Asianet Suvarna News Asianet Suvarna News

ಅಡ್ಡದಾರಿಯೇ ಬಿಜೆಪಿಯವರ ಮನೆದೇವರು: ಸಚಿವ ಆರ್.ಬಿ.ತಿಮ್ಮಾಪೂರ

ಬಿಜೆಪಿಗೆ ಜನ ಬೆಂಬಲದ ಬಹುಮತ ಪಡೆದು ಸರ್ಕಾರ ರಚಿಸುವ ತಾಕತ್ತಿಲ್ಲ. ಹೀಗಾಗಿ, ಅವರು ಕುತಂತ್ರ ಮಾಡಿಯೇ ಅಧಿಕಾರಕ್ಕೆ ಬಂದಿರುವುದು ಹೆಚ್ಚು ಎಂದು ಹೇಳಿದ ಸಚಿವ ಆರ್.ಬಿ.ತಿಮ್ಮಾಪೂರ 
 

Minister RB Timmapur Slams BJP grg
Author
First Published Nov 2, 2023, 3:00 AM IST

ಬಾಗಲಕೋಟೆ(ನ.02):  ಬಿಜೆಪಿಯವರು ನೇರವಾಗಿ ಜನರಿಂದ ಆಯ್ಕೆಯಾಗಿ ಸರ್ಕಾರವನ್ನು ರಚನೆ ಮಾಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅವರು ಆಪರೇಷನ್ ಅಡ್ಡದಾರಿಯ ಮೂಲಕ ಅಧಿಕಾರ ಬಂದವರಾಗಿದ್ದಾರೆ. ಅಡ್ಡದಾರಿಯೇ ಬಿಜೆಪಿಯ ಮನೆದೇವರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಜನ ಬೆಂಬಲದ ಬಹುಮತ ಪಡೆದು ಸರ್ಕಾರ ರಚಿಸುವ ತಾಕತ್ತಿಲ್ಲ. ಹೀಗಾಗಿ, ಅವರು ಕುತಂತ್ರ ಮಾಡಿಯೇ ಅಧಿಕಾರಕ್ಕೆ ಬಂದಿರುವುದು ಹೆಚ್ಚು ಎಂದು ಹೇಳಿದರು.

ಗ್ಯಾರಂಟಿ ಈಡೇರಿಸಿದ ಬದ್ಧತೆ ಕಾಂಗ್ರೆಸ್‌ ಸರ್ಕಾರದ್ದು: ಜೆ.ಟಿ.ಪಾಟೀಲ

ಬಿಜೆಪಿಯವರು ತಮ್ಮ ಕೇಂದ್ರ ಸರ್ಕಾರದ ಬೆಂಬಲದಿಂದ ಐಟಿ, ಇಡಿ ದಾಳಿಗಳನ್ನು ನಡೆಸಿ ಆಟವಾಡುತ್ತಾರೆ. ನೆರೆಯ ಮಹಾರಾಷ್ಟ್ರದಲ್ಲಿ ಇದೇ ರೀತಿಯಾಗಿದೆ. ಆದರೆ, ನಾವು ಬಹಳ ಕ್ಲೀನ್ ಆಗಿದ್ದೇವಿ. ನಮ್ಮ ಸರ್ಕಾರ 5 ವರ್ಷ ಸಂಪೂರ್ಣ ಕಾರ್ಯನಿರ್ವಹಿಸುತ್ತದೆ ಎಂದರು.

ಬಿಜೆಪಿಗರು ನಮ್ಮ ಸರ್ಕಾರವನ್ನು ಪತನಗೊಳಿಸುವ ಭ್ರಮೆಯಲ್ಲಿ ಇದ್ದಾರೆ. ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂದು ಅವರು ಕಾಯುತ್ತಿದ್ದಾರೆ. ಆದರೆ, ರಾಜ್ಯದ ಜನ ನಮಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದಾರೆ. ನಾವು ಐದು ವರ್ಷದ ಅಧಿಕಾರ ಪೂರೈಸಲಿದ್ದೇವೆ ಎಂದರು.

ರಾಜ್ಯ ಸರ್ಕಾರ ಬಹಳ ದಿನ ಹೋಗಲ್ಲ ಎಂಬ ಯತ್ನಾಳ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪಾಪ, ಯತ್ನಾಳ ಅವರು ಹೇಳಿದ ಒಂದು ಮಾತಾದ್ರೂ ನಿಜ ಆಗಿವೆಯೇ ಎಂದು ಪ್ರಶ್ನಿಸಿದರು.

