'ಪರಂ ಸೋಲಿಸಿ, ಸಿಎಂ ಪಟ್ಟತಪ್ಪಿಸಿದ್ದೇ ಸಿದ್ದು’
ಕಾಂಗ್ರೆಸ್ನಲ್ಲಿ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರನ್ನು ಸಂಪೂರ್ಣವಾಗಿ ತುಳಿದವರು ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷ ಕಟ್ಟಿಬೆಳೆಸಿದ ಹಿಂದುಳಿದ ಸಮುದಾಯದ ನಾಯಕ ಡಾ.ಜಿ.ಪರಮೇಶ್ವರ ಅವರನ್ನು ತುಳಿದಿದ್ದಾರೆ ಎಂದು ಶ್ರೀ ರಾಮುಲು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ನ.30): ಹಿಂದುಳಿದ ಸಮುದಾಯದ ಸ್ವಯಂ ಘೋಷಿತ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯದ ಮುಖಂಡರ ‘ಕತ್ತು ಸೀಳುವ’ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹರಿಹಾಯ್ದಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.
ಕಾಂಗ್ರೆಸ್ನಲ್ಲಿ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರನ್ನು ಸಂಪೂರ್ಣವಾಗಿ ತುಳಿದವರು ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷ ಕಟ್ಟಿಬೆಳೆಸಿದ ಹಿಂದುಳಿದ ಸಮುದಾಯದ ನಾಯಕ ಡಾ.ಜಿ.ಪರಮೇಶ್ವರ ಅವರನ್ನು ತುಳಿದರಲ್ಲದೆ, ಚುನಾವಣೆಯಲ್ಲಿ ಪರಮೇಶ್ವರ್ ಅವರು ಸೋಲುವಂತೆ ನೋಡಿಕೊಂಡರು. ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುವ ಅವಕಾಶವನ್ನು ಸಿದ್ದರಾಮಯ್ಯ ತಪ್ಪಿಸಿದರು ಎಂದು ದೂರಿದರು.
ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಹಲವು ನಾಯಕರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡರು. ಸಿದ್ದರಾಮಯ್ಯ ಅವರಿಂದ ಯಾರಿಗೂ ಉಪಯೋಗ ಆಗಿಲ್ಲ. ಮುಂದಿನ ದಿನಗಳಲ್ಲಿ ಅವರದ್ದೇ ಪಕ್ಷದ ನಾಯಕರು ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ಗೆ ದೂರು ನೀಡಲಿದ್ದಾರೆ ಎಂದು ಛೇಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವ ವಿ.ಸೋಮಣ್ಣ ಅವರನ್ನು ‘ಬಚ್ಚಾ’ ಎಂದು ಕರೆದಿದ್ದಾರೆ. ನಾವು ಶಾಸಕರಾಗಿ ವಿಧಾನಸಭೆಯಲ್ಲಿ ಮುಂದಿನ ಆಸನದಲ್ಲಿ ಕುಳಿತುಕೊಳ್ಳುವಾಗ ಕುಮಾರಸ್ವಾಮಿ ಅವರು ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಮುಂದೆ ಕುಳಿತುಕೊಂಡಾಗ ನಾವು ಅವರನ್ನು ‘ಬಚ್ಚಾ’ ಎಂದು ಕರೆಯಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
15 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಚಾರದ ವೇಳೆ ಮಾಜಿ ಶಾಸಕ ಎಸ್.ಮುನಿರಾಜು ಇನ್ನಿತರರಿದ್ದರು.