೆ. ನೀರಾವರಿ ಯೋಜನೆ ಹೆಚ್ಚಳ ಮಾಡುತ್ತೇವೆ ಎಂದರು. 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತದೆ. ಪ್ರಿಯಾಂಕಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳಿಗೆ ಎರಡು ಸಾವಿರ ರುಪಾಯಿ ನೀಡಲು ನಿರ್ಧರಿಸಿದ್ದೇವೆ. ಇದಕ್ಕೆ ಅರ್ಜಿಯನ್ನೂ ಈಗಲೇ ತೆಗೆದುಕೊಳ್ಳುತ್ತೇವೆ ಎಂದರು.

ಗೃಹ ಲಕ್ಷ್ಮೀ ಯೋಜನೆಗೆ ನಾನು, ಸಿದ್ದು ಗ್ಯಾರಂಟಿ: ಡಿ.ಕೆ.ಶಿವಕುಮಾರ್‌

ಕಟೀಲ್‌ ಮಾತಿಗೆ ಏಟು: ಜನರ ಬದುಕಿನ ಬಗ್ಗೆ ಮಾತನಾಡುತ್ತೇವೆ. ಆದರೆ ಬಿಜೆಪಿಯವರು ಜನರಿಗೆ ಸ್ಪಂದಿಸುವ ಮನೋಭಾವದವರಲ್ಲ. ಬಿಜೆಪಿ ರಾಜ್ಯ ಅಧ್ಯಕ್ಷ ಕಟೀಲ್‌ ಅವರು ಅಭಿವೃದ್ಧಿ ಬಿಡಿ, ಜಿಹಾದ್‌ ಬಗ್ಗೆ ಮಾತನಾಡಿ ಅನ್ನುತ್ತಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ತಿವಿದರು.

ಬಿಜೆಪಿ ಪಾಪದ ಪುರಾಣ: ಕೋವಿಡ್‌ನಲ್ಲಿ ಬಿಜೆಪಿಯವರು ಲೂಟಿ ಹೊಡೆದರು. ಬೆಡ್‌ ಸೇರಿದಂತೆ ಎಲ್ಲದರಲ್ಲಿಯೂ ಲೂಟಿ ಮಾಡಿದರು. ಈ ಎಲ್ಲ ಪಾಪದ ಕಾರ್ಯವನ್ನು ನಾವು ಬಯಲಿಗೆ ಎಳೆಯುತ್ತಿದ್ದೇವೆ. ಕೆಂಪಣ್ಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಇದುವರೆಗೂ ಉತ್ತರ ನೀಡಿಲ್ಲ. ಭ್ರಷ್ಟಾಚಾರ ಬಯಲಿಗೆ ಎಳೆದ ಅವರ ಮೇಲೆಯೇ ಕೇಸ್‌ ಹಾಕಿದರು. ಬಿಜೆಪಿಯ ಪಾಪದ ಪುರಾಣವನ್ನು ಪಾಂಪ್ಲೆಂಟ್‌ ಮೂಲಕ ಮನೆ ಮನೆಗೆ ಹಂಚುತ್ತೇವೆ ಎಂದರು. ಕೊಪ್ಪಳ ಎಂದರೆ ನನಗೆ ರಾಮುಲು ಹಾಗೂ ಎಂ.ಬಿ. ದಿವಟರ ಅವರು ನೆನಪಾಗುತ್ತಾರೆ. ನಮ್ಮ ಪಕ್ಷದ ಅಧಿಕಾರದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಮಾಡಲಾಗಿದೆ. ಈ ಬಾರಿ ಐದು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಬಂದಿದೆ. ಬಿಜೆಪಿ ದುರಾಡಳಿತ ನಡೆಸುತ್ತಿದೆ. ಇದರಿಂದ ಜನರು ರೋಷಿ ಹೋಗಿದ್ದಾರೆ. ಇದಕ್ಕೆ ಉತ್ತರ ಕೊಡಲು ಬಂದಿದ್ದೇವೆ ಎಂದರು.