ಒಂದು ವಾರದಲ್ಲಿ ಸಿಡಿ ಸ್ಫೋಟ ಮಾಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪಾಪ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋದರು. ಅಲ್ಲಿ ಏನೂ ಸಾಧ್ಯವಾಗಲಿಲ್ಲ. ಅವರಿಗೆ ನೀಡಿದ್ದ ನೀರಾವರಿ ಖಾತೆಯನ್ನೂ ಬಿಜೆಪಿಯವರು ಕಿತ್ತುಕೊಂಡರು, ಅಧಿಕಾರದಿಂದ ವಂಚಿತರಾಗಿರುವ ರಮೇಶ್ ಜಾರಕಿಹೊಳಿ ಭ್ರಮನಿರಸನಗೊಂಡು ಏನೇನೋ ಮಾತನಾಡುತ್ತಿದ್ದಾರೆ. ಏನಾದರೂ ಮಾತನಾಡಿ ಸುದ್ದಿಯಲ್ಲಿ ಇರಬೇಕು ಎಂಬುದಷ್ಟೇ ಅವರ ಉದ್ದೇವಾಗಿದೆ. ಅವರು ನನ್ನ ಆತ್ಮೀಯ ಗೆಳೆಯ. ಡಿಸಿಎಂ ಡಿಕೆಶಿ, ರಮೇಶ್ ಜಾರಕಿಹೊಳಿ ಪರಸ್ಪರ ವಾಗ್ದಾಳಿ ಅವರ ವೈಯಕ್ತಿಕ ವಿಚಾರ ಅದನ್ನು ಕೈಬಿಡಿ ಎಂದರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಭಿಪ್ರಾಯಕ್ಕೆ ಅನುಗುಣವಾಗಿ ಸಿಎಂ ಆಯ್ಕೆ ಆಗುತ್ತದೆ. ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬಾರದು ಎಂದು ಮಾರ್ಮಿಕವಾಗಿ ತಿಳಿಸಿದರು.

ಕರಾಳ ದಿನಾಚರಣೆಗೆ ಆಕ್ಷೇಪ:

ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ತಿಮ್ಮಾಪುರ, ಅದು ಅವರಿಗೆ ಕರಾಳ ದಿಮ. ನಮಗಲ್ಲ, ನಾವು ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ. ನಮ್ಮ ನಾಡಿನಲ್ಲೇ ಇದ್ದು, ನಮ್ಮ ನಾಡ-ನುಡಿ ವಿಷಯದಲ್ಲಿ ಮರಾಠಿಗರು ಪುಂಡಾಟಿಕೆ, ಮೊಂಡಾಟ ಮಾಡುತ್ತಿರುವುದನ್ನು ನಾನು ಕನ್ನಡಿಗನಾಗಿ ಸಹಿಸಲ್ಲ ಎಂದುದಿದೇ ಸಂದರ್ಭದಲ್ಲಿ ಅವರು ಎಚ್ಚರಿಸಿದರು.

ಕಾಂಗ್ರೆಸ್‌ ಬದ್ಧತೆಯನ್ನು ಜನ ಬೆಂಬಲಿಸಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪುರ

ಬರ ಪರಿಹಾರಕ್ಕೆ ಹಣದ ತೊಂದರೆ ಇಲ್ಲ:

ಬರ ಪರಿಹಾರ ನೀಡುವವಲ್ಲಿ ವಿಳಂಬವಾಗಿದೆ ಎಂಬ ಮಾತನ್ನು ಅಲ್ಲಗಳೆದ ಸಚಿವರು,ಬರ ಪರಿಹಾರ ನೀಡಲು ಹಣದ ತೊಂದರೆ ಇಲ್ಲ, ಡಿಸಿ ಎಲ್ಲ ರೂಪುರೇಷೆ ಮಾಡುತ್ತಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.

ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ, ಪ್ರತ್ಯೇಕ ಔತಣಕೂಟಗಳ ಕುರಿತು ಮಾತನಾಡಿದ ಅವರು, ಸ್ನೇಹಿತರಾಗಿ ಯಾರಾದರೂ ಊಟಕ್ಕೆ ಕರೆಯುವುದು, ನಾವು ಅವರ ಮನೆಗೆ ಊಟಕ್ಕೆ ಹೋಗುವುದು ಸಾಮಾನ್ಯ ವಿಷಯ. ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದರು, ಕರ್ನಾಟಕಕ್ಕೆ ಬಸವನಾಡು ಎಂಬ ಹೆಸರಿಡಲು ಎಂ.ಬಿ.ಪಾಟೀಲ ಸಲಹೆ ನೀಡಿದ್ದು ಉತ್ತಮವಾಗಿದೆ. ಇದು ಒಳ್ಳೆಯ ವಿಚಾರವಾಗಿದೆ. ಈ ಬಗ್ಗೆ ಚರ್ಚೆ ಆದರೆ ತಪ್ಪೇನಿಲ್ಲ ಎಂದರು. ಈ ಸಂದರ್ಭದಲ್ಲಿ ಶಾಸಕ ಎಚ್‌.ವೈ.ಮೇಟಿ ಇದ್ದರು.

Follow Us:
Download App:
  • android
  • ios