ನಿರಾಣಿ ಸಿಎಂ ಆಗಬೇಕು ಎಂದು ಟೀಂ ಕಟ್ಟಿದ್ದೇ ನಾನು: ಶಾಸಕ ಗೂಳಿಹಟ್ಟಿ ಶೇಖರ್
ನಿರಾಣಿ ಸಿಎಂ ಆಗಬೇಕು ಎಂದು ಮೊದಲು ಟೀಂ ಕಟ್ಟಿದ್ದು ನಾನೇ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು. ಪಟ್ಟಣದ ಗಣೇಶ ಸದನದಲ್ಲಿ ಪಂಚಮಸಾಲಿ ಸಮಾಜದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹರಿಹರದ ಗುರುಗಳೊಂದಿಗಿನ ಬಾಂಧವ್ಯ ಇಂದಿನದ್ದಲ್ಲ.
ಹೊಸದುರ್ಗ (ನ.07): ನಿರಾಣಿ ಸಿಎಂ ಆಗಬೇಕು ಎಂದು ಮೊದಲು ಟೀಂ ಕಟ್ಟಿದ್ದು ನಾನೇ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು. ಪಟ್ಟಣದ ಗಣೇಶ ಸದನದಲ್ಲಿ ಪಂಚಮಸಾಲಿ ಸಮಾಜದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹರಿಹರದ ಗುರುಗಳೊಂದಿಗಿನ ಬಾಂಧವ್ಯ ಇಂದಿನದ್ದಲ್ಲ . ಹಲವು ವರ್ಷಗಳಿಂದಲೂ ಇದೆ . ಯಡಿಯೂರಪ್ಪನವರ ಬದಲಾವಣೆ ಸಂದರ್ಭದಲ್ಲಿ ಪಂಚಮಸಾಲಿಗಳನ್ನೆ ಮುಖ್ಯಮಂತ್ರಿ ಮಾಡಬೇಕು. ಅದರಲ್ಲೂ ನಿರಾಣಿಯವರನ್ನೆ ಮುಖ್ಯಮಂತ್ರಿ ಮಾಡಬೇಕು ಎಂದು ಮೊದಲು ಹೇಳಿದ್ದು ನಾನೇ.
ನಂತರ ಬೆಲ್ಲದ್ ಅವರ ಹೆಸರು ಪ್ರಸ್ತಾಪವಾಯಿತು. ಆದರೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದರೆಂದರು. ಪಂಚಮಸಾಲಿಗಳಿಗೆ ಮೀಸಲಾತಿ ವಿಚಾರವಾಗಿ ಧ್ವನಿ ಎತ್ತಲು ಯಾವಾಗಲೂ ಮುಂಚೂಣಿಯಲ್ಲಿರುತ್ತೇನೆ. ಮೀಸಲಾತಿಗಾಗಿ ಶ್ರೀಗಳು ಹೇಳಿದರೆ ನಾನು ಯಾವುದೇ ತೆರನಾದ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದ ಅವರು ತಾಲೂಕಿನಲ್ಲಿ ಬೆಲಗೂರಿನ ಪೇಟೆ ಬಸವೇಶ್ವರ ಸಮುದಾಯಭವನಕ್ಕೆ 40 ಲಕ್ಷ ಅನುದಾನವನ್ನು ಇನ್ನೊಂದು ತಿಂಗಳಲ್ಲಿ ನೀಡುತ್ತೇನೆ. ಹಾಗೆಯೇ ಸಮಾಜದ ಅಭಿವೃದ್ದಿಗಾಗಿ ಮದುರೆ ದಿಬ್ಬದಲ್ಲಿ 10 ಗುಂಟೆ ಜಮೀನನ್ನು 25 ಲಕ್ಷ ರು.ಗಳಿಗೆ ಸ್ವಂತ ಹಣದಲ್ಲಿ ಖರೀದಿ ಮಾಡಿ ಕೊಡುತ್ತೆಂದು ಭರವಸೆ ನೀಡಿದರು.