ಕಾಂಗ್ರೆಸ್‌ ಗೆದ್ರೆ ಬಿಜೆಪಿ ಬಿ-ರಿಪೋರ್ಟ್‌ಗಳ ತನಿಖೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 40 ಪರ್ಸೆಂಟ್‌ ಕಮಿಷನ್‌ ಸರ್ಕಾರದಲ್ಲಿ ಬರೀ ರಿಪೋರ್ಟ್‌ ಹಾಕಲಾಗುತ್ತಿದೆ. ಇದೊಂದು ಬಿ-ರಿಪೋರ್ಟ್‌ ಸರ್ಕಾರವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಯಾವ್ಯಾವ ಪ್ರಕರಣದಲ್ಲಿ ಬಿ-ರಿಪೋರ್ಟ್‌ ಹಾಕಲಾಗಿದೆ. ಅವುಗಳ ಮರು ತನಿಖೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ಹೊಸಪೇಟೆಯಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಬಸ್‌ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಹಗರಣ ಮಾಡಲಾಗಿದೆ. ಅವರನ್ನು ಹಿಡಿದು ಈಗ ನಾವು ಜೈಲಿಗೆ ಕಳುಹಿಸಿದ್ದೇವೆ. ದಲ್ಲಾಳಿಗಳಾಗಿ ಕೆಲಸ ಮಾಡಿದ ಮಂತ್ರಿಗಳು ಹಾಗೂ ಶಾಸಕರು ಹೊರಗಿದ್ದಾರೆ. ಈಗಾಗಲೇ ಗುತ್ತಿಗೆದಾರರು ಶಾಸಕರು ಹಾಗೂ ಮಂತ್ರಿಗಳು ಲಂಚ ಪಡೆದಿದ್ದಾರೆಂದು ಆರೋಪಿಸಿದ್ದಾರೆ ಎಂದರು.

ಕೊರೋನಾ ಕಾಲದಲ್ಲಿ ಸರ್ಕಾರಿ ನೌಕ​ರರ ಸೇವೆ ಶ್ಲಾಘ​ನೀಯ: ಡಿ.ಕೆ.ಶಿವಕುಮಾರ್‌

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ಕೊಡುತ್ತೇವೆ. ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ಕೊಡುತ್ತೇವೆ. ಪ್ರಿಯಾಂಕಾ ಗಾಂಧಿ ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿ ಘೋಷಣೆ ಮಾಡಿದ್ದಾರೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಕ್ರಾಂತಿ ಮುಗಿದ ಮೇಲೂ ಶುಭಾಶಯಗಳ ಜಾಹೀರಾತು ಕೊಟ್ಟಿದ್ದಾರೆ ಎಂದರು. ಪ್ರಧಾನಿ ಮೋದಿಗೆ ಕೇಳಿ: ಸಚಿವ ಆರ್‌.ಅಶೋಕ್‌ ಡಿ.ಕೆ.ಶಿವಕುಮಾರ್‌ ಅವರು ಇಂಧನ ಸಚಿವರಾಗಿದ್ದಾಗ ಏನು ಮಾಡಿದ್ರು ಅಂತ ಕೇಳುತ್ತಿದ್ದಾರೆ. ನಾನು ಮಿನಿಷ್ಟರ್‌ ಇದ್ದಾಗ ಏನೂ ಮಾಡಿದೆ ಎಂಬುದನ್ನು ಪ್ರಧಾನಿ ಮೋದಿ ಅವರಿಗೆ ಕೇಳಲಿ. ಅವರೇ ಕರೆದು ಪ್ರಶಸ್ತಿ ನೀಡಿದ್ದಾರೆ. ಎಷ್ಟುದಿನ ಬದುಕಿರುತ್ತೇನೋ, ಸಾಯ್ತಿನೋ ಗೊತ್ತಿಲ್ಲ. ಆದ್ರೆ ಒಳ್ಳೆಯದು ಮಾಡ್ತೇನೆ ಎಂದರು.