Belagavi: ಜೆಡಿಎಸ್ಗೆ 123 ಸ್ಥಾನ ಗೆಲ್ಲುವ ಗುರಿ: ಸಿ.ಎಂ.ಇಬ್ರಾಹಿಂ
ಪಂಚಮಸಾಲಿಗಳಿಗೆ ಕಾನೂನಾತ್ಮಕ ಮೀಸಲಾತಿ ಬೇಕು: ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಿದಂತೆ ಪಂಚಮಸಾಲಿಗಳಿಗೂ ಕಾನೂನಾತ್ಮಕವಾಗಿ ಮೀಸಲಾತಿ ನೀಡಬೇಕು ಎಂದು ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರು ಪೀಠದ ವಚನಾನಂದಪುರಿ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಪಟ್ಟಣದ ಗಣೇಶ ಸದನದಲ್ಲಿ ತಾಲೂಕು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದಿಂದ ಭಾನುವಾರ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಮತ್ತು ಪಂಚಮಸಾಲಿ ಮೀಸಲಾತಿ ಜನ ಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮೀಸಲಾತಿಯನ್ನು ಯಾವುದೆ ಸರ್ಕಾರ ಏಕಾಏಕೀ ನೀಡಲು ಸಾಧ್ಯವಿಲ್ಲ.
ಕಾನೂನಾತ್ಮಕವಾಗಿ ಕುಲಶಾಸ್ತ್ರ ಅಧ್ಯಯನವಾಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಲಾಗಿದೆ ಇನ್ನೆರೆಡು ಜಿಲ್ಲೆಗಳಲ್ಲಿ ಅಧ್ಯಯನ ಮಾಡಲಾಗುತ್ತಿದ್ದು ಅದಾದ ನಂತರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು. ಪಂಚಮಸಾಲಿ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಸಾಕಷ್ಟುಮಂದಿ ಪ್ರತಿಭಾನ್ವಿತರಿದ್ದಾರೆ . ಆದರೆ ಮೀಸಲಾತಿಯ ಅಲಭ್ಯತೆ ಪರಿಣಾಮ ಉನ್ನತ ಹುದ್ದೆಗಳಿಂದ ವಂಚಿತರಾಗಿದ್ದಾರೆ. ರಾಜಕೀಯ, ಆರ್ಥಿಕ, ಧಾರ್ಮಿಕ, ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ .ಈ ನಿಟ್ಟಿನಲ್ಲಿ ಸಮುದಾಯ ಸಂಘಟನೆಗೆ ಇಳಿಯಲಾಗಿದೆ.ಗ್ರಾಮಗಳ ದರ್ಶನ ಮಾಡುವ ಮೂಲಕ ಮೀಸಲಾತಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ 10 ಸ್ಥಾನ ಗೆಲ್ಲಲಿದೆ: ಎಚ್.ಡಿ.ಕುಮಾರಸ್ವಾಮಿ
ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಬಿ ಪಿ ಪಾಟೀಲ್ ಮಾತನಾಡಿ ಕೋವಿಡ್ ಕಾರಣಗಳಿಂದ ಕಳೆದ 2 ವರ್ಷ ಯಾವುದೇ ಚಟುವಟಿಕೆ ನಡೆದಿಲ್ಲ . ಕಳೆದ 3 ತಿಂಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಸಂಘಟಿತರಾಗಿ ಹೋರಾಟ ಮಾಡುವ ಕಾಲ ಸನ್ನಿಹಿತವಾಗಿದೆ 2ಎ ಮೀಸಲಾತಿ ಜೊತೆಗೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದರು. ತಾಲೂಕು ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಮೃತ್ಯುಂಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗೂಳೀಹಟ್ಟಿಶೇಖರ್, ರಾಜ್ಯ ಸಂಘದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟಿಲ್, ಜಿಲ್ಲಾಧ್ಯಕ್ಷ ಶಿವಪ್ರಕಾಶ್, ತಾಲೂಕು ಅಧ್ಯಕ್ಷ ದಯಾನಂದ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ವಿರುಪಾಕ್ಷಪ್ಪ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಬಸವರಾಜಪ್ಪ, ನೌಕರರ ಸಂಘದ ಅಧ್ಯಕ್ಷ ಜಗದೀಶ್ ಮತ್ತಿತರರಿದ್ದರು